ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ರೆಸಿಡೆನ್ಶಿಯಲ್ ಟೌನ್ಶಿಪ್
ಬೆಂಗಳೂರು, ಆಗಸ್ಟ್ 21: ಕೈಗಾರಿಕಾ ಪ್ರದೇಶಗಳಲ್ಲಿ ರೆಸಿಡೆನ್ಶಿಯಲ್ ಟೌನ್ಶಿಪ್ ನಿರ್ಮಾಣವಾಗುವ ಕುರಿತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ (Residential Townships)ಗಳ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೀಸಲಿರಿಸಿದ ಜಾಗದಲ್ಲಿ ಶಾಲಾ-ಕಾಲೇಜುಗಳು, ಆರೋಗ್ಯ ಕೇಂದ್ರ, ವಾಣಿಜ್ಯ ಸಂಕೀರ್ಣಗಳು, ಉದ್ಯಾನವನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.

ಸಮಗ್ರ ಕೈಗಾರಿಕಾ ನಿವಾಸಿಗಳ ನಗರ (ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ರೆಸಿಡೆನ್ಶಿಯಲ್ ಟೌನ್ಶಿಪ್) ಪರಿಕಲ್ಪನೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಜಾಗವನ್ನು ಶೇ.10ರಿಂದ 15ರಷ್ಟು ವಸತಿ ಬಡಾವಣೆಯ ಉದ್ದೇಶಕ್ಕಾಗಿ ಕಾಯ್ದಿರಿಸಬೇಕೆಂದು ಸೂಚಿಸಿದ್ದು, ವಾಕ್-ಟು-ವರ್ಕ್ ಎಂಬ ಪರಿಕಲ್ಪನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ.
ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಕಾರ್ಯ ನಿರ್ವಹಣಾಕಾರಿ(ಸಿಇಒ) ಎನ್.ಶಿವಶಂಕರ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಗುರುವಾರ ನಡೆಸಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ.
ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಾವು ವಾಸಿಸುವ ಪ್ರದೇಶದಿಂದ ಬಂದುಹೋಗಲು ಸಂಚಾರ ದಟ್ಟಣೆ, ವಾಹನಗಳ ಸಮಸ್ಯೆ, ಸಮಯದ ಅಭಾವ ಹೀಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕೈಗಾರಿಕೆಗಳಿದ್ದರೆ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಸೇರಿದಂತೆ ದೂರದಿಂದ ಬರಲು ಸಿಬ್ಬಂದಿಗಳಿಗೆ ಅನಾನುಕೂಲವಾಗಲಿವೆ.
ಕೈಗಾರಿಕಾ ಪ್ರದೇಶದಲ್ಲೇ ವಸತಿಗಳನ್ನು ನಿರ್ಮಿಸಿಕೊಟ್ಟರೆ ಸಮಯದ ಉಳಿತಾಯ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಕೈಗಾರಿಕಾ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ವಸತಿ ಸಮ್ಮುಚ್ಚಯಗಳು, ಆಸ್ಪತ್ರೆ, ಮಾಲ್ಗಳು, ಶಾಲಾ-ಕಾಲೇಜುಗಳು, ನೀರಿನ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಸೌಲಭ್ಯವು ಇದರಲ್ಲಿ ಸಿಗಲಿವೆ.
ಗುರುವಾರ ಬೆಂಗಳೂರಿನ ಚೇಂಬರ್ ಆಫ್ ಇಂಡಸ್ಟ್ರೀಸ್ ಮತ್ತು ಕಾಮರ್ಸ್(ಬಿಸಿಐಸಿ)ಯ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ನಿರಾಣಿ, ಶೀಘ್ರದಲ್ಲಿಯೇ ಉನ್ನತ ಕೈಗಾರಿಕೋದ್ಯಮಿಗಳಿಗೆ ಮತ್ತು ಅವರ ಸಂಘಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸುವುದಾಗಿ ಹೇಳಿದರು.
ಕೈಗಾರಿಕಾ ವಲಯ ಮತ್ತು ಹೂಡಿಕೆದಾರರ ಸ್ನೇಹಿ ವಾತಾವರಣದಲ್ಲಿ ರಾಜ್ಯವನ್ನು ಮುಂಚೂಣಿಯ ಸ್ಥಾನದಲ್ಲಿ ಕಾಯ್ದುಕೊಳ್ಳುವಲ್ಲಿ ಸರ್ಕಾರ ಬದ್ದವಾಗಿದೆ ಎಂದು ಆಶ್ವಾಸನೆ ನೀಡಿದರು. ಕೈಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುವುದಾಗಿ ಭರವಸೆ ನೀಡಿದ ನಿರಾಣಿ, ಕರ್ನಾಟಕವು ಹೂಡಿಕೆದಾರರಿಗೆ ಆದ್ಯತೆಯ ತಾಣವಾಗಿದೆ.
ಶೀಘ್ರದಲ್ಲೇ ಉನ್ನತ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲಾಗುವುದು. ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ವಿಷಯಗಳ ಬಗ್ಗೆ ಚರ್ಚಿಸುಲಾಗುವುದು.
ಮುಂದಿನ ದಿನಗಳಲ್ಲಿ ಹೂಡಿಕೆದಾರ ಸ್ನೇಹಿ ಮತ್ತು ವ್ಯಾಪಾರ ಸ್ನೇಹಿ ಹಂತಗಳೊಂದಿಗೆ ನಾವು ಮತ್ತಷ್ಟು ಪ್ರಗತಿಯನ್ನು ಖಚಿತಪಡಿಸುತ್ತೇವೆ ಎಂದು ಭರವಸೆ ಕೊಟ್ಟರು.
ಕೈಗಾರಿಕೆಗಳ ಉದ್ದೇಶಕ್ಕಾಗಿ ರಾಜ್ಯಾದ್ಯಂತ ಒಟ್ಟು 82 ಸಾವಿರಕ್ಕೂ ಅಧಿಕ ಎಕರೆ ಜಮೀನು ಇದೆ. ಇದರಲ್ಲಿ 188 ಕೈಗಾರಿಕಾ ಘಟಕಗಳಿದ್ದು, 20 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ 2ರಿಂದ 3 ವರ್ಷಗಳಲ್ಲಿ 9 ಸಾವಿರ ಎಕರೆ ಜಮೀನನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಬಾಷ್ ಲಿಮಿಟೆಡ್ ವ್ಯವಸ್ಥಾಪಕ ನಿದೇರ್ಶಕ ಹಾಗೂ ಭಾರತದ ಬಾಷ್ ಸಮೂಹ ಸಂಸ್ಥೆಯ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಹಾಗೂ ಬ್ರಿಗೇಡ್ ಎಂಟಪ್ರ್ರೈಸಸ್ ನ ವ್ಯವಸ್ಥಾಪಕ ನಿದೇರ್ಶಕ ಮತ್ತು ಅಧ್ಯಕ್ಷ ಎಂ.ಆರ್ ಜೈಶಂಕರ್, ಬಿಸಿಐಸಿ ಅಧ್ಯಕ್ಷರಾದ ಟಿ.ಆರ್.ಪರಶುರಾಮನ್ ಉಪಸ್ಥಿತರಿದ್ದರು.
ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಭೂಮಿಯ ವಿವರ
ಒಟ್ಟು ಭೂಮಿ-9,010 ಎಕರೆ
ಕೋಲಾರ ಜಿಲ್ಲೆ -ವೇಮಗಲ್ 2ನೇ ಹಂತ-511 ಎಕರೆ
ರಾಮನಗರ -ಹಾರೋಹಳ್ಳಿ 5ನೇ ಹಂತ-912 ಎಕರೆ
ಹಾವೇರಿ-ಗಣಚೂರು- 407 ಎಕರೆ
ಮಂಡ್ಯ- ಕುದುರುಗುಂಡೆ-109 ಎಕರೆ
ವಿಜಯಪುರ-ಮುಲವಾಡ-2,500 ಎಕರೆ
ತುಮಕೂರು-ಶಿರಾ 2ನೇ ಹಂತ-1,200
ಸ್ವಾಧೀನಪಡಿಸಿಕೊಂಡಿರುವ ಭೂಮಿಯ ವಿವರ
ಒಟ್ಟು ಕೈಗಾರಿಕಾ ಪ್ರದೇಶಗಳು- 188
ಒಟ್ಟು ಎಕರೆ- 81,864
ಘಟಕಗಳು- 20,972












Click it and Unblock the Notifications