ಓದುಗರ ಅಭಿಪ್ರಾಯ : ಕರ್ನಾಟಕ ಬಿಜೆಪಿ ಅಧ್ಯಕ್ಷರು ಬದಲಾಗಬೇಕು
ಬೆಂಗಳೂರು, ಮೇ 06 : ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗಲಿದೆಯೇ? ಎಂಬ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಕಡೆ ಕೈ ತೋರಿಸಿದ್ದಾರೆ.
ಲೋಕಸಭಾ ಚುನಾವಣೆ ಪ್ರಕಟವಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಹಬ್ಬಿದೆ. ಹಲವು ನಾಯಕರ ಹೆಸರುಗಳು ರಾಜ್ಯಾಧ್ಯಕ್ಷರ ಹುದ್ದೆಗೆ ಕೇಳಿಬರುತ್ತಿದೆ.
ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಅವರು ಪ್ರತಿಪಕ್ಷ ನಾಯಕನ ಸ್ಥಾನವನ್ನು ಹೊಂದಿದ್ದಾರೆ. 76 ವರ್ಷದ ಯಡಿಯೂರಪ್ಪ ಅವರನ್ನು ಬದಲಾಯಿಸಿ ಹೊಸಬರಿಗೆ ರಾಜ್ಯ ಬಿಜೆಪಿ ಸಾರಥ್ಯ ನೀಡಲಾಗುತ್ತದೆ ಎಂಬುದು ಸುದ್ದಿ.
ಒನ್ ಇಂಡಿಯಾ ಕನ್ನಡ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಗತ್ಯವಿದೆಯೇ? ಎಂದು ಓದುಗರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಶೇ 56.9ರಷ್ಟು ಜನರು ಹೌದು ಎಂದು ಅಭಿಪ್ರಾಯವನ್ನು ಪಟ್ಟಿದ್ದಾರೆ. ಸಮೀಕ್ಷೆಯ ಫಲಿತಾಂಶದ ವರದಿ ಇಲ್ಲಿದೆ.....

ಸಮೀಕ್ಷೆಯ ಪ್ರಶ್ನೆಗಳು
ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಅಗತ್ಯವಿದೆಯೇ? ಎಂದು ಒನ್ ಇಂಡಿಯಾ ಕನ್ನಡ ಓದುಗರನ್ನು ಪ್ರಶ್ನಿಸಿತ್ತು.
* ಯಡಿಯೂರಪ್ಪ ಬದಲಾವಣೆ ಮಾಡಬೇಕು
* ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ
* ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂಬ ಮೂರು ಆಯ್ಕೆಗಳನ್ನು ಓದುಗರಿಗೆ ನೀಡಲಾಗಿತ್ತು.
ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ, ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ ಎಲ್ಲಾ ಓದುಗರಿಗೆ ಒನ್ ಇಂಡಿಯಾ ಕಡೆಯಿಂದ ಧನ್ಯವಾದಗಳು.

ರಾಜ್ಯಾಧ್ಯಕ್ಷರು ಬದಲಾವಣೆಯಾಗಬೇಕು
ಯಡಿಯೂರಪ್ಪ ಬದಲಾವಣೆ ಮಾಡಬೇಕು ಎಂದು ಶೇ 56.9 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ ಅವರು ಮುಂದುವರೆಯಲಿ ಎಂದು ಶೇ 38.45 ರಷ್ಟು ಜನರು ಹೇಳಿದ್ದಾರೆ.
ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದು 4.65ರಷ್ಟು ಜನರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಕರ್ನಾಟಕ ಬಿಜೆಪಿಯೇ ಬದಲಾಗಬೇಕು
* ಯಡಿಯೂರಪ್ಪ ಬಿಟ್ಟರೆ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸುವ ತಾಖತ್ತು ಯಾರಿಗಿದೆ?. 2014ರಲ್ಲಿ ನೋಡಿಲ್ಲವೇ? ಎಂದು ಓದುಗ ಗುರುರಾಜ್ ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.
* ಯಡಿಯೂರಪ್ಪ ಅಷ್ಟೇ ಅಲ್ಲ ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬೇಕಿದೆ. ಯುವ ನಾಯಕರಿಗೆ ಅವಕಾಶ ಬೇಕಿದೆ ಎಂದು ಮೋಹನ್ ಕುಮಾರ್ ಎಂಬುವವರು ಕಮೆಂಟ್ ಮಾಡಿದ್ದಾರೆ.

ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ
* ವಿಜಯಶ್ರೀ ಎಂಬುವವರು ಗೊತ್ತಿಲ್ಲ. ಆದರೆ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಗ್ಯಾರಂಟಿ ಎಂದು ಅಭಿಪ್ರಾಯಪಟ್ಟಿದ್ದಾರೆ.
* ಗಣಪತಿ ಭಟ್ ಎಂಬುವವರು ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಶೋಭಾ, ಕಟ್ಟಾ ಸುಬ್ರಮಣ್ಯ ನಾಯ್ಡು ಇವರನ್ನು ಡೆಲ್ಲಿಯಲ್ಲಿ ಇರಿಸಿ ಕೊಂಡಲ್ಲಿ ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ಆಡಳಿತ ನಡೆಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶ್ರೀರಾಮುಲು ಅವರು ಅಧ್ಯಕ್ಷರಾಗಲಿ
* ರಂಗನಾಥ ಎಂಬುವವರು ಬಿ.ಶ್ರೀರಾಮುಲು ಅವರು ಅಧ್ಯಕ್ಷರ ಹುದ್ದೆಗೆ ಅರ್ಹ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
* ರಮೇಶ್ ಎಂಬುವವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ವಿಶ್ರಾಂತಿ ಕೊಡಿ ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications