ಕೊರೊನಾ ಹೊಸ ಗೈಡ್ಲೈನ್ಸ್ : ನಿರ್ದಿಷ್ಟ ಗೊತ್ತು ಗುರಿ, ಸ್ವಂತ ಬುದ್ದಿಯಿಲ್ಲದ ಸರಕಾರ
ಬೆಳಗ್ಗೆ ಹೊರಡಿಸುವ ಮಾರ್ಗಸೂಚಿ, ಸಂಜೆ ಅನುಷ್ಟಾನ ಆಗುವಷ್ಟರಲ್ಲಿ ಮತ್ತಷ್ಟು ಬದಲಾವಣೆಗಳಾಗಿ ಜಾರಿಗೆ ಬಂದ ಹಲವು ಉದಾಹರಣೆಗಳನ್ನು ಹಾಲೀ ಸರಕಾರದ ಅವಧಿಯಲ್ಲಿ ನೀಡಬಹುದಾಗಿದೆ.
ಉತ್ತರ ಕರ್ನಾಟಕದ ಪ್ರವಾಹದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ತೋರಿದ ವೃತ್ತಿಪರತೆ, ಕೊರೊನಾ ನಿರ್ವಹಣೆಯಲ್ಲಿ ತೋರಿಲ್ಲ ಎಂದೇ ಹೇಳಬಹುದಾಗಿದೆ. ಕೊರೊನಾ ಹಾವಳಿ ಆರಂಭವಾಗಿ ಒಂದು ವರ್ಷ ಮೇಲಾದರೂ, ಹಳೆಯ ಅನುಭವವಿದ್ದರೂ, ಸರಕಾರ ಡಿಶಿಷನ್ ಮೇಕಿಂಗ್ನಲ್ಲಿ ಎಡವುತ್ತಲೇ ಇದೆ.
ಇಂದು (ಏ 20) ರಾಜ್ಯಪಾಲರು ಕರೆದಿದ್ದ ಸಭೆಗೂ ಮುನ್ನ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಸರಕಾರ ಅನಿವಾರ್ಯತೆಯಿಂದ ಪ್ರಕಟಿಸಬೇಕಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಯಿ ಹೇಳುತ್ತಲೇ ಬಂದಿದ್ದರು.
ಒಂದು ಹಂತಕ್ಕೆ ಬೆಂಗಳೂರು ಲಾಕ್ ಡೌನ್ ಎಂದು ಟಿವಿ ಮಾಧ್ಯಮದವರು ಅನಾವಶ್ಯಕ ಸುದ್ದಿಯನ್ನು ಪ್ರಸಾರ ಮಾಡುತ್ತಲೇ ಬಂದವು. ಈ ಸುದ್ದಿ ಸುಳ್ಳು ಎಂದು ರಾಜ್ಯದ ಯಾವುದೇ ಸಚಿವರು ಸ್ಪಷ್ಟನೆಯನ್ನು ನೀಡಲೇ ಇಲ್ಲ. ಹಾಗಾಗಿ, ಸಾರ್ವಜನಿಕರು ಅನಾವಶ್ಯಕವಾಗಿ ಗಾಬರಿಗೆ ಒಳಗಾದರು, ಮದ್ಯಪ್ರಿಯರಿಗೆ ಅವರ ಚಿಂತೆಯೇ ಹೆಚ್ಚಾಯಿತು.

ಪುನೀತ್ ರಾಜಕುಮಾರ್ ಅಭಿನಯದ ಚಿತ್ರ
ಕೊರೊನಾ ಮಾರ್ಗಸೂಚಿಯನ್ನು ಬಿಎಸ್ವೈ ಸರಕಾರ ಒತ್ತಡಕ್ಕೆ ಮಣಿದು ಬದಲಾಯಿಸುತ್ತಾ ಹಲವು ಬಾರಿ ನಗೆಪಾಟಲಿಗೆ ಗುರಿಯಾಗಿದ್ದು ಗೊತ್ತೇ ಇದೆ. ತಾಜಾ ಉದಾಹರಣೆಯೆಂದರೆ, ಪುನೀತ್ ರಾಜಕುಮಾರ್ ಅಭಿನಯದ ಚಿತ್ರವೊಂದು ಬಿಡುಗಡೆಯಾದ ಎರಡೇ ದಿನದಲ್ಲಿ ಚಿತ್ರಮಂದಿರಕ್ಕೆ ಶೇ. 50 ನಿರ್ಬಂಧ ತಂದು, ಮತ್ತೆ ಮೂರು ದಿನ ಶೇ. 100 ಅನುಮತಿ ನೀಡಿರುವುದು.

ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ
ಲಾಕ್ ಡೌನ್ ಹೇರಲು ಮೋದಿ ಮತ್ತು ಬಿಎಸ್ವೈ ಸರಕಾರಕ್ಕೆ ಮನಸ್ಸಿಲ್ಲದಿದ್ದರೂ, ಒಂದು ಹಂತಕ್ಕೆ ಲಾಕ್ ಡೌನ್ ಹೇರುವ ನಿರ್ಧಾರಕ್ಕೆ ಯಡಿಯೂರಪ್ಪನವರು ತಮ್ಮ ಸಂಪುಟದ ಸಹದ್ಯೋಗಿಯೊಬ್ಬರ ಒತ್ತಡಕ್ಕೆ ಮಣಿದು ಬಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ ಸರಕಾರದ ನಿರ್ಧಾರವನ್ನು ಬದಲಿಸುವಂತೆ ಮಾಡಿತು ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.

ವೀಕೆಂಡ್ ಕರ್ಪ್ಯೂ
ಪ್ರಧಾನಿ ಮೋದಿ ಭಾಷಣದ ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿ ಸರಕಾರದ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ. ಅಶೋಕ್ ಮತ್ತು ಬೊಮ್ಮಾಯಿ ಹೇಳಿದಂತೆ, ವೀಕೆಂಡ್ ಕರ್ಪ್ಯೂ ಹೊರತಾಗಿ ಅಂತಹ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಮಾರ್ಗಸೂಚಿಯಲ್ಲಿ ಕಾಣುತ್ತಿಲ್ಲ ಎನ್ನುವುದು ಸರಕಾರ ಒಪ್ಪಿಕೊಳ್ಳಬೇಕಾದ ವಿಚಾರ.

ನಿರ್ದಿಷ್ಟ ಗೊತ್ತು ಗುರಿ, ಸ್ವಂತ ಬುದ್ದಿಯಿಲ್ಲದ ಸರಕಾರ
ಧಾರ್ಮಿಕ ಕೇಂದ್ರಗಳು, ಬಾರ್ ಎಂಡ್ ರೆಸ್ಟೋರೆಂಟ್, ಸಿನಿಮಾ ಮಂದಿರ, ಪಾರ್ಕ್ ಮುಂತಾದವುಗಳು ಬಂದ್ ಆಗಬಹುದು ಎಂದು ಸಾರ್ವಜನಿಕರು ಈಗಾಗಲೇ ಗ್ರಹಿಸಿಕೊಂಡಿದ್ದರು. ಅಂತರ್ ಜಿಲ್ಲಾ ಪ್ರಯಾಣಕ್ಕೆ ನಿರ್ಬಂಧ ಹೇರಬಹುದು ಎನ್ನುವ ಲೆಕ್ಕಾಚಾರ ತಪ್ಪಾಗಿದೆ. ನೈಟ್ ಕರ್ಫ್ಯೂ ಅವಧಿ ಹೆಚ್ಚಿಸಬಹುದು ಎನ್ನುವ ಸುದ್ದಿ ನಿಜವಾಗಿದೆ (9PM-6AM). ಒಟ್ಟಿನಲ್ಲಿ ಟಫ್ ರೂಲ್ಸ್ ಎನ್ನುವ ಬಿಎಸ್ವೈ ಸರಕಾರದ ಸಚಿವರ ಹೇಳಿಕೆ ಮತ್ತೆ ಮಹತ್ವ ಕಳೆದುಕೊಂಡಿದೆ. ಕೇಂದ್ರ ಸರಕಾರದ ಒತ್ತಡಕ್ಕೆ ರಾಜ್ಯ ಸರಕಾರ ಮಣಿಯಿತೇ ಎನ್ನುವುದಿಲ್ಲಿ ಪ್ರಶ್ನೆ.












Click it and Unblock the Notifications