ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ: ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ
ಬೆಳಗಾವಿ,ಡಿಸೆಂಬರ್21 : ಸಚಿವ ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ, ನಾನು ಬಿಜೆಪಿ ಪಕ್ಷ ಕಟ್ಟುವಾಗ ಮನೆಗೆ ಟಿಕೆಟ್ ಬೇಕು ಎಂದು ಬರ್ತಿದ್ದ ಎಂದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಮುರುಗೇಶ್ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್ ಅವರು, ನಾನು ಕೇಂದ್ರ ಸಚಿವ ಆಗಲು ಯಡಿಯೂರಪ್ಪ ಸಹಕಾರ ಸಿಕ್ಕಿರಲಿಲ್ಲ ಎಂದಿದ್ದಾರೆ. ಮುರುಗೇಶ್ ನಿರಾಣಿ ನಮ್ಮ ಮುಂದೆ ಬಚ್ಚಾ ನಾವು ಬಿಜೆಪಿ ಕಟ್ಟುವಾಗ. ನಮ್ಮ ಮನೆಗೆ ಟಿಕೆಟ್ ಬೇಕು ಎಂದು ಬರ್ತಿದ್ದ. ಇವತ್ತು ಹಿಂದೂ ಸ್ವಾಮೀಜಿಗಳ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಿರುವ ನಿರಾಣಿ ಈ ಹಿಂದೆ ವಾಟ್ಸಪ್ ಮೆಸೇಜ್ ನಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನ ಮಾತನಾಡಿದ್ದರು ಎಂದು ಹೇಳಿದ್ದಾರೆ.
ಮುರುಗೇಶ್ ನಿರಾಣಿ ಅವರನ್ನ ಮಂತ್ರಿನ್ನಾಗಿ ಮಾಡಿದ್ದು ದುರ್ದೈವ. ಅವರು ಹೇಗೆ ಮಂತ್ರಿ ಆದರು, ಏನೆಲ್ಲಾ ಪ್ರಲಾಪ ಮಾಡಿದ್ರು ಎಂದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನೂ ಮುರುಗೇಶ್ ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡಿದ್ರೆ ವಿಧಾನಸೌಧ ಮರ್ಯಾದೆ ಹೋಗುತ್ತೆ ಎಂದು ಹೇಳಿದರು.
ಇನ್ನೂ ನಾನು ಕೇಂದ್ರ ಸಚಿವ ಆಗಲು ಅನಂತ್ ಕುಮಾರ್, ಪ್ರಮೋದ್ ಮಹಾಜನ್ ಕಾರಣ.ಯಡಿಯೂರಪ್ಪ ಏನೂ ಪಾತ್ರ ಇಲ್ಲ. ಯಡಿಯೂರಪ್ಪ ಮತ್ತೆ ಪುನರ್ಜನ್ಮ ಆಗಿದ್ದು ನಾನು ಮಂತ್ರಿ ಆದ ಬಳಿಕ ಎಂದರು.
ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ: ಯತ್ನಾಳ್ ವಿರುದ್ಧ ನಿರಾಣಿ ವಾಗ್ದಾಳಿ
ತಮ್ಮ ಜೀವವವನ್ನೇ ತ್ಯಾಗ ಮಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ದ ಸಚಿವ ಮುರುಗೇಶ್ ನಿರಾಣಿ ಟಾಂಗ್ ನೀಡಿದ್ದಾರೆ.
ವಚನನಂದ ಶ್ರೀಗಳೇ ಇರಲಿ ಅಥವಾ ಯಾರೇ ಇರಲಿ ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಧಾರ್ಮಿಕ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಬೇಕಾದ ಅಗತ್ಯವಿಲ್ಲಘಿ. ಇದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಹಳ ದೊಡ್ಡ ನಾಯಕರು. ಅವರ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ನಾವು ಯಾರ ಬಗ್ಗೆಯಾದರೂ ಮಾತನಾಡಿದರೆ ಅದಕ್ಕೊಂದು ತೂಕವಿರಬೇಕು. ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಹೀಗೆ ಮಾತನಾಡಿದರೆ ಅದು ನಮ್ಮ ಕೀಳು ಅಭಿರುಚಿಯನ್ನು ತೋರಿಸುತ್ತದೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ನಿರಾಣಿ ವಾಗ್ದಾಳಿ ನಡೆಸಿದರು.
ಯಾವುದೇ ಸ್ವಾಮೀಜಿಗಳ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು. ಹಿಂದೂ ಸಮಾಜದಲ್ಲಿ ಖಾವಿ ಧರಿಸಿದವರಿಗೆ ಸಾಕಷ್ಟು ಗೌರವ ಕೊಡುತ್ತಾರೆ. ಪಂಚಮಸಾಲಿ ಸೇರಿದಂತೆ ಮತ್ತೊಂದು ಸಮಾಜದ ಧಾರ್ಮಿಕ ಮುಖಂಡರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದರು.
ಯತ್ನಾಳ್ ದೊಡ್ಡವರ ಬಗ್ಗೆ ಮಾತನಾಡಿದರೆನಾನು ದೊಡ್ಡ ವ್ಯಕ್ತಿಯಾಗುತ್ತೇನೆ ಎಂದು ಭಾವಿಸಿದ್ದಾರೆ. ಶ್ರೀಗಳು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಹೆಚ್ಚಿನ ಮಹತ್ವ ಕೊಡಬಾರದು ಎಂದರು.
ಯಡಿಯೂರಪ್ಪ ಅತ್ಯಂತ ದೊಡ್ಡ ವ್ಯಕ್ತಿ
ಇಡೀ ದಕ್ಷಿಣ ಭಾರತದಲ್ಲೆ ಯಡಿಯೂರಪ್ಪ ಅತ್ಯಂತ ದೊಡ್ಡ ವ್ಯಕ್ತಿ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ದೊಡ್ಡದಿದೆ. ಆದರೆ ಯತ್ನಾಳ್ ತಾನು ಯಾರ ಬಗ್ಗೆ ಮಾತನಾಡಿ ಧಕ್ಕಿಸಿಕೊಳ್ಳಬಲ್ಲೆ ಎಂದುಕೊಂಡಿದ್ದಾರೆ. ಇವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ನಿರಾಣಿ ವ್ಯಂಗ್ಯವಾಡಿದರು.
ಯಡಿಯೂರಪ್ಪನವರ ಬಗ್ಗೆ ಲಘುವಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ಎಂದೂ ವಿರೋಧಿಸಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಅದನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.
ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 3ಬಿಗೆ ಸೇರ್ಪಡೆ ಮಾಡಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪನವರು. ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದರು. ಸಮುದಾಯಕ್ಕೆ ಅವರ ಕೊಡುಗೆ ಸಾಕಷ್ಟಿದೆ ಎಂದು ನಿರಾಣಿ ಪ್ರಶಂಶಿಸಿದರು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೊಂದು ಕಾನೂನಾತ್ಮಕ ವಿಷಯ. ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡುವವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆತುರಕ್ಕೆ ಬಿದ್ದು ನಿರ್ಧಾರಗಳನ್ನು ತೆಗೆದುಕೊಂಡರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಸರ್ಕಾರ ಇಡುತ್ತದೆ ಎಂದು ಹೇಳಿದರು.