ಹೈಕಮಾಂಡ್ ಕೊಟ್ಟ ಸೂಚನೆ ವಿವರ ಹೊರಹಾಕಿದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು, ನವೆಂಬರ್ 10: ''ಪಕ್ಷದ ನಾಯಕರಿಗೆ ಹಾಗೂ ಮುಖಂಡರಿಗೆ ಬೈಯಬಾರದು ಎಂದು ಹೈಕಮಾಂಡ್ನವರು ಸೂಚನೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ'' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಹೈಕಮಾಂಡ್ ಸೂಚನೆ ನಾನು ಒಪ್ಪಿದ್ದೇನೆ. ಮುಂದಿನ ದಿನಗಳ ನನ್ನ ಉಜ್ವಲ ಭವಿಷ್ಯಕ್ಕಾಗಿ ನಾನು ಒಪ್ಪಿದ್ದೇನೆ. ಯಡಿಯೂರಪ್ಪನವರಿಗೆ ನಾನ್ಯಾಕೆ ಬೈಯಬೇಕು. ಯಡಿಯೂರಪ್ಪ ಮುಂದೆ ಮುಖ್ಯಮಂತ್ರಿ ಆಗುವವರಲ್ಲ. ಯಾಕೆ ಅವರನ್ನು ಬೈಯಬೇಕು'' ಎಂದು ಪ್ರಶ್ನಿಸಿದರು.
ಇನ್ನು ನಾನು ಯರನ್ನೂ ಓಲೈಕೆ ಮಾಡುವುದಿಲ್ಲ. ಯಾರನ್ನಾದರೂ ಓಲೈಕೆ ಮಾಡಿದ್ದರೆ ಈಗಾಗಲೇ ನಾನು ಮುಖ್ಯಮಂತ್ರಿಯಾಗಿರುತ್ತಿದ್ದೆ. ಏನೇ ವಿಷಯಗಳಿದ್ದರೂ ನಾನು ನೇರವಾಗಿ ಹೇಳುತ್ತೇನೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ನೇರವಾಗಿ ಮಾತನಾಡುತ್ತೇನೆ ಎಂದರು.

100 ಕೋಟಿ ಕೊಟ್ಟರೆ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಾಗುತ್ತದೆ
ಶಾಸಕಾಂಗ ಪಕ್ಷದಲ್ಲಿ ಶಾಸಕರಿಗೆ ಸಿಗಬೇಕಾದ ಅಭಿವೃದ್ಧಿ ಹಣ, ಶಾಸಕರಿಗೆ ಸಿಗಬೇಕಾದ ಗೌರವ ಈ ಬಗ್ಗೆ ಮಾತ್ರ ನಾನು ಮಾತನಾಡಿದ್ದೇನೆ. ಅದನ್ನು ಬಿಟ್ಟು ನಾನು ವ್ಯಕ್ತಿಯ ವಿರುದ್ಧ ಮಾತನಾಡಿಲ್ಲ, ಪಕ್ಷದ ವಿರುದ್ಧ ಮಾತನಾಡಿಲ್ಲ. ನಾನು ಮಾಡಿದ ಹೋರಾಟದಿಂದಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲಾ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ 52 ಕೋಟಿ ರೂಪಾಯಿ ಕೊಟ್ಟರು. ಇದಕ್ಕೆ ನನ್ನ ಹೋರಾಟವೇ ಕಾರಣ. ಇನ್ನೂ 100 ಕೋಟಿ ಕೊಟ್ಟರೆ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದೇನೆ. ಇದನ್ನು ನಾವು ಶಾಸಕರು ಯಾವುದೇ ಜಟಾಪಟಿ ಮಾಡಿಲ್ಲ ಎಂದರು.

ಸತೀಶ್ ಕಾಂಗ್ರೆಸ್ ಅಂತ್ಯಕ್ಕೆ ಕೊನೆಯ ಮೊಳೆ ಹೊಡೆದರು
ವಿಜಯಪುರ ಪಾಲಿಕೆಯಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸುವ ಮೂಲಕ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ಹೋಗಿದೆ. ವಿಜಯಪುರ ಪಾಲಿಕೆ ಗೆಲುವು ಹಿಂದುತ್ವದ, ಬಿಜೆಪಿಯ ಗೆಲವು. ಯಾಕೆಂದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪಾದಯಾತ್ರೆ ಸಂದರ್ಭದಲ್ಲಿ, ಕೊಳ್ಳೇಗಾಲ ಹಾಗೂ ವಿಜಯಪುರ ಎರಡರಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ರಾಹುಲ್ ಗಾಂಧಿ ಅವರ ಪಾದಸ್ಪರ್ಶದಿಂದ ಕಾಂಗ್ರೆಸ್ ಅಂತ್ಯ ಆರಂಭವಾಗಿದೆ. ರಾಹುಲ್ ಗಾಂಧಿ ಕಾಂಗ್ರೆಸ್ ಅಂತ್ಯವನ್ನು ಉದ್ಘಾಟನೆ ಮಾಡಿದರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಂತ್ಯಕ್ಕೆ ಕೊನೆಯ ಮೊಳೆ ಹೊಡೆಯುವ ಎಲ್ಲಾ ಕೆಲಸವನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮುಸ್ಲಿಮರ ಮತ ಬರುತ್ತದೆ ಎನ್ನುವ ಕೆಟ್ಟ ಚಾಳಿ ಕಾಂಗ್ರೆಸ್ಗೆ ಇದೆ
ಈ ದೇಶದ ಪವಿತ್ರ ಗ್ರಂಥ ರಾಮಾಯಣ ಬರೆದವರು ಮಹರ್ಷಿ ವಾಲ್ಮೀಕಿಯವರು. ಅವರ ಹಿಂದುತ್ವದ ಆಧಾರದ ಮೇಲೆ ರಾಮಾಯಣ ಇದೆ. ಹಿಂದುತ್ವ ಆಧಾರದ ಮೇಲೆ ಭಾರತ ಇದೆ. ಅದರ ಬಗ್ಗೆ ಅಸಹ್ಯವಾಗಿ ಮಾತನಾಡಬಾರದು. ಹಿಂದೂ ಧರ್ಮವನ್ನು ಟೀಕೆ ಮಾಡುವುದು, ಹಿಂದೂ ಧರ್ಮವನ್ನು ಅಪಮಾನ ಮಾಡುವುದು, ಇದನ್ನು ಮಾಡಿದರೆ ಮುಸ್ಲಿಮರ ಮತ ಬರುತ್ತದೆ ಎನ್ನುವ ಕೆಟ್ಟ ಚಾಳಿ ಕಾಂಗ್ರೆಸ್ಗೆ ಇದೆ. ಮತ್ತು ಹಿಂದೂ ಧರ್ಮವನ್ನು ಅಣುಕಿಸುವುದು ಇಂಥದೆಲ್ಲಾ ಸತೀಶ್ ಜಾರಕಿಹೊಳಿ ಯಾಕೆ ಮಾಡುತ್ತಿದ್ದಾರೆ. ಮೊದಲ ಕ್ಷಮೆ ಕೇಳುವುದಿಲ್ಲ ಎಂದವರು ನಿನ್ನೆ ಕೊನೆಯಲ್ಲಿ ಕ್ಷಮೆ ಕೇಳಿದ್ದಾರೆ. ಇದರಿಂದ ಇವರ ನೈತಿಕತೆ ಗೊತ್ತಾಗುತ್ತದೆ. ಬೆಳಗಾವಿಯ ಹಿಂದೂ ಜನರು ಮುಂದಿನ ಚುನಾವಣೆಯಲ್ಲಿ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಗುಡುಗಿದರು.

ಅರುಣ್ ಸಿಂಗ್ ಎದುರು ನಾನು ಸಣ್ಣವನಾದೆ
ಯತ್ನಾಳ್ ಏನೆಂದು ಅರುಣ್ ಸಿಂಗ್ ಅವರಿಗೆ ಈಗ ಗೊತ್ತಾಗಿದೆ. ಈಗ ನನಗೂ ಅರುಣ್ ಸಿಂಗ್ ಅವರ ಬಗ್ಗೆ ಅಪಾರ ಗೌರವ ಬಂದಿದೆ. ಅರುಣ್ ಸಿಂಗ್ ಅವರು ಬಹಳ ದೊಡ್ಡತನ ತೋರಿದ್ದಾರೆ. ಅವರು ನನ್ನ ಭೇಟಿಯಾಗಿದ್ದಾರೆ ಎಂದರೆ ನಾನು ಸಣ್ಣವನಾಗಿದ್ದೇನೆ. ಅವರು ದೊಡ್ಡವರಾಗಿದ್ದಾರೆ. ನಾನು ಅರುಣ್ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ವಾಸ್ತಾವಿಕವಾಗಿ ಎಲ್ಲವನ್ನೂ ತಿಳಿದುಕೊಂಡಿದ್ದಾರೆ. ಯತ್ನಾಳ್ ಬಗ್ಗೆ ಬಿಜೆಪಿಯಲ್ಲಿದ್ದ ತಪ್ಪು ಕಲ್ಪನೆ ಸ್ವಚ್ಛವಾಗಿದೆ ಎಂದು ಹೇಳಿದರು.












Click it and Unblock the Notifications