ಮಾರ್ಚ್ ಅಂತ್ಯದೊಳಗೆ 'ನಂದಿನಿ' ಹಾಲಿನ ದರ ಏರಿಕೆ?: ಶೀಘ್ರವೇ ಸಭೆ ನಡೆಸಲಿರುವ ಕೆಎಂಎಫ್
ಬೆಂಗಳೂರು,ಮಾ.13: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) 'ನಂದಿನಿ' ಹಾಲಿನ ದರ ಹೆಚ್ಚಳ ಮಾಡುವ ಸಿದ್ಧತೆ ನಡೆಸಿದ್ದು, ಮಾರ್ಚ್ ಅಂತ್ಯದೊಳಗೆ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ಪ್ರತಿ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳು ಈಗಾಗಲೇ ಮನವಿ ಮಾಡಿದ್ದವು. ಆದರೆ, ಕೋವಿಡ್ ಮೂರನೇ ಅಲೆ, ಮತ್ತೊಮ್ಮೆ ಲಾಕ್ಡೌನ್ ಪ್ರಸ್ತಾಪ ಸೇರಿದಂತೆ ಜನಸಾಮಾನ್ಯರು ಗೊಂದಲಕ್ಕೆ ಒಳಗಾಗಿದ್ದರಿಂದ ಆ ಸಂದರ್ಭದಲ್ಲಿ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು.
ಬೆಂಗಳೂರಿನಲ್ಲಿ ನಂದಿನಿ ನಕಲಿ ತುಪ್ಪ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ
ಸದ್ಯ ಅಡುಗೆ ಎಣ್ಣೆ ಸಹಿತ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದೆ. ಸದ್ಯದಲ್ಲಿಯೇ ಪೆಟ್ರೋಲ್, ಡೀಸೆಲ್ ದರವೂ ಹೆಚ್ಚಳ ಆಗಬಹುದು ಎಂದು ನಿರೀಕ್ಷಿಸಲಾಗುತ್ತದೆ. ಈ ಮಧ್ಯೆ ದರ ಹೆಚ್ಚಳ ಮಾಡುವಂತೆ ಒಕ್ಕೂಟಗಳು ಕೆಎಂಎಫ್ ಮೇಲೆ ನಿರಂತರ ಒತ್ತಡ ಹಾಕುತ್ತಿವೆ. ಈ ಎಲ್ಲಾ ಕಾರಣಗಳಿಂದ ಮುಂಬರುವ ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ದರ ಹೆಚ್ಚಳದ ಬಗ್ಗೆ ನಿರ್ಧರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
'ಪ್ರತಿ ಲೀಟರ್ಗೆ ಮೂರು ರೂಪಾಯಿ ದರ ಹೆಚ್ಚಳ ಮಾಡುವಂತೆ ಜಿಲ್ಲಾ ಒಕ್ಕೂಟಗಳು ಕೇಳಿಕೊಂಡಿವೆ. ಅದೇ ರೀತಿ ಮೂರು ರೂ. ಹೆಚ್ಚಳ ಮಾಡಿದರೆ ಪ್ರತಿ ಲೀಟರ್ ಹಾಲಿಗೆ 40 ರೂ. ಆಗುತ್ತದೆ. ಹೀಗೆ ಹೆಚ್ಚುವರಿ ಮೊತ್ತವನ್ನು ರೈತರಿಗೆ ನೀಡಲಾಗುವುದು' ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಳೆದ ಜನವರಿಯಲ್ಲಿ ಹೇಳಿಕೆ ನೀಡಿದ್ದರು.
ಹಾಲು, ವಿದ್ಯುತ್ ಬೆಲೆ ಏರಿಕೆ ತೀರ್ಮಾನ ಸದ್ಯಕ್ಕಿಲ್ಲ: ಬಸವರಾಜ ಬೊಮ್ಮಾಯಿ
ಬಳಿಕ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆಯೂ ಮಂಡಿಸಲಾಗಿತ್ತು. ಆದರೆ, ಕೋವಿಡ್ ಮೂರನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಕೆಲ ಕಾಲ ಈ ಪ್ರಸ್ತಾವನೆಯನ್ನು ಮುಂದೂಡಿ ಎಂದು ಸಲಹೆ ನೀಡಿದ್ದರಂತೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಇನ್ನು ತಡಮಾಡದೆ ಬೆಲೆ ಏರಿಕೆ ಮಾಡಿ ಕೈತೊಳೆದುಕೊಳ್ಳಬೇಕು ಎಂಬ ಹವಣಿಕೆಯಲ್ಲಿ ಎಲ್ಲರೂ ಇದ್ದಾರೆ. ದರ ಏರಿಕೆ ನಿಶ್ಚಿತ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳುತ್ತೇವೆ:
'ಹಾಲಿನ ದರ ಮೂರು ವರ್ಷಗಳಿಂದ ಹೆಚ್ಚಾಗಿಲ್ಲ. ಹೀಗಾದರೆ ಒಕ್ಕೂಟಗಳು ತೀವ್ರ ನಷ್ಟಕ್ಕೆ ಒಳಲಾಗುತ್ತವೆ. ಎಲ್ಲಾ ದರಗಳೂ ಏರುತ್ತಿರುವಾಗ ರೈತನಿಗೆ ನ್ಯಾಯಯುತವಾದ ಬೆಲೆ ನೀಡಬೇಕಾದರೆ ದರ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯ. ಸರ್ಕಾರಕ್ಕೆ ಮತ್ತು ಕೆಎಂಎಫ್ಗೆ ಈಗಾಗಲೇ ದರ ಹೆಚ್ಚಳ ಮಾಡುವಂತೆ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಶೀಘ್ರದಲ್ಲಿಯೇ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದರ ಪರಿಷ್ಕರಣೆಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ' ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.
ಬಮೂಲ್ ವತಿಯಿಂದ ಸದ್ಯ ಪ್ರತಿ ಲೀಟರ್ ಹಾಲು ಖರೀದಿಗೆ ರೈತರಿಗೆ 24.5 ರೂ.ನಿಂದ 26ರೂ.ವರೆಗೆ (ಹಾಲಿನ ಕೊಬ್ಬಿನಾಂಶದ ಆಧಾರದ ಮೇಲೆ ದರ ವ್ಯತ್ಯಾಸ) ಕೊಡಲಾಗುತ್ತಿದೆ. ಏ.1ರಿಂದ ರೈತರಿಗೆ ನೀಡುತ್ತಿರುವ ದರದಲ್ಲಿ ಹೆಚ್ಚಳ ಮಾಡಲು ನಿರ್ಧರಿಲಾಗಿದೆ. ಅದರೆ, ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಸಭೆ ನಡೆಸಿ ತೀರ್ಮಾನಿಸಲಾಗುವುದು. ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂಪಾಯಿಯಾದರೂ ಗ್ರಾಹಕರಿಗೆ ಹೆಚ್ಚಳ ಮಾಡಿದರೆ ಮಾತ್ರ ಒಕ್ಕೂಟಗಳು ಉಳಿಯುತ್ತವೆ. ಆದರೆ, ಸರ್ಕಾರ ಈ ಬಗ್ಗೆ ಗಮನವಹಿಸುತ್ತಿಲ್ಲ ಎಂದು ನರಸಿಂಹಮೂರ್ತಿ ಹೇಳಿದರು.
3-4 ರೂ. ಹೆಚ್ಚಳ ಮಾಡುವಂತೆ ಕೇಳಿದ್ದೇವೆ:
'ಬೆಂಗಳೂರು ಹಾಲು ಒಕ್ಕೂಟವೂ ಸಹ ದರ ಹೆಚ್ಚಳಕ್ಕೆ ಕೇಳಿಕೊಂಡಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಬೆಲೆ ಏರಿಕೆಯೂ ಅನಿವಾರ್ಯವಾಗಿದೆ. ಇದೇ ಮಾ.17ರಂದು ಬಮೂಲ್ ಸಾಮಾನ್ಯ ಸಭೆ ಕರೆಯಲಾಗಿದೆ. 3-4 ರೂಪಾಯಿ ಹೆಚ್ಚಳ ಮಾಡುವಂತೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಬಳಿಕ ಅದನ್ನು ಕೆಎಂಎಫ್ ಮತ್ತು ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗುವುದು' ಎಂದು ಬಮೂಲ್ ನಿರ್ದೇಶಕ ಬಿ.ಜಿ. ಆಂಜನಪ್ಪ ಹೇಳಿದರು.
'ಬೇಸಿಗೆ ಸಂದರ್ಭದಲ್ಲಿಯೂ ಸಹ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಉತ್ತಮವಾಗಿದೆ. ಬಮೂಲ್ ವ್ಯಾಪ್ತಿಯಲ್ಲಿಯೇ ಪ್ರತಿದಿನ 15 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಎಲ್ಲ ರೀತಿಯ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರೈತರು ಹಾಲು ಖರೀದಿ ದರವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸುತ್ತಿದೆ. ಆದ್ದರಿಂದ ದರ ಏರಿಕೆ ಅನಿವಾರ್ಯ' ಎಂದು ಹೇಳಿದರು.
ಪ್ರತಿದಿನ 75 ಲಕ್ಷ ಲೀಟರ್ ಸಂಗ್ರಹ:
ಸದ್ಯ ಕೆಎಂಎಫ್ ಅಧೀನದಲ್ಲಿ ಬಮೂಲ್ ಸಹಿತ 14 ಹಾಲು ಒಕ್ಕೂಟಗಳು ಇವೆ. ಎಲ್ಲ ಒಕ್ಕೂಟಗಳು ಸೇರಿ ಪ್ರತಿನಿತ್ಯ 75 ಲಕ್ಷ ಲೀಟರ್ ಹಾಲು ಸಂಗ್ರಹ ಆಗುತ್ತಿದೆ. ಪ್ರತಿನಿತ್ಯ ಗ್ರಾಹಕರಿಗೆ ನೀಡುವ ಪಾಕೆಟ್ ಹಾಲುಗಳು, ಮೊಸರು, ಮಜ್ಜಿಗೆ, ತುಪ್ಪ, ಐಸ್ಕ್ರೀಮ್, ಸಹಿ ಪದಾರ್ಥಗಳು ಮತ್ತು ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಹಾಲಿನ ಪುಡಿ ಸಹಿತ ವಿವಿಧ ರೀತಿಗಳನ್ನು ಪ್ರತಿನಿತ್ಯ ಇಷ್ಟು ಹಾಲನ್ನು ವಿಲೇವಾರಿ ಮಾಡಲಾಗುತ್ತದೆ.
Recommended Video