ಮಾರ್ಚ್ 6ಕ್ಕೆ ರಾಜ್ಯಕ್ಕೆ ಮೋದಿ, ಖರ್ಗೆ ಕೋಟೆಯಲ್ಲಿ ಬಿಜೆಪಿ ರಣಕಹಳೆ
ಕಲಬುರಗಿ, ಮಾರ್ಚ್ 02: ಇದೇ ತಿಂಗಳ 6ನೇ ತಾರೀಖು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅದು ಅಧಿಕೃತ ಚಾಲನೆ ಆಗಲಿದ್ದು, ಕಾಂಗ್ರೆಸ್ನ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಿಂದಲೇ ಬಿಜೆಪಿಯು ಚುನಾವಣಾ ಪ್ರಚಾರ ಆರಂಭಿಸಲಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ಗೆ ತೆರಳದಂತೆ ತಡೆಯುವ ಉದ್ದೇಶವನ್ನು ಬಿಜೆಪಿ ಹೊಂದಿದ್ದು, ಹಾಗಾಗಿಯೇ ಮೋದಿ ಅವರ ಲೋಕಸಭೆ ಚುನಾವಣೆ 2019ರ ರಾಜ್ಯದ ಮೊದಲ ಸಮಾವೇಶವನ್ನು ಖರ್ಗೆ ಅವರ ಕ್ಷೇತ್ರದಲ್ಲಿಯೇ ಆಯೋಜಿಸಿದ್ದಾರೆ.

ಮಾರ್ಚ್ 6 ರಂದು ಮಧ್ಯಾಹ್ನ 2 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದ್ದು, ಯಡಿಯೂರಪ್ಪ ಸೇರಿ ರಾಜ್ಯ ಬಿಜೆಪಿಯ ಬುಹುತೇಕ ನಾಯಕರು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುವ ಜೊತೆಗೆ ಖರ್ಗೆ ವಿರುದ್ಧವೂ ವಾಗ್ದಾಳಿಯನ್ನು ಮೋದಿ ನಡೆಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಆರ್.ಅಶೋಕ್ ಅವರಿಗೆ ನೀಡಲಾಗಿದೆ.
ಇದೇ ವಾರ ಅಥವಾ ಮುಂದಿನ ವಾರ ಕೇಂದ್ರ ಚುನಾವಣೆ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ. ಹಾಗಾಗಿ ಅದಕ್ಕೂ ಮುನ್ನವೇ ಪ್ರಾದೇಶಿಕವಾರು ಸಮಾವೇಶಗಳನ್ನು ಮುಗಿಸುವ ಆತುರತೆಯನ್ನು ಬಿಜೆಪಿ ತೋರುತ್ತಿದೆ.
ಕೆಲವು ದಿನಗಳ ಹಿಂದಷ್ಟೆ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ, ಹೊಸಪೇಟೆ ನಗರಗಳಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಜೊತೆಗೆ ಟಿಕೆಟ್ ಹಂಚಿಕೆ ಬಗ್ಗೆಯೂ ರಾಜ್ಯ ಬಿಜೆಪಿ ಮುಖಂಡರ ಜೊತೆ ಮಾತುಕತೆ ಮಾಡಿದ್ದರು.












Click it and Unblock the Notifications