ಈಶ್ವರಪ್ಪ, ಶೆಟ್ಟರ್ ಎಲ್ಲರನ್ನೂ ಮುಗಿಸಿಬಿಟ್ರಲ್ಲ; ಮತ್ತೆ ಸಿಡಿದೆದ್ದ ರೇಣುಕಾಚಾರ್ಯ ಪಕ್ಷದ ನಾಯಕರ ವಿರುದ್ದ ಹೇಳಿದ್ದೇನು?
ಬೆಂಗಳೂರು, ಜೂನ್ 29: ಈಶ್ವರಪ್ಪ, ಜಗದೀಶ್ ಶೆಟ್ಟರ್ ಎಲ್ಲರನ್ನು ಮುಗಿಸಿಬಿಟ್ರಲ್ಲ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ರು. ಆದರೆ ಅವರ ಎರಡು ಕೈಗಳನ್ನು ಕಟ್ಟಿ ಹಾಕಿದ್ರು ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತಾಡಿಲ್ಲ. ಬಿಜೆಪಿ ನನಗೆ ಒಂದು ತಾಯಿಯ ಸಮಾನ ಆದರೆ, ಕೆಲವು ದೌರ್ಭಾಗ್ಯ ಗಳನ್ನು ಅನಿವಾರ್ಯವಾಗಿ ಮಾತಾಡಬೇಕಾಗುತ್ತದೆ. ಮಾಧ್ಯಮಗಳ ಮುಂದೆ ಮಾತಾಡೋದು ತಪ್ಪು ಹೌದು. ಯಾರಿಗೋ ಅಪಮಾನ, ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ. ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ ಇಳಿಯುವವರೆಗೂ ಮಾತಾಡಿದ್ರಲ್ಲ. ಶಾಸಕರ ಅಭಿಪ್ರಾಯ ಯಾಕೆ ಸಂಗ್ರಹ ಮಾಡಬೇಕಿತ್ತು.

ಯಡಿಯೂರಪ್ಪ ರನ್ನು ಇಳಿಸಲೇಬೇಕೆಂದು ಕೆಲವರನ್ನು ಮಾತಾಡಿಸೋಕೆ ಬಿಟ್ರು. ಯಡಿಯೂರಪ್ಪ ರನ್ನು ಯಾವ ಪುರುಷಾರ್ಥಕ್ಮಾಗಿ ಇಳಿಸಿದ್ರಿ..? ಎಂದು ಪ್ರಶ್ನಿಸಿದ ಅವರು, ಮತ ಕೇಳೋಕೆ ಯಡಿಯೂರಪ್ಪರ ಮುಖ ಬೇಕು. ಅಧಿಕಾರದ ಎಂಜಾಯ್ ಮಾಡಲು ಯಡಿಯೂರಪ್ಪ ಬೇಕು. ಮೇ 6 ರಂದು ಬಿಜೆಪಿ ಕಚೇರಿಯಿಂದ ಒಬ್ಬರು ಫೋನ್ ಮಾಡ್ತಾರೆ, ಆಯನೂರರಲ್ಲಿ 25 ಸಾವಿರ ಜನರನ್ನು ಸೇರಿಸಬೇಕು ಅಂತಾ. ಹೊನ್ಮಾಳಿಗೆ ಮೋದಿ ಬರಲಿ ನಾನು ಬೇಕಿದ್ರೆ ಲಕ್ಷ ಜನರನ್ನು ಸೇರಿಸ್ರೀನಿ. ಆದರೆ ಅಲ್ಲಿಗೆ ನಾನು ಯಾಕೆ ಕರೆದುಕೊಂಡು ಬರಲಿ. ನಾನು ಹೇಳಿದ್ದೆ ಬರಲ್ಲ ಅಂತಾ, ಅಮೇಲೆ ಅವರ ಮೋದಿ ಪಕ್ಕದಲ್ಲಿ ಸೀಟು ಇದೆ ಬನ್ನಿ ಅಂದ್ರು, ಆದರೆ ನಾನು ಬರಲ್ಲ ಅಂದೆ, ಮೋದಿ ಯಡಿಯೂರಪ್ಪ ಮುಖ ತೋರಿಸಿ ಮತ ಕೇಳಬೇಕು ಇವರಿಗೆ ಅಷ್ಟೇ. ಯಡಿಯೂರಪ್ಪ ಸೈಕಲ್ ಓಡಿಸಿ, ಸ್ಕೂಟರ್ ಓಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು ಎಂದರು.
ನಾನು ಎತ್ತ ತಾಯಿ ಆಣೆಗೂ ಯಡಿಯೂರಪ್ಪ ನನಗೇನೂ ಹೇಳಿಕೊಟ್ಟಿಲ್ಲ. ಹಿಂದೆ ನನಗೂ ಅವರ ನಡುವೆ ತುಂಬಾ ಘರ್ಷಣೆಗಳು ಆಗಿವೆ, ಯಡಿಯೂರಪ್ಪ ಅಧಿಕಾರದಿಂದ ಇಳಿದೆ ಇದ್ದಿದ್ದೆ ನಾವು ನಮ್ಮಪ್ಪಾರಣೆಗೂ ಅಧಿಕಾರದಿಂದ ಇಳಿಯೋಕೆ ಆಗ್ತಿರಲಿಲ್ಲ.ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವರು ನಮಗೆ ಪಾಠ ಮಾಡ್ತಾರೆ. ತಮಿಳುನಾಡಿನಿಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡ್ತಾರೆ. ಏನು ಅಣ್ಣಾಮಲೈ ದೊಡ್ಡ ಹೀರೋನಾ? ಎಂದು ಕಿಡಿಕಾರಿದ ಅವರು, ಈಶ್ವರಪ್ಪ, ಜಗದೀಶ್ ಶೆಟ್ಟರ್ ರನ್ನು ಎಲ್ಲರನ್ನು ಮುಗಿಸಿಬಿಟ್ರಲ್ಲ ಎಂದು ಕಿಡಿಕಾರಿದರು.
ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ರು. ಆದರೆ ಅವರ ಕೈಗಳ ಎರಡನ್ನು ಕಟ್ಟಿ ಹಾಕಿದ್ರು. ನಾಯಕರ ವರ್ತನೆಗಳೇ ಬಿಜೆಪಿ ರಾಜ್ಯದಲ್ಲಿ ಸೋಲಿಗೆ ಕಾರಣ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಕಚೇರಿಯಲ್ಲಿ ಕೆಲವರು ಬರೀ ಕತ್ತರಿ ಹಾಕೋದೇ ಕೆಲಸವಾಗಿದೆ. ಯಾರು ಮಾತಾಡ್ತಾರೆ ಅವರನ್ನು ಮುಗಿಸೋದು, ಸೋತಮೇಲೆ ಯಡಿಯೂರಪ್ಪ ನಮ್ಮನ್ನು, ವಿಜಯೇಂದ್ರ ಕರೆದು ಮಾತಾಡಿದ್ರು. ಆದರೆ ನಮ್ಮ ಜೊತೆಗೆ ಬೇರೆಯವರು ಸೌಜನ್ಯಯುತವಾಗಿ ಮಾತಾಡಿಲ್ಲ. ರಾಜ್ಯಾಧ್ಯಕ್ಷರಾದವರು ಒಂದು ಸಾರಿ ಆದರೂ ಮಾತಾಡಿದ್ರಾ..? ಎಂದು ಪ್ರಶ್ನಿಸಿದರು.
ಪಾರ್ಟಿ ಆಫೀಸ್ ನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ರು. ಏನ್ ಇವರ ಶಕ್ತಿಯಲ್ಲಿ ನಾವು ಇದ್ದೀವಾ..? ಕ್ಷೇತ್ರದಲ್ಲಿ ನಮ್ದೇ ಆದ ವರ್ಚಸ್ಸು ಇಟ್ಟುಕೊಂಡಿದ್ದೇವೆ. ಇವರ ಎಚ್ಚರಿಕೆಗಳು ಬೇರೆ, ಸಭೆಗಳಲ್ಲಿ ನಿಮ್ಮನ್ನು ನೋಡ್ಕೊತ್ತೇವೆ ಅಂತಾ ಹೆದರಿಸೋದು, ಬೆದರಿಸೋದು ಎಂದು ಪಕ್ಷದ ನಾಯಕರ ವಿರುದ್ದವೇ ವಾಗ್ದಾಳಿ ನಡೆಸಿದರು.
ಇನ್ನೂ ಮಾಜಿ ಸಚಿವ ಡಾ. ಕೆ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸುಧಾಕರ್ ಒಬ್ನೇನಾ..? ಅವನೊಬ್ಬನೇನಾ ಸೋತಿರೋದು..? ನಾವು ಸೋತಿದ್ವಿ ತಾನೇ, ನಮ್ಮ ಜೊತೆ ಯಾಕೆ ಮಾತಾಡಿಲ್ಲ..? ಏನ್ ಪಾರ್ಟಿ ಮುಗಿಸ್ತೀನಿ ಅಂತಾ ಅವನು ಏನು ನಿಮಗೆ ಹೆದರಿಸಿದ್ನಾ..? ಅದಕ್ಕಾಗಿ ಭಯಗೊಂಡು ಹೋಗಿದ್ರಾ ಅವನ ಜೊತೆ ಮಾತಾಡೋಕೆ. ನಳೀನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು..?ಮೊನ್ನೆ ರಾಜೀನಾಮೆ ಅಂದ್ರು, ಆಮೇಲೆ ಇಲ್ಲ ಅಂದ್ರು, ಏನು ನಿಮ್ಮ ಉದ್ದೇಶ..? ನೀವು ನಾಲ್ಕೈದು ಬಾರಿ ರಾಜ್ಯ ಪ್ರವಾಸ ಮಾಡಿದ್ರಲ್ಲ ಏನು ಪ್ರಯೋಜನ..? ಅದು ಏನು ಮತಗಳಾಗಿ ಪರಿವರ್ತನೆ ಆಯ್ತಾ..? ಎಂದು ಕಟೀಲ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ನನಗೆ ಯಾವುದೇ ಭಯ ಇಲ್ಲ, ನಾನು ನಿರ್ಭಯವಾಗಿ ಮಾತಾಡ್ತೀನಿ. ಇವರಿಗೆ ಒಂದು ಗ್ರಾಮ ಪಂಚಾಯ್ತಿ ನಿಂತು ಗೆಲ್ಲೋಕೆ ಆಗಲ್ಲ ಎಂದು ಹೇಳಿದ್ರು. ಅವರ ಹೆಸರು ಇವಾಗ ನಾನು ಹೇಳಲ್ಲ, ಸಮಯ ಬಂದಾಗ ಅವರ ಹೆಸರು ಹೇಳುತ್ತೇನೆ. ಕೊವೀಡ್ ಟೈಮ್ ನಲ್ಲಿ ರೇಣುಕಾಚಾರ್ಯ ಒಳ್ಳೆಯ ಕೆಲಸ ಮಾಡಿದ್ದ ಅಂತಾ ಹೇಳೋಕೆ ನಿಮ್ಮ ಬಾಯಿಗೆ ಏನು ಹುಳ ಬಿದ್ದಿತ್ತಾ..? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಷ್ಟೋ ಬಾರಿ ಹೇಳಿದ್ದಾರೆ. ಅವರ ಪಕ್ಷ ವರಿಗೆ ರೇಣುಕಾಚಾರ್ಯ ನೋಡಿ ಕಲೀರಿ ಅಂತಾ, ಆದರೆ ನಮ್ಮವರು ಮಾತ್ರ ನನ್ನ ಬಗ್ಗೆ ಹೇಳಿಲ್ಲ. ಯಾಕೆ ರೇಣುಕಾಚಾರ್ಯ ಬೆಳದು ಬಿಡ್ತಾನೆ ಅಂತಾ ಹೇಳಿಲ್ವಾ..? ಎಂದು ಪ್ರಶ್ನಿಸಿದರು.
ಯಡಿಯೂರಪ್ಪರನ್ನು ಸ್ವತಂತ್ರ ವಾಗಿ ಅಧಿಕಾರ ಮಾಡೋಕೆ ಬಿಟ್ಲಿಲ್ಲ, ಅವರು ಸಿಎಂ ಆಗಿದ್ದಾಗ ಮೂವರು ಡಿಸಿಎಂ ಗಳನ್ನು ಮಾಡಿ, ಯಡಿಯೂರಪ್ಪ ಅವರನ್ನ ಕೈ ಕಟ್ಟಿ ಹಾಕಿದ್ರು. ಇನ್ನೂ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್ ಬೀಸಿದ್ದು, ವಿಜಯೇಂದ್ರ ರಾಜ್ಯಾಧ್ಯಕ್ಷ ಆದರೆ ತಪ್ಪೇನಿಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇರೋ ನಾಯಕ ಆಗಬೇಕು. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರಿಲ್ಲ ಅಂತಾ ನಾನು ಹೇಳಿಲ್ಲ. ನನಗೂ ಸಾಮರ್ಥ್ಯ ಇದೆ, ನನಗೇನು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಇಲ್ಲವೇ.? ನಾನು ಇವರ ಹತ್ತರಷ್ಟು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದು ಹೇಳಿದರು.












Click it and Unblock the Notifications