ಯುಬಿಸಿಟಿಯಲ್ಲಿ ನಡೆದದ್ದು ಪಕ್ಷಾತೀತ ರಂಗೀನ್ ಪಾರ್ಟಿ, ಆದ್ರೆ ಈಗ?
Recommended Video

ಜನಸಾಮಾನ್ಯರ ಕೈಗೆಟುಕದ, ಶ್ರೀಮಂತರ ಮಕ್ಕಳಿಗೆ ದಿನವೂ 'ತೀರ್ಥ' ಯಾತ್ರೆಯ ತಾಣದಂತಾಗಿರುವ ಬೆಂಗಳೂರು ಹೃದಯ ಭಾಗದಲ್ಲಿರುವ ಯುಬಿಸಿಟಿಯಲ್ಲಿ ಶನಿವಾರ ರಾತ್ರಿ (ಫೆ 17) ನಲಪ್ಪಾಡ್ & ಕೋ ತಂಡದ ಪಕ್ಷಾತೀತವಾದ ಪಾರ್ಟಿಯಲ್ಲಿನ ಘಟನೆ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.
ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪ್ಪಾಡ್ ಮತ್ತು ಆತನ ಜೊತೆಗಿದ್ದ ಸಹಚರರು, ವಿದ್ವತ್ ಎನ್ನುವ ಯುವಕನ ಮೇಲೆ ನಡೆಸಿದ್ದ ಹಲ್ಲೆ, ಚುನಾವಣಾ ಈ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ವೋಟ್ ಬ್ಯಾಂಕ್ ವಿಷಯವಾಗಿ ಹೋಗಿದೆ.
ಅಸಲಿಗೆ ಅಂದು ಅಲ್ಲಿ ನಡೆದಿದ್ದೇನು ಎನ್ನುವುದು ಇನ್ನೂ ಗೊಂದಲವಾಗಿ ಕೂತಿರುವ ಈ ಹೊತ್ತಿನಲ್ಲಿ, ನಲಪ್ಪಾಡ್ ಜೊತೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಕ್ಕಳೂ ಇದ್ದರು ಎನ್ನುವ ಅನಧಿಕೃತ ಮಾಹಿತಿಗಳು ಬರುತ್ತಿವೆ. ಕಾಲು ತೆಗೆಯಲು ನಡೆದ ಗಲಾಟೆಯೇ ಅದಲ್ಲ, ಅದು ಬೇರೇನೋ ವ್ಯವಹಾರದ್ದು ಎನ್ನಲಾಗುತ್ತಿದೆ.
ಉಳ್ಳವರ ಮಕ್ಕಳೇ ಈ ಘಟನೆಯ ಸುತ್ತಮುತ್ತ ಶಾಮೀಲಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ, ನಿಜವಾದ ಅಂಶ ಪೊಲೀಸ್ ತನಿಖೆಯ ನಂತರವೂ ಬಹಿರಂಗವಾಗುವ ಸಾಧ್ಯತೆ ಕಮ್ಮಿ. ಹಾಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಯಾವ ನೈತಿಕತೆಯ ಮೇಲೆ ಈ ವಿಚಾರದಲ್ಲಿ ಕೆಸೆರೆರೆಚಾಟ ನಡೆಸುತ್ತಿದೆ ಎನ್ನುವುದು ಜನಸಾಮಾನ್ಯರಿಗೆ ಅರ್ಥವಾಗದ ವಿಚಾರ.
ಚುನಾವಣಾ ಸಮಯದಲ್ಲಿ ಏನಾದರೂ ವಿಚಾರ ಸಿಕ್ಕರೆ ಸಾಕು ಎಂದು ಜಾತಕ ಪಕ್ಷಿಗಳಂತೆ ಎರಡು ರಾಷ್ಟ್ರೀಯ ಪಕ್ಷಗಳು ಕಾಯುತ್ತಿರುವ ಈ ಹೊತ್ತಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ದೆಹಲಿ ಮಟ್ಟದಲ್ಲಿ ಆರೋಪ, ಪ್ರತ್ಯಾರೋಪ ನಡೆಸುತ್ತಿದೆ. ಮುಂದೆ ಓದಿ.

ಶನಿವಾರ ರಾತ್ರಿ ನಡೆಸಿದ ರಂಗೀನ್ ಪಾರ್ಟಿ
ಮೊಹಮ್ಮದ್ ನಲಪ್ಪಾಡ್ & ಗ್ಯಾಂಗ್ ಶನಿವಾರ ರಾತ್ರಿ ನಡೆಸಿದ ರಂಗೀನ್ ಪಾರ್ಟಿಯಲ್ಲಿ ರಾಜಕೀಯದ ಸೊಂಕೇ ಇರಲಿಲ್ಲ. ಆದರೆ, ಕಾಂಗ್ರೆಸ್ ಶಾಸಕ ಪುತ್ರನ ರೌಡಿ ವರ್ತನೆ ಬಹಿರಂಗವಾಗುತ್ತಿದ್ದಂತೇ, ವಿಷಯ ರಾಜಕೀಯ ಸ್ವರೂಪ ಪಡೆಯಿತು. ಬಿಜೆಪಿಯವರು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದರು, ಮಾಧ್ಯಮ ಪ್ರತಿನಿಧಿಗಳಿಗೆ ನಲಪ್ಪಾಡ್ ಗ್ಯಾಂಗಿನ ರೌಡಿಗಳು ಹಲ್ಲೆ ನಡೆಸಿದರು.

ನಲಪ್ಪಾಡ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು
ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೇ ಎಚ್ಚೆತ್ತುಕೊಂಡ ಕಾಂಗ್ರೆಸ್, ನಲಪ್ಪಾಡ್ ನನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತು. ಬಿಜೆಪಿ ಈ ವಿಚಾರದ ಲಾಭ ಪಡೆದುಕೊಳ್ಳಲು ನೋಡಿದರೆ, ಕಾಂಗ್ರೆಸ್ ಅದಕ್ಕೆ ತಡೆಯೊಡ್ದಲು ಪ್ರಯತ್ನಿಸಿತು. ರಾಜಕೀಯವೇ ಇಲ್ಲದ ಅಂದಿನ ನಲಪ್ಪಾಡ್ ಗ್ಯಾಂಗಿನ ಪಾರ್ಟಿ ಈಗ ಬಿಜೆಪಿಗೆ ಚುನಾವಣಾ ಸಮಯದಲ್ಲಿ ಇದು ಪ್ರಮುಖ ಅಸ್ತ್ರವಾಗಿ ಬತ್ತಳಿಕೆಯಲ್ಲಿ ಕೂತಿದೆ.

ಬಿಜೆಪಿ ಸದಸ್ಯತ್ವ ನೀಡಿಬಿಟ್ಟ ಅಮಿತ್ ಶಾ
ಸಿಕ್ಕಿದ್ದೇ ಚಾನ್ಸ್ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರೂ ಹಲ್ಲೆಗೊಳಗಾದ ವಿದ್ವತ್ ಅನ್ನುವ ಯುವಕನಿಗೆ ಅಪ್ಪಿತಪ್ಪಿ ಬಿಜೆಪಿ ಸದಸ್ಯತ್ವವನ್ನೂ ನೀಡಿಬಿಟ್ಟರು. ತನ್ನ ಹೇಳಿಕೆ ತಪ್ಪು ಅನ್ನುವುದನ್ನು ಅರಿತು, ಸಿದ್ದರಾಮಯ್ಯ ಸರಕಾರ ಹೀಗಾದರೂ ಎಚ್ಚೆತ್ತುಕೊಳ್ಳಲಿ ಎಂದು ತೇಪೆ ಹಚ್ಚುವ ಕೆಲಸವನ್ನು ಮಾಡಿದರು.

ಸತ್ತವರನ್ನೆಲ್ಲಾ ಬಿಜೆಪಿಯವರು ತಮ್ಮ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಾರೆ
ಸತ್ತವರನ್ನೆಲ್ಲಾ ಬಿಜೆಪಿಯವರು ತಮ್ಮ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ರಾಜ್ಯ ಗೃಹಸಚಿವರು ವ್ಯಂಗ್ಯವಾಡಿದರು. ನಾನು ನನ್ನ ರಾಜಕೀಯ ಜೀವನದಲ್ಲಿ ಎಷ್ಟೆಷ್ಟು ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ, ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ನಲಪ್ಪಾಡ್ ತಂದೆ ಹ್ಯಾರೀಸ್ ಭಾವೋದ್ವೇಗಕ್ಕೊಳಗಾದರು.

ರಾಜಕೀಯ ಬಣ್ಣಪಡೆದುಕೊಂಡ ಘಟನೆ
ಒಟ್ಟಿನಲ್ಲಿ ಪಕ್ಷಾತೀತವಾಗಿ ನಡೆದಿದ್ದ ಪಾರ್ಟಿ ವಿದ್ವತ್ ಮೇಲಿನ ಹಲ್ಲೆಯ ನಂತರ ರಾಜಕೀಯ ಬಣ್ಣಪಡೆದುಕೊಂಡದ್ದಂತೂ ಹೌದು. ಒಂದು ವೇಳೆ, ಚುನಾವಣೆ ಇಲ್ಲದೇ ಇದ್ದ ಪಕ್ಷದಲ್ಲಿ ಈ ಘಟನೆ ಇಷ್ಟು ದೊಡ್ಡದಾಗುತ್ತಿತ್ತಾ ಎನ್ನುವುದನ್ನು ಅರಿಯಲು ಜನಸಾಮಾನ್ಯ ರಾಜಕೀಯದಲ್ಲಿ ಪಿಎಚ್ಡಿ ಮಾಡಬೇಕಾಗಿಲ್ಲ.












Click it and Unblock the Notifications