ರಾಜ್ಯದಲ್ಲಿ ಬದಲಾವಣೆ ಪರ್ವ; ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜನವರಿ 20: ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಅನೇಕರು ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನೆಲಮಂಗಲ ನಗರಸಭೆ ಜೆಡಿಎಸ್ ಅಧ್ಯಕ್ಷೆ ಸೇರಿದಂತೆ 10 ಸದಸ್ಯರ ಸಾಮೂಹಿಕವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅನ್ಯ ಪಕ್ಷದ ನಾಯಕರು ನಮ್ಮ ಪಕ್ಷ ಸೇರ್ಪಡೆಯಾದಗಲಿದ್ದಾರೆ. ನಾವು ಅವರಿಗೆ ಶಕ್ತಿ ನೀಡಿ, ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ. ನಮ್ಮಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಇವರಲ್ಲಿ ಬಹುತೇಕರು ನನ್ನ ಜತೆ ಕೆಲಸ ಮಾಡಿದ್ದರು. ಈ ಬಾರಿ ನಾವು ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಇವರು ಕೆಲಸ ಮಾಡಲಿದ್ದಾರೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚಾಗಿ ಆಗಮಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ನಾಯಕರು ಆಗಮಿಸುತ್ತಿದ್ದಾರೆ. ಎಚ್ ವಿಶ್ವನಾಥ್ ಅವರು ಪಕ್ಷ ಸೇರ್ಪಡೆಯಾಗಲು ದಿನಾಂಕ ನಿಗದಿ ಆಗಿದೆ. ಅದನ್ನು ಶೀಘ್ರ ಘೋಷಣೆ ಮಾಡುತ್ತೇವೆ. ಉಳಿದಂತೆ ಯಾರೆಲ್ಲಾ ಬರುತ್ತಾರೆ ಎಂದು ನಾನು ಈಗ ಹೇಳುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ' ಹೌದು ಬಹಳ ಜನ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ ಪಕ್ಷದಲ್ಲಿ ಅವರಿಗೆ ಸ್ಥಾನ ನೀಡಬೇಕಾಗುತ್ತದೆ. ಕೆಲವು ಕಡೆ ಅದು ಸಾಧ್ಯ ಆಗುವುದಿಲ್ಲ. ಯಾರೆಲ್ಲಾ ಬರಲಿದ್ದಾರೆ ಎಂದು ನಾನು ಇಂದು ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದರು.
ಇನ್ನು ಹಾವೇರಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅರ್ಜಿ ನೀಡುವ ಹೇಳಿಕೆ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂದು ಜನರಿಗೆ ತಲುಪಬೇಕು. ಹೀಗಾಗಿ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಈ ವಿಚಾರ ಮುಟ್ಟಿಸಬೇಕು. ಅಲ್ಲದೆ ಈ ಯೋಜನೆ ಬಗ್ಗೆ ಯಾರಿಗೆಲ್ಲ ಆಸಕ್ತಿ ಇದೆ ಎಂದು ತಿಳಿಯಬೇಕು. ಬಿಜೆಪಿ ನಾಯಕರು ಈ ಯೋಜನೆ ಜಾರಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಹೇಗೆ ತರಬೇಕು ಎಂದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡನೆ ಮಾಡಿದ್ದಾರೆ. ನಾನು ಕೂಡ 35-40 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಯೋಜನೆಗಳಿಗೆ ಹೇಗೆ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು ಎಂದು ತಿಳಿದಿದೆ. ನಾವು ಘೋಷಣೆ ಪ್ರಕಟಿಸಿದ ಮೇಲೆ ಈಗ ಮುಖ್ಯಮಂತ್ರಿಗಳು ಹಾಗೂ ಸಚಿವ ಅಶೋಕ್ ಅವರು ಬಜೆಟ್ ನಲ್ಲಿ ಈ ಯೋಜನೆ ತರುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಮೂರುವರೆ ವರ್ಷಗಳಿಂದ ಸರ್ಕಾರ ಯಾಕೆ ಈ ಕಾರ್ಯಕ್ರಮ ನೀಡಲಿಲ್ಲ. ಕೋವಿಡ್ ಸಮಯದಲ್ಲಿ ಸಾಂಪ್ರದಾಯಿಕ ವೃತ್ತಿ ಮಾಡಿಕೊಂಡು ಬಂದವರಿಗೆ 10 ಸಾವಿರ ಪ್ರೋತ್ಸಾಹ ಧನ ನೀಡುವಂತೆ ನಾವು ಆಗ್ರಹಿಸಿದೆವು. ಅದನ್ನು ಅವರಿಂದ ನೀಡಲು ಆಗಲಿಲ್ಲ. 5 ಸಾವಿರ ನೀಡುವುದಾಗಿ ಘೋಷಣೆ ಮಾಡಿ ಅದನ್ನು ಸರಿಯಾಗಿ ನೀಡಲಿಲ್ಲ. 1800 ಕೋಟಿ ಪ್ಯಾಕೆಜ್ ಘೋಷಣೆ ಮಾಡಿದರು. ಆದರೆ ಅದು ಜನರಿಗೆ ತಲುಪಲಿಲ್ಲ. 25 ಲಕ್ಷ ಚಾಲಕರ ಪೈಕಿ ಕೇವಲ 6 ಲಕ್ಷ ಮಂದಿಗೆ ಮಾತ್ರ 5 ಸಾವಿರ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಿ 410 ರೂ.ಗೆ ಸಿಲಿಂಡರ್ ನೀಡುತ್ತಿದ್ದೆವು. ಈಗ ಅದು 1100 ರೂಪಾಯಿ ಆಗಿದೆ. ಹೀಗಾಗಿ ಬೆಲೆ ಏರಿಕೆ ಹೊರೆ ತಗ್ಗಿಸಲು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲು ಘೋಷಣೆ ಮಾಡಿದ್ದೇವೆ. ಇದರಿಂದ ಪ್ರತಿ ಮನೆಗೆ 1500ರಂತೆ ವರ್ಷಕ್ಕೆ 18,000 ಉಳಿತಾಯವಾಗುತ್ತದೆ. ಇನ್ನು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡುವ ಘೋಷಣೆ ಮಾಡಲಾಗಿದೆ. ಇವೆರದರಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರ ಉಳಿತಾಯ ಆಗುತ್ತದೆ. ಈಗ ಮುಖ್ಯಮಂತ್ರಿಗಳು ನಾವು ಈ ಯೋಜನೆ ಬಗ್ಗೆ ಯೋಚನೆ ಮಾಡಿದ್ದೆವು ಎಂದು ಹೇಳುತ್ತಿದ್ದಾರೆ. ಅವರು ಎಲ್ಲರ ಖಾತೆಗೆ 15 ಲಕ್ಷ ಹಾಕುವುದಾಗಿ ಜನಧನ್ ಖಾತೆ ತೆರೆಸಿದರು. ಆದರೆ ಯಾವ ಖಾತೆಗೂ ಬರಲಿಲ್ಲ. ಆದರೆ ನಾವು ಘೋಷಣೆ ಮಾಡಿರುವ ಯೋಜನೆಗಳು ಗ್ಯಾರೆಂಟಿ ಯೋಜನೆ. ಸಿದ್ದರಾಮಯ್ಯ ಅವರು ಈಗ ನೀಡಲಾಗುತ್ತಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನು ಕೆಲವು ಯೋಜನೆಗಳ ಘೋಷಣೆ ಬಾಕಿ ಇವೆ ಎಂದರು.

ಪಂಚಮಸಾಲಿ ಹಾಗೂ ಒಕ್ಕಲಿಗರ ಮೀಸಲಾತಿ ಹೋರಾಟ ಕಾಂಗ್ರೆಸ್ ಗೆ ವರದಾನವೇ ಎಂದು ಕೇಳಿದ ಪ್ರಶ್ನೆಗೆ, ' ಪಂಚಮಸಾಲಿ, ಒಕ್ಕಲಿಗರು, ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಸರ್ಕಾರ ಎಲ್ಲರಿಗೂ ಮೋಸ ಮಾಡುತ್ತಿದೆ. ಬಿಜೆಪಿ ಯಾವ ನಿರ್ಧಾರವನ್ನು ಕಾನೂನು ಪ್ರಕಾರ ಮಾಡಿಲ್ಲ. ಅವರು ಮೀಸಲಾತಿ ನೀಡಬೇಕಾದರೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ದೆಹಲಿಯಲ್ಲಿ ತಿದ್ದುಪಡಿ ಮಾಡಿ ಕಳುಹಿಸಬೇಕಿತ್ತು. ಕೇಂದ್ರ ಸಚಿವರು ನಮ್ಮ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ. ಇವರು ಕೇವಲ ಘೋಷಣೆ ಮಾಡಿ ನಾವು ಗೆದ್ದಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲವೆ? ಈ ವಿಚಾರದಲ್ಲಿ ಮುಖ್ಯಮಂತ್ರಿ ಯಾಕೆ ಘೋಷಣೆ ಮಾಡಲಿಲ್ಲ? ಘೋಷಣೆ ಮಾಡಿದ ನಂತರ 3 ತಿಂಗಳು ಕಳೆದ ಬಳಿಕ ವರದಿ ತರಿಸಿಕೊಂಡು ತೀರ್ಮಾನ ಮಾಡುತ್ತಾರಂತೆ. ಫೆಬ್ರವರಿ ಅಂತ್ಯಕ್ಕೆ ಇವರ ಅಧಿಕಾರ ಬಹುತೇಕ ಅಂತ್ಯವಾಗುತ್ತದೆ. ಅಧಿಕಾರಿಗಳ ಕೈಯಲ್ಲಿ 48 ದಿನಗಳ ಕಾಲ ಅಧಿಕಾರ ಇರುತ್ತದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.












Click it and Unblock the Notifications