ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ: ಡಿ.ಕೆ.ಶಿವಕುಮಾರ್ ರಿಯಾಕ್ಷನ್
ಬೆಂಗಳೂರು, ಮೇ 3: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ದಿನದ ರಾಜ್ಯ ಪ್ರವಾಸದಲ್ಲಿದ್ದಾರೆ. ಶಾ ಬೆಂಗಳೂರಿನಲ್ಲಿ ಇರುವಾಗಲೇ ಮುಖ್ಯಮಂತ್ರಿ ಬದಲಾವಣೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಂಬಂಧ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ನಗರದಲ್ಲಿ ಈದ್-ಉಲ್-ಫಿತರ್ ಪ್ರಾರ್ಥನೆಯ ನಂತರ ಮಾಧ್ಯಮವರ ಪ್ರಶ್ನೆಗೆ ಉತ್ತರಿಸುತ್ತಾ, "ಮುಖ್ಯಮಂತ್ರಿಯವರನ್ನು ಬದಲಾವಣೆ ಮಾಡುತ್ತಾರೋ, ಅಥವಾ ಮುಂದುವರಿಸುತ್ತಾರೋ, ಅದು ಬಿಜೆಪಿಗೆ ಸಂಬಂಧಿಸಿದ ವಿಚಾರ, ನಮಗೂ ಅದಕ್ಕೂ ಏನೂ ಸಂಬಂಧವಿಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಈ ರಾಜ್ಯದಲ್ಲಿ ಶಾಂತಿ ನೆಲೆಸಬೇಕು, ಎಲ್ಲಾ ಧರ್ಮದವರಿಗೆ ರಕ್ಷಣೆಯನ್ನು ಕೊಡುವ ಕೆಲಸವನ್ನು ಸರಕಾರ ಮಾಡಿದರೆ ಸಾಕು. ರಂಜಾನ್ ಸಂದರ್ಭದಲ್ಲಿ ನಾಡಿನಲ್ಲಿ ಶಾಂತಿ ನೆಲೆಸಲಿ, ಎಲ್ಲಾ ಧರ್ಮದವರು ಭಾತೃತ್ವದಿಂದ ಜೀವನ ನಡೆಸಲಿ"ಎಂದು ಪ್ರಾರ್ಥಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳುವ ಮೂಲಕ, ಸಿಎಂ ಬದಲಾವಣೆಯ ಸುದ್ದಿಯ ಬಗ್ಗೆ ಮಾತನಾಡಲು ಉತ್ಸುಕತೆಯನ್ನು ತೋರಲಿಲ್ಲ.

ಒಂದು ದಿನದ ಪ್ರವಾಸದಲ್ಲಿರುವ ಅಮಿತ್ ಶಾ ಅವರು ವಿವಿಧ ಕಾರ್ಯಕ್ರಮಗಳ ನಡುವೆ, ಪಕ್ಷದ ಹಲವು ಮುಖಂಡರನ್ನು ಮತ್ತು ಆಯ್ದ ಕಾರ್ಯಕರ್ತರ ಜೊತೆಗೆ ಸಂವಾದವನ್ನು ನಡೆಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ವಿಚಾರವನ್ನೂ ಈ ಸಂದರ್ಭದಲ್ಲಿ ಮಾತನಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು.
ಆದರೆ, ಮುಖ್ಯಮಂತ್ರಿ ಬದಲಾವಣೆ ಎನ್ನುವ ಗಾಳಿಸುದ್ದಿ ಈಗ ಮತ್ತೆ ಮುನ್ನಲೆಗೆ ಬಂದಿದೆ. ವಿಜಯಪುರದಲ್ಲಿ ಮಾತನಾಡುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, "ಮೇ ಹತ್ತರೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಬೊಮ್ಮಾಯಿ ಕೆಳಗೆ ಇಳಿಯಬೇಕಾಗಿ ಬರಬಹುದು"ಎನ್ನುವ ಹೇಳಿಕೆಯನ್ನು ನೀಡಿದ್ದರು.

ಅಮಿತ್ ಶಾ ಅವರ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಮಧ್ಯಾಹ್ನ ಮೂರು ಗಂಟೆಗೆ ತಾಜ್ ವೆಸ್ಟ್ ಎಂಡ್ ನಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು, ಬಿಜೆಪಿ ಮೂಲಗಳ ಪ್ರಕಾರ ಅದು ಈಗ ರದ್ದಾಗಿದೆ. ಬಿಜೆಪಿಯ ಪ್ರಮುಖರ ಸಭೆಯನ್ನು ತಾಜ್ ಹೊಟೇಲ್ ನಲ್ಲಿ ಆಯೋಜಿಸಲಾಗಿತ್ತು.












Click it and Unblock the Notifications