Monsoon Delay: ನೀರಿನ ಕೊರತೆ ಬಗ್ಗೆ ಮಹತ್ವದ ಸಭೆ, ಅಧಿಕಾರಿಗಳಿಗೆ ಎಂಬಿ ಪಾಟೀಲ್ ತಾಕೀತು
ವಿಜಯಪುರ, ಬೆಂಗಳೂರು, ಜೂನ್ 23: ಮುಂಗಾರು ಮಳೆ ವಿಳಂಬವಾಗಿದೆ. ಇದರಿಂದಾಗುವ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳು ಅಗತ್ಯ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಸೂಚಿಸಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಯಕ್ಕೆ ಸರಿಯಾಗಿ ಮಳೆ ಬಾರದಿದ್ದರೆ, ಕುಡಿಯುವ ನೀರಿನ ಸಮಸ್ಯೆ, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ, ಜಾನುವಾರುಗಳಿಗೆ ಮೇವು, ನೀರು ಪೂರೈಕೆ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯಪುರ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ ಕುಡಿಯುವ ನೀರಿನ ಲಭ್ಯತೆ ಸಮರ್ಪಕವಾಗಿದೆ. ನಂತರ ಯಾವುದೇ ಕೊರತೆಯಾಗದಂತೆ ಪರ್ಯಾಯ ವ್ಯವಸ್ಥೆ ಈಗಿನಿಂದಲೇ ಕೈಗೊಳ್ಳಬೇಕು. ಜುಲೈ ಅಂತ್ಯದ ನಂತರ ಕುಡಿಯುವ ನೀರಿನ ಕೊರತೆಯಾದಲ್ಲಿ, ಶಾಲಾ-ಕಾಲೇಜ, ಸರ್ಕಾರಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಅಧೀನದ ಕೊಳವೆ ಬಾವಿ ಸೇರಿದಂತೆ ಖಾಸಗಿ ಕೊಳವೆ ಬಾವಿ ನೀರಿನ ಲಭ್ಯತೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ನೀರು ಪೂರೈಕೆಗೆ ಬೋರ್ವೆಲ್ ಗುರುತು
ಅದರ ಹೊರತಾಗಿಯೂ ನೀರಿನ ಮೂಲಗಳಲ್ಲೇ ನೀರಿನ ಲಭ್ಯತೆ ಕೊರತೆಯಾದಲ್ಲಿ ಮಾತ್ರ ಟ್ಯಾಂಕರ್ ನೀರು ಪೂರೈಕೆಗೆ ಮುಂದಾಗಬೇಕು. ಈಗಾಗಲೇ 890 ಬೋರ್ವೆಲ್ ಹಾಗೂ 653 ಖಾಸಗಿ ಬೊರವೆಲ್ಗಳನ್ನು ಗುರುತಿಸಲಾಗಿದೆ.
ಜನಸಂಖ್ಯೆಗನುಗುಣವಾಗಿ ಎರಡರಿಂದ ಮೂರು ಬೊರವೆಲ್ಗಳನ್ನು ಕೊರೆಯಿಸಲು ಕ್ರಮ ಕೈಗೊಳ್ಳಬೇಕು. ಬೊರವೆಲ್ನಲ್ಲಿ ನೀರು ಲಭ್ಯವಿಲದೇ ಇದ್ದಾಗ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಗೆ ಮುಂದಾಗಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಾವಿಗಳ ನೀರಿನ ಸದ್ಭಳಕೆ ಆಗಿಲ್ಲ: ಅಸಮಾಧಾನ
ನೀರಿನ ಸದ್ಭಳಕೆಗಾಗಿ ಕಳೆದ 2013-18ರ ಅವಧಿಯಲ್ಲಿ ದಾನಿಗಳಿಂದ 4.5 ಕೋಟಿ ರೂ. ಹಾಗೂ ಸರ್ಕಾರದಿಂದ 4.5 ಕೋಟಿ ರೂ. ಬಳಸಿಕೊಂಡು ಜಿಲ್ಲೆಯ ವಿವಿಧ ಐತಿಹಾಸಿಕ ಬಾವಿಗಳನ್ನು 9 ಕೋಟಿ ರೂ.ಅನುದಾನ ವ್ಯಯಿಸಿ ಸ್ವಚ್ಛಗೊಳಿಸಲಾಗಿತ್ತು. ನಂತರ ಅದರ ಸದ್ಭಳಕೆ ಆಗದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ನಾನೇ ಖುದ್ದಾಗಿ ಈ ಬಾವಿಗಳ ವೀಕ್ಷಣೆ ನಡೆಸಿ ಬಾವಿಗಳ ನೀರನ್ನು ಇತರೆ ಕೆಲಸ ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಂಡರೆ ಕುಡಿಯುವ ನೀರಿನ ಒತ್ತಡವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿಜಯಪುರದ ಕೆಲವು ವಾರ್ಡಗಳಲ್ಲಿ ಸಹ ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೆಲವೊಂದು ವಾರ್ಡಗಳಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆ ಸೇರಿದಂತೆ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳದೇ ತಾರತಮ್ಯ ವೆಸಗಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಲೋಪಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೊಯ್ನಾ ಡ್ಯಾಂ: ನೀರು ಬಿಡುಗಡೆಗೆ ಮನವಿ
ಜವಳಿ, ಕಬ್ಬು ಅಭಿವೃದ್ಧಿ, ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಖಾತೆ ಸಚಿವರಾದ ಶಿವಾನಂದ ಪಾಟೀಲ ಅವರು ಮಹಾರಾಷ್ಟ್ರ ಕೊಯ್ನಾ ಡ್ಯಾಂನಿಂದ 3 ಟಿಎಂಸಿ ನೀರು ಬಿಡುಗಡೆ ಕೋರಿ ಮನವಿ ಸಲ್ಲಿಸಲು ಸಲಹೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಎಂಬಿ ಪಾಟೀಲರು, ಈ ಬಗ್ಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು. ಜೊತೆಗೆ ಈ ಕುರಿತು ಜಲಸಂಪನ್ಮೂಲ ಖಾತೆ ಸಚಿವರು ಹಾಗೂ ರಾಜ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅವರು, ಜಿಲ್ಲೆಯ ವಿವಿಧ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೊರವೆಲ್ ದುರಸ್ತಿ ಕಾರ್ಯ, ನೀರು ಪೂರೈಕೆ, ಕರ ಸ್ವೀಕೃತಿ ಕಾರ್ಯ ಸರಿಯಾಗಿ ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಪಿಡಿಓಗೆ ಕರೆ ಮಾಡಿದಾಗ ಫೋನ್ ಸ್ವೀಕರಿಸದೇ ಇರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ಪಿಡಿಒ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಇದರ ಹೊಣೆಗಾರಿಕೆ ಆಯಾ ತಹಶೀಲ್ದಾರರನ್ನು ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ವಾರು ತಾಲೂಕಾವಾರು ಸಭೆ ನಡೆಸಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಪ್ರಕಾಶ ಹುಕ್ಕೇರಿ, ಶಾಸಕರಾದ ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications