ನಾನು ಸಂತೋಷ್ ಅಣ್ಣತಮ್ಮಂದಿರಂತೆ, ಬಿಎಸ್ವೈ: ಏನೋ ಹೊಗೆ ಆಡ್ತಾ ಇದೆ!
ನಾನು ಮತ್ತು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅಣ್ಣತಮ್ಮಂದಿರಂತೆ, ನಮ್ಮ ನಡುವೆ ಏನೂ ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶಿಕಾರಿಪುರದಲ್ಲಿ, ಬುಧವಾರ (ಸೆ 27) ಹೇಳಿದ್ದಾರೆ.
ಸಂತೋಷ್ ಮತ್ತು ನಾವು ಜೊತೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ. Actually, ನಮ್ಮ ನಡುವೆ ಏನೂ ಸಮಸ್ಯೆಯಿಲ್ಲ, ಹಿಂದೆ ಏನೇನು ಸೃಷ್ಟಿಯಾಗಿತ್ತೋ ಅದೆಲ್ಲಾ ಮಾಧ್ಯಮದವರಿಂದಾಗಿ ಎಂದು ಯಡಿಯೂರಪ್ಪ ಮಾಧ್ಯಮದವರ ಮೇಲೆ ಗೂಬೆಕೂರಿಸಿದ್ದಾರೆ.
ಮಾಧ್ಯಮದವರ ಮೇಲೆ ಆರೋಪ ಹೊರಿಸುವ ಮೊದಲು, ಪಕ್ಷದ ಆಂತರಿಕ ಸಮಸ್ಯೆ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದಾಗ, "ಪಕ್ಷದ ಈಗಿನ ಎಲ್ಲಾ ಸಮಸ್ಯೆಗೆ ಸಂತೋಷ್ ಅವರೇ ನೇರ ಕಾರಣ" ಎಂದು ಸಾರ್ವಜನಿಕವಾಗಿ ಹೇಳಿದ್ದನ್ನು ಬಿಎಸ್ವೈ ಒಮ್ಮೆ ಸ್ಮರಿಸಿಕೊಂಡರೆ ಒಳ್ಳೆಯದು.
ಕೆಲವೊಂದು ಮೂಲಗಳ ಪ್ರಕಾರ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಮತದಾರರ ಮುಂದೆ ಹೋಗಬೇಕು ಎನ್ನುವ ಕಟ್ಟುನಿಟ್ಟಿನ ಫರ್ಮಾನು ದೆಹಲಿಯಿಂದ ಬಂದಿರುವುದು, ಜೊತೆಗೆ ಉಸ್ತುವಾರಿಯಾಗಿರುವ ಪಿಯೂಶ್ ಗೋಯಲ್ ಮತ್ತು ಪ್ರಕಾಶ್ ಜಾವ್ಡೇಕರ್ 'ಗ್ರೌಂಡ್ ರಿಯಾಲಿಟಿ' ವರದಿ ಅಮಿತ್ ಶಾಗೆ ನೀಡಿರುವ ಹಿನ್ನಲೆಯಲ್ಲಿ ಅಣ್ಣತಮ್ಮ ಹೇಳಿಕೆ ಯಡಿಯೂರಪ್ಪನವರ ಕಡೆಯಿಂದ ಬಂದಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಮತ್ತು ಸಂತೋಷ್ ನಡುವಿನ ಸಂಬಂಧ 'ಅಷ್ಟಾಗಿ' ಇನ್ನೂ ಸರಿದಾರಿಗೆ ಬಂದಿಲ್ಲ ಎನ್ನುವ ಮಾಹಿತಿಯಿದೆ. ಜೊತೆಗೆ, ಬೂತ್ ಕಮಿಟಿ ನೇಮಕಾತಿ ವಿಚಾರದಲ್ಲಿ ಬಿ ಎಲ್ ಸಂತೋಷ್ ಸೂಚಿಸಿದ ಮುಖಂಡರಿಗೆ ವರಿಷ್ಠರು ಹೆಚ್ಚಿನ ಮಣೆ ನೀಡಿರುವುದರಿಂದ, ಇಬ್ಬರ ನಡುವೆ ಅಂತರ ಇನ್ನೂ ದೂರದೂರವಾಗಿಯೇ ಇದೆ.
ಅಮಿತ್ ಶಾಗೆ ತಲೆನೋವಾಗಿರುವ ರಾಜ್ಯ ಬಿಜೆಪಿ ಮುಖಂಡರಿಗಿಲ್ಲದ ಹೋರಾಟದ ಕಿಚ್ಚು, ಮುಂದೆ ಓದಿ..

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವಿರತ ಪ್ರಯತ್ನ
ದಕ್ಷಿಣಭಾರತದಲ್ಲಿ ಬಿಜೆಪಿಗೆ ಐದು ವರ್ಷದ ಹಿಂದೆ ತೆರೆದಿದ್ದ ಬಾಗಿಲನ್ನು ಮತ್ತೆ ತೆರೆಯಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವಿರತ ಪ್ರಯತ್ನ ನಡೆಸುತ್ತಿದ್ದರೂ, ಅದಕ್ಕೆ ಕರ್ನಾಟಕದಲ್ಲಿ ಶಕ್ತಿ ತುಂಬ ಬೇಕಾದವರು ರಾಜ್ಯ ಮುಖಂಡರು. ಅದ್ಯಾಕೋ, ಯಡಿಯೂರಪ್ಪ ಸಹಿತ ರಾಜ್ಯ ಮುಖಂಡರ ಗಾಡಿ 'ಟಾಪ್ ಗೇರಿಗೆ' ಹತ್ತುತ್ತಲೇ ಇಲ್ಲದಿರುವುದು ಅಮಿತ್ ಶಾಗೆ ತಲೆನೋವಾಗಿ ಪರಿಣಮಿಸುತ್ತಿದೆ ಎನ್ನುವ ಮಾಹಿತಿಯಿದೆ.

ಸಿದ್ದರಾಮಯ್ಯ ಮತ್ತು ಅಮಿತ್ ಶಾ ನಡುವಿನ ಫೈಟ್
ಚುನಾವಣೆ ಗೆಲ್ಲಬೇಕು, ಅಧಿಕಾರ ಉಳಿಸಿಕೊಳ್ಳಬೇಕು ಎಂದು ದೆಹಲಿ ಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆ ನೋಡಿದರೆ, ಇದು ಸೋನಿಯಾ ಗಾಂಧಿ ಮತ್ತು ನರೇಂದ್ರ ಮೋದಿ ನಡುವಿನ ಫೈಟ್ ಅಲ್ಲ, ಬದಲಿಗೆ ಇದು ಸಿದ್ದರಾಮಯ್ಯ ಮತ್ತು ಅಮಿತ್ ಶಾ ನಡುವಿನ ಫೈಟ್ ಎಂದೇ ಬಿಂಬಿಸಲಾಗುತ್ತಿದೆ. ಆದರೆ, ರಾಜ್ಯ ಬಿಜೆಪಿ ನಾಯಕರು ಅಮಿತ್ ಶಾ ವೇಗಕ್ಕೆ ಸ್ಪಂದಿಸದೇ ಇರುವುದು ಸದ್ಯದ ಮಟ್ಟಿಗೆ ಪಕ್ಷಕ್ಕೆ ಹಿನ್ನಡೆ.

ಸದ್ಯದ ಮಟ್ಟಿಗೆ ಕಾಂಗ್ರೆಸ್ ಸ್ಪಷ್ಟ ಮೇಲುಗೈ
ಅಧಿಕಾರ ನಾವು ಮತ್ತೆ ಉಳಿಸಿಕೊಳ್ಳುತ್ತೇವೆ ಎನ್ನುವ ವಿಶ್ವಾಸ ಕಾಂಗ್ರೆಸ್ಸಿಗರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು, ನಮ್ಮ ಪಕ್ಷ ಮತ್ತೆ ಆಡಳಿತ ನಡೆಸುವಂತಾಗಬೇಕು ಎನ್ನುವ ಛಲ ಸದ್ಯದ ಮಟ್ಟಿಗೆ ಬಿಜೆಪಿ ಮುಖಂಡರಿಂದ ಕಾಣುತ್ತಿಲ್ಲ. ಯಡಿಯೂರಪ್ಪನವರ ಮೇಲೆ ಒಂದಲ್ಲಾ ಒಂದು ಕೇಸ್, FIR ದಾಖಲಾಗುತ್ತಿರುವುದು, ಬಿಎಸ್ವೈ ಮತ್ತು ಈಶ್ವರಪ್ಪನವರ ನಡುವಿನ ಮನಸ್ತಾಪ ಜೊತೆಗೆ ಇವರ ಪಿಎ ವೃತ್ತಾಂತವನ್ನು ಇಟ್ಟುಕೊಂಡು, ಕಾಂಗ್ರೆಸ್ ಸದ್ಯ ಸ್ಪಷ್ಟ ಮೇಲುಗೈ ಸಾಧಿಸುತ್ತಿದೆ.

ಬಿ ಎಲ್ ಸಂತೋಷ್ ಬೆಂಬಲಿಗರು ಜಾಸ್ತಿ
ಇತ್ತೀಚೆಗೆ ಬೂತ್ ಕಮಿಟಿಗೆ ನಲವತ್ತು ಜನರನ್ನು ಬಿಜೆಪಿ ನೇಮಿಸಿತ್ತು. ಅದರಲ್ಲಿ ಮೂವತ್ತಕ್ಕೂ ಹೆಚ್ಚು ನಾಯಕರು ಬಿ ಎಲ್ ಸಂತೋಷ್ ಬೆಂಬಲಿಗರು ಎನ್ನಲಾಗುತ್ತಿದೆ. ಅರುಣ್ ಕುಮಾರ್ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. ಗಿರೀಶ್ ಪಟೇಲ್, ಜಯತೀರ್ಥ ಕಟ್ಟಿ, ಫಣೀಶ್, ಎಂ ಬಿ ನಂದೀಶ್, ಯತೀಶ್ ಆರ್ವಾರ್, ಮಹೇಶ್ ತೆಂಗಿನಕಾಯಿ, ಎಸ್ ವಿ ರಾಘವೇಂದ್ರ ಮುಂತಾದವರು ಕಮಿಟಿಗೆ ಆಯ್ಕೆಯಾದ ಸದಸ್ಯರು.

ಯಡಿಯೂರಪ್ಪ 'ಅಣ್ಣತಮ್ಮ' ಹೇಳಿಕೆ
ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಆಯಕಟ್ಟಿನ ಕಮಿಟಿಯಾಗಿರುವ ಈ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಜಗನ್ನಾಥ ಭವನದಲ್ಲಿ ಯಡಿಯೂರಪ್ಪ ಮತ್ತು ಸಂತೋಷ್ ನಡುವೆ ವಾಗ್ಯುದ್ದ ನಡೆದಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಎಲ್ಲಾ ಬೆಳವಣಿಗೆಗಳ ವರದಿ ವರಿಷ್ಠರ ಕೈಸೇರಿದ್ದವು, ಹಾಗಾಗಿ ನಾನು ಮತ್ತು ಸಂತೋಷ್ ಅಣ್ಣತಮ್ಮಂದಿರಂತೆ ಎನ್ನುವ ಹೇಳಿಕೆ ಯಡಿಯೂರಪ್ಪನವರ ಕಡೆಯಿಂದ ಬಂದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.











Click it and Unblock the Notifications