15 ವರ್ಷದಲ್ಲಿ ರಾಜ್ಯಕ್ಕೆ ಯುಪಿಎ ಮತ್ತು ಎನ್ಡಿಎ ಸರ್ಕಾರಗಳು ಬಿಡುಗಡೆ ಮಾಡಿದ ಪರಿಹಾರವೆಷ್ಟು?
ಬೆಂಗಳೂರು, ಅಕ್ಟೋಬರ್ 5: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ 1,200 ಕೋಟಿ ಪರಿಹಾರ ಘೋಷಣೆ ಮಾಡಿದೆ. ತೀರಾ ವಿಳಂಬ ಧೋರಣೆ ಅನುಸರಿಸಿರುವುದಕ್ಕೆ ಮತ್ತು ನಷ್ಟಕ್ಕೆ ಹೋಲಿಸಿದರೆ ಕಡಿಮೆ ಪ್ರಮಾಣದ ಪರಿಹಾರ ಘೋಷಣೆ ಮಾಡಿರುವುದಕ್ಕೆ ವಿರೋಧ ಪಕ್ಷಗಳು ವಾಗ್ದಾಳಿ ಮುಂದುವರಿಸಿವೆ. ಆದರೆ ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಎಎನ್ಡಿಎ ಸರ್ಕಾರವೇ ವಿಪತ್ತು ಪರಿಹಾರ ನಿಧಿಯಿಂದ ಪ್ರತಿ ವರ್ಷ ಅತಿ ಹೆಚ್ಚು ಹಣ ಬಿಡುಗಡೆ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರತಿಪಾದಿಸಿದೆ.
ಸಂತ್ರಸ್ತರಿಗೆ ನೆರವಾಗಲು ಕೇಂದ್ರ ಸರ್ಕಾರ ಶುಕ್ರವಾರ 1,200 ಕೋಟಿ ರೂಪ ಮೊತ್ತವನ್ನು ಮುಂಗಡ ಪರಿಹಾರವಾಗಿ ನೀಡಿದೆ. ಅದರಲ್ಲಿ 897 ಕೋಟಿ ರೂ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮತ್ತು 303 ಕೋಟಿ ರೂ. ಹಣವನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಹಣ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.
ಆಗ ಮನಮೋಹನ್ ಸಿಂಗ್ ಸ್ಪಂದಿಸಿದ್ದು ಹೇಗೆ? ಈಗ ಮೋದಿ ಮಾಡುತ್ತಿರುವುದೇನು?
ಹಿಂದೆಂದೂ ಕಂಡರಿಯದ ನೆರೆ ಪರಿಸ್ಥಿತಿಯಿಂದ ಆಗಿರುವ ನಷ್ಟ ಅಂದಾಜು ರೂ. 50,000 ಕೋಟಿ, ರಾಜ್ಯ ಸರ್ಕಾರ ಕೇಳಿದ್ದು ರೂ. 35,000 ಕೋಟಿ. ಕೇಂದ್ರ ಕೊಟ್ಟಿರುವುದು ರೂ.1200 ಕೋಟಿ. ಇದು ಬ್ರಹ್ಮಾಂಡ ಹಸಿವಿಗೆ ಅರೆಕಾಸಿನ ಮಜ್ಜಿಗೆಯಂತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ತಾನು ಬಿಡುಗಡೆ ಮಾಡಿದ ಮತ್ತು ಯುಪಿಎ ಸರ್ಕಾರ ಬಿಡುಗಡೆ ಮಾಡಿದ ಪರಿಹಾರದ ವಿವರವನ್ನು ಹಂಚಿಕೊಂಡಿದೆ.
ಯುಪಿಎ-ಎನ್ಡಿಎ ಬಿಡುಗಡೆ ಮಾಡಿದ್ದೆಷ್ಟು?
2014-2019ರ ಅವಧಿಯಲ್ಲಿ ಎನ್ಡಿಎ ಸರ್ಕಾರವು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಅಡಿಯಲ್ಲಿ ರಾಜ್ಯಕ್ಕೆ 7,170.28 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಆದರೆ 2004-2014ರ ಅವಧಿಯಲ್ಲಿ ಯುಪಿಎ ಸರ್ಕಾರ ಕೇವಲ 4,822.13 ಕೋಟಿ ರೂ. ಬಿಡುಗಡೆ ಮಾಡಿತ್ತು ಎಂದು ಬಿಜೆಪಿ, ಗೃಹ ಮತ್ತು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯನ್ನು ಹಂಚಿಕೊಂಡಿದೆ.
2014-15ನೇ ಸಾಲು
2014-15ನೇ ಸಾಲಿನಲ್ಲಿ ಎನ್ಡಿಆರ್ಎಫ್ನಿಂದ 271.38 ಕೋಟಿ ರೂ. ಮತ್ತು ಎಸ್ಡಿಆರ್ಎಫ್ 146.74 ಕೋಟಿ ರೂ.ನಂತೆ ಒಟ್ಟು 418.12 ಕೋಟಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ 1200 ಕೋಟಿ ಮಂಜೂರು
2015-16ನೇ ಸಾಲು
2015-16ನೇ ಸಾಲಿನಲ್ಲಿ ಎನ್ಡಿಆರ್ಎಫ್ನಿಂದ 1,645.53 ಕೋಟಿ ರೂ ಮತ್ತು ಎಸ್ಡಿಆರ್ಎಫ್ ನಿಂದ 207.00 ಕೋಟಿ ರೂ.ನಂತೆ ಒಟ್ಟು 1852.53 ಕೋಟಿ ಬಿಡುಗಡೆ ಮಾಡಲಾಗಿದೆ.
2016-17ನೇ ಸಾಲು
2016-17ನೇ ಸಾಲಿನಲ್ಲಿ ಎನ್ಡಿಆರ್ಎಫ್ನಿಂದ 2,292.50 ಕೋಟಿ ರೂ ಮತ್ತು ಎಸ್ಡಿಆರ್ಎಫ್ ನಿಂದ 217.50 ಕೋಟಿ ರೂ.ನಂತೆ ಒಟ್ಟು 2510.00 ಕೋಟಿ ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾಗಿರುವ ಪರಿಹಾರ ಹಣ ಮೊದಲು ಖರ್ಚು ಮಾಡಿ : ನಳಿನ್ ಕುಮಾರ್
2017-18ನೇ ಸಾಲು
2017-18ನೇ ಸಾಲಿನಲ್ಲಿ (2017ರ ಏಪ್ರಿಲ್ 11ರಂದು ಮತ್ತು ಕಳೆದ ಸಾಲಿನ ರಬಿ ಅವಧಿಯ ಮೊತ್ತವನ್ನು 2017ರ ಜುಲೈ 11ರಂದು) ಎನ್ಡಿಆರ್ಎಫ್ನಿಂದ 913.04 ಕೋಟಿ ರೂ ಮತ್ತು ಎಸ್ಡಿಆರ್ಎಫ್ ನಿಂದ 228.75 ಕೋಟಿ ರೂ.ನಂತೆ ಒಟ್ಟು 1,141.79 ಕೋಟಿ ಬಿಡುಗಡೆ ಮಾಡಲಾಗಿದೆ.
2018-19ನೇ ಸಾಲು
2018-19ನೇ ಸಾಲಿನಲ್ಲಿ (2018ರ ಡಿಸೆಂಬರ್ 11ರಂದು) ಎನ್ಡಿಆರ್ಎಫ್ನಿಂದ 525.22 ಕೋಟಿ ರೂ ಮತ್ತು ಎಸ್ಡಿಆರ್ಎಫ್ ನಿಂದ 288.00 ಕೋಟಿ ರೂ.ನಂತೆ ಒಟ್ಟು 813.22 ಕೋಟಿ ಬಿಡುಗಡೆ ಮಾಡಲಾಗಿದೆ.
2019ರ ಜನವರಿ 28ರಂದು ಉನ್ನತ ಮಟ್ಟದ ಸಮಿತಿಯು ಬರ ಪರಿಹಾರಕ್ಕಾಗಿ ಎನ್ಡಿಆರ್ಎಫ್ನಿಂದ 434.62 ಕೋಟಿ ರೂ. ಬಿಡುಗಡೆ ಮಾಡಿದೆ.
ಯುಪಿಎ ಮೊದಲ ಅವಧಿ
2004-2009ರ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಕರ್ನಾಟಕಕ್ಕೆ ಎನ್ಡಿಆರ್ಎಫ್ನಿಂದ 907.28 ಕೋಟಿ ರೂ. ಮತ್ತು ಎಸ್ಡಿಆರ್ಎಫ್ನಿಂದ 438.62 ಕೋಟಿ ರೂ. ಸೇರಿದಂತೆ ಒಟ್ಟು 1,524.70 ಕೋಟಿ ರೂ. ಬಿಡುಗಡೆ ಮಾಡಿತ್ತು.
ಯುಪಿಎ ಎರಡನೆಯ ಅವಧಿ
2009-2014ರ ಯುಪಿಎ ಸರ್ಕಾರದ ಎರಡನೆಯ ಅವಧಿಯಲ್ಲಿ ಎನ್ಡಿಆರ್ಎಫ್ನಿಂದ 2,672.58 ಕೋಟಿ ರೂ ಹಾಗೂ ಎಸ್ಡಿಆರ್ಎಫ್ನಿಂದ 624.85 ಕೋಟಿ ರೂ. ಸೇರಿ ಒಟ್ಟು 3,297.43 ಕೋಟಿ ರೂ. ಬಿಡುಗಡೆ ಮಾಡಿತ್ತು ಎಂದು ಬಿಜೆಪಿ ಹೇಳಿದೆ.