ಉಪಚುನಾವಣೆಯಲ್ಲಿ ನನ್ನ ವಿರುದ್ದ ಗೆದ್ದವನು ದನ ಮೇಯಿಸೋಕೆ ಹೋದ್ನಾ: ಶ್ರೀನಿವಾಸ್ ಪ್ರಸಾದ್
ಉಪಚುನಾವಣೆಯಲ್ಲಿ ಸೋತು ಏಳು ವರ್ಷಗಳೇ ಕಳೆದರೂ ಇನ್ನು ಸೋಲಿನ ಹತಾಶೆಯಿಂದ ಹೊರಬರದ ಸಂಸದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದ್ದಾರೆ.
ಮೈಸೂರು, ಫೆಬ್ರವರಿ28: ವಿಧಾನಸಭಾ ಎಲೆಕ್ಷನ್ ಹತ್ತಿರ ವಾಗುತ್ತಿದ್ದಂತೆ ರಾಜ್ಯ ರಾಜಕೀಯ ಗರಿಗೆದರಿದೆ. ಮೈಸೂರು ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಂಜನಗೂಡಿನಲ್ಲಿ ಮಾಧ್ಯಮಗಳ ಜೊತೆಗೆ ಸಂಸದ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ನಂಜನಗೂಡು ಉಪಚುನಾವಣೆಯಲ್ಲಿ ಗೆದ್ದು ಕಳೆದ ವಿಧಾನಸಭೆಯಲ್ಲಿ ಸೋಲನುಭವಿಸಿದ ಕಳಲೆ ಕೇಶವಮೂರ್ತಿ ಈಗ ಎಲ್ಲಿ ಹೋದ? ಎಂದು ಕಿಡಿಕಾರಿದ್ದಾರೆ.

ಕಳಲೆ ಕೇಶವಮೂರ್ತಿ ಈಗ ಪತ್ತೆ ಇಲ್ಲ. ಅವನು ಈಗ ದನ ಮೇಯಿಸೋಕೆ ಹೋದ್ನಾ. ಎಮ್ಮೆ ಮೇಯಿಸೋಕೆ ಹೋದನಾ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಈಗಾಗಲೇ ಆತನ ಜಾಗಕ್ಕೆ ಧ್ರುವ ನಾರಾಯಣ್, ಹೆಚ್.ಸಿ ಮಹದೇವಪ್ಪ ಕಚ್ಚಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಆಟ ಆಡಿದವರು ಎಲ್ಲಿ ಹೋದರು. ನನ್ನ ವಿರುದ್ದ ಆಟ ಆಡಿದರವರಲ್ಲಿ ಒಬ್ಬ ಟಿ. ನರಸೀಪುರಲ್ಲಿ ಅವಿತುಕೊಂಡ. ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಕೋಲಾರಕ್ಕೆ ಹೋದರು ಎಂದು ಲೇವಡಿ ಮಾಡಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್ ಬಿಜೆಪಿಯನ್ನ ಸೇರಿದರು. ಈ ವೇಳೆ ಕಾಂಗ್ರೆಸ್ ಸ್ಪರ್ಧಿಯಾಗಿದ್ದ ಕಳಲೆ ಕೇಶವಮೂರ್ತಿ ವಿರುದ್ಧ ಸೋಲು ಅನುಭವಿಸಿದ್ರು. ನಂತರ 2018 ರ ನಡೆದ ಎಲೆಕ್ಶನ್ ನಲ್ಲಿ ಅಳಿಯನನ್ನ ಗೆಲುವಲ್ಲಿ ಶ್ರೀನಿವಾಸ್ ಪ್ರಸಾದ್ ಪ್ರಮುಖ ಪಾತ್ರ ವಹಿಸಿದರು.
ನಂಜನಗೂಡು ಕ್ಷೇತ್ರದ ಶಾಸಕರಾದ ಹರ್ಷವರ್ಧನ್ ಗೆಲುವಿಗೆ ಕಳೆದ ಬಾರಿ ಚುನಾವಣೆಯಲ್ಲಿ ಸಾಕಷ್ಟು ಶ್ರಮವಹಿಸಿದರು. ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಪೈಪೋಟಿ ಇರುವುದರಿಂದ ಅಳಿನ ಪರವಾಗಿ ಸಂಸದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಇನ್ನೂ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಶ್ರೀನಿವಾಸ್ ಪ್ರಸಾದ್ ತಮ್ಮ ಅಳಿಯನ ಪರವಾಗಿ ಕ್ಷೇತ್ರದಲ್ಲಿ ಹೆಚ್ಚು ಓಡಾಟವನ್ನ ಶುರು ಮಾಡಿದ್ದಾರೆ ಎನ್ನಲಾಗಿದೆ.

ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಡಲಿದ್ದು, ಬಿಜೆಪಿಯಿಂದ ಹಾಲಿ ಶಾಸಕ ಹರ್ಷವರ್ಧನ್ ಗೆ ಟಿಕೆಟ್ ಬಹುತೇಕ ಪಕ್ಕಾ ಆಗಿದ್ದು, ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ್ ಹಾಗೂ ಮಾಜಿ ಸಚಿವ ಮಹದೇವಪ್ಪ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಇತ್ತ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷದಿಂದ ಟಿಕೆಟ್ ಯಾರ ಪಾಲಾಗುತ್ತೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications