ಅಂದು ಗೋಗ್ರಾಸದ ನಂತರ ಮಹಾರಾಜರ ಭೋಜನ, ಆದರೆ ಇಂದು?
ಗೋವುಗಳಿಗೆ ಗ್ರಾಸವನ್ನು ಸಮರ್ಪಿಸಿದ ನಂತರ ಮೈಸೂರು ಮಹಾರಾಜರು ಭೋಜನ ಸ್ವೀಕರಿಸುತ್ತಿದ್ದರು, ಆದರೆ ಇಂದು ನಮ್ಮನ್ನಾಳುತ್ತಿರುವ ವ್ಯವಸ್ಥೆಯೇ ಗೋವಂಶದ ನಾಶಕ್ಕೆ ಮುಂದಾಗಿದೆ ಎಂದು ರಾಮಚಂದ್ರಾಪುರ ಮಠದ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ.
ಮೈಸೂರು, ನ 21: ಗೋವುಗಳಿಗೆ ಗ್ರಾಸವನ್ನು ಸಮರ್ಪಿಸಿದ ನಂತರ ಮೈಸೂರು ಮಹಾರಾಜರು ಭೋಜನ ಸ್ವೀಕರಿಸುತ್ತಿದ್ದರು, ಆದರೆ ಇಂದು ನಮ್ಮನ್ನಾಳುತ್ತಿರುವ ವ್ಯವಸ್ಥೆಯೇ ಗೋವಂಶದ ನಾಶಕ್ಕೆ ಮುಂದಾಗಿದೆ ಎಂದು ರಾಮಚಂದ್ರಾಪುರ ಮಠದ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ.
ಸೋಮವಾರ (ನ 21) ಮೈಸೂರಿನ ಜಗಮೋಹನ ಅರಮನೆಯ ಆವರಣದಲ್ಲಿ ನಡೆದ ಮಂಗಲ ಗೋಯಾತ್ರೆಯ ಸಭೆಯಲ್ಲಿ ಮಾತನಾಡುತ್ತಿದ್ದ ರಾಘವೇಶ್ವರ ಶ್ರೀಗಳು, ಮೈಸೂರು ಮಹಾರಾಜರಿಂದ ಸಂರಕ್ಷಿತವಾಗಿದ್ದ ಅಮೃತ ಮಹಲ್ ತಳಿ ಇಂದು ಅಳಿವಿನಂಚಿನಲ್ಲಿದೆ.
ಮಹಾರಾಜರ ಕಾಲದಲ್ಲಿ 11ಲೀಟರ್ ಹಾಲು ಕೊಡುತ್ತಿದ್ದ ಅಮೃತ ಮಹಲ್ ಈಗ ಕೇವಲ ಒಂದು ಲೀಟರ್ ಹಾಲು ಕೊಡುವ ಪರಿಸ್ಥಿತಿಗೆ ತಲುಪಿದೆ. ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಮೃತ ಮಹಲ್ ಸಂತತಿ ಇಂದು ಸಾವಿರಗಳಿಗೆ ಇಳಿಕೆ ಕಂಡಿದೆ ಎಂದು ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ. (ರಾಘವೇಶ್ವರ ಶ್ರೀಗಳ ವಿರುದ್ಧ ಹೈಕೋರ್ಟ್ ಕಿಡಿ)
ಅಮೃತ ಮಹಲ್ ತಳಿಗಳನ್ನು ರಕ್ಷಿಸದೇ ಇದ್ದರೆ ಅವು ಕಣ್ಮರೆಯಾಗುವುದು ನಿಶ್ಚಿತ, ಅವುಗಳನ್ನು ರಕ್ಷಿಸಲು ರಾಮಚಂದ್ರಾಪುರ ಮಠ ಸಿದ್ದವಿದೆ. ಗೋವುಗಳನ್ನು ಬಿಟ್ಟುಕೊಡಿ, ಭೂಮಿ ಬೇಡ, ಹಣ ಬೇಡ. ತಳಿ ರಕ್ಷಣೆಗೆ ಗೋವುಗಳನ್ನು ಕೊಡಿ ಎಂದು ಸರಕಾರಕ್ಕೆ ಶ್ರೀಗಳು ಆಗ್ರಹಿಸಿದರು.

ಅಂದು ರಾಜರು ಗೋ ರಕ್ಷಣೆ ಮಾಡುತ್ತಿದ್ದರು, ಧರ್ಮ ಇರುವಲ್ಲಿ ರಾಜರು ರಕ್ಷಣೆ ಕೊಡುತ್ತಿದ್ದರು, ಗೋವು ಧರ್ಮದ ಪ್ರತೀಕ. ಹಾಗಾಗಿ, ಮೈಸೂರು ರಾಜರು ಗೋವುಗಳನ್ನು ಬಹಳ ಚೆನ್ನಾಗಿ ಪೋಷಿಸಿದ್ದರು, ಇಂದಿನ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳುತ್ತಾರೆ, ಹಾಗಾಗಿ ಗೋರಕ್ಷಣೆ ನಮ್ಮ ಹೊಣೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ತ್ರಿನೇತ್ರ ಮಹಾಂತ ಸ್ವಾಮಿ ಬೇಬಿ ಮಠ, ನಮಗೆ ಸ್ವಲ್ಪ ಕಷ್ಟವಾದರೆ ನಾವು ಹೋರಾಟ ಮಾಡುತ್ತೇವೆ. ಗೋವು ಇಷ್ಟೊಂದು ಕಷ್ಟ ಅನುಭವಿಸುತ್ತಿರುವಾಗ, ಗೋಹತ್ಯೆ ನಿಷೇಧ ಆಗಲಿ ಅಂತ ಯಾಕೆ ಹೋರಾಟ ಮಾಡಬಾರದು?
ಅಪ್ಪ ಅಮ್ಮನಿಗೆ ವಯಸ್ಸಾಯಿತು ಅಂತ ಅವರನ್ನು ಕಡಿಯೋಕೆ ಕೊಡುತ್ತೆವೇಯೇ? ಏನೇ ಕಷ್ಟ ಎದುರಾದರೂ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಬೇಕು ಎಂಬ ಕನಸು ಗಾಂಧೀಜಿಗೆ ಹೇಗಿತ್ತೋ, ಹಾಗೆಯೇ ರಾಘವೇಶ್ವರ ಶ್ರೀಗಳು ಆಕ್ರಮಣಗಳ ನಡುವೆಯೂ ಗೋವಿಗಾಗಿ ಆಂದೋಲನ ಮಾಡುತ್ತಿದ್ದಾರೆ ಎಂದರು.
ಸಭೆಯಲ್ಲಿ ರಾಮಕೃಷ್ಣಾಶ್ರಮದ ಮಹೇಶಾತ್ಮಾನಂದಜೀ, ಚಿದಾನಂದ ಮಹಾಸ್ವಾಮಿ ಹೊಸಮಠ , ನೀಲಕಂಠೇಶ್ವರ ಮಠದ ಸ್ವಾಮಿಗಳು, ಇಳೈ ಆಳ್ವರ್ ಸ್ವಾಮಿಗಳು, ಸಿ ವಿ ಕೃಷ್ಣಮೂರ್ತಿ, ಪಾಂಡೇಲು ಗೋಪಾಲಕೃಷ್ಣ ಭಟ್ , ರೈತ ಮುಖಂಡರಾದ ಬೇಳಗುಳ ಸುಬ್ರಹ್ಮಣ್ಯಂ, ಉದ್ಯಮಿಗಳಾದ ಎಸ್ ಕೆ ಮಿತ್ತಲ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications