ಖಾತೆ ಬದಲಾವಣೆ ಕುರಿತು ಸಚಿವ ಆನಂದ್ ಸಿಂಗ್ ಸ್ಪೋಟಕ ಹೇಳಿಕೆ!
ಬೆಂಗಳೂರು, ಜ. 30: ಖಾತೆ ಹಂಚಿಕೆ ವಿಚಾರವಾಗಿ ಮೂಲ ಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಮಹತ್ವದ ಮಾತನ್ನಾಡಿದ್ದಾರೆ. ಖಾತೆ ಮರು ಹಂಚಿಕೆಯಿಂದ ಅವರು ಅಸಮಾಧಾನಗೊಂಡಿದ್ದರು. ಎರಡೇರಡು ಬಾರಿ ಅವರ ಖಾತೆಗಳನ್ನು ಸಿಎಂ ಯಡಿಯೂರಪ್ಪ ಬದಲಾವಣೆ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಸಚಿವ ಆನಂದ್ ಸಿಂಗ್ ಅವರು ಗರಂ ಆಗಿದ್ದರು.
ಸಚಿವ ಆನಂದ್ ಸಿಂಗ್ ಅವರ ಖಾತೆ ಬದಲಾವಣೆಗೆ ಸೇರಿದಂತೆ ಮೂಲ-ವಲಸೆ ಬಿಜೆಪಿಗರ ಮಧ್ಯ ತಾರತಮ್ಯ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಮಾನ ಮನಸ್ಕ ಬಿಜೆಪಿ ಶಾಸಕರು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆಯನ್ನೂ ಮಾಡಿದ್ದರು.
ಮೊದಲು ರಾಜೀನಾಮೆ ಕೊಟ್ಟು ಬಂದವರು ಆನಂದ್ ಸಿಂಗ್. ಹೀಗಾಗಿ ಅವರ ಖಾತೆಯನ್ನು ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ನಾವು ಸಮಾನ ಮನಸ್ಕ ಶಾಸಕರು ಸಭೆ ಸೇರಿದ್ದು ನಿಜ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಸಚಿವ ಆನಂದ್ ಸಿಂಗ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಹಿರಿಯರಿಗೂ ಸಚಿವ ಸ್ಥಾನ
ವಿಧಾನಸೌಧದಲ್ಲಿ ಮಾತನಾಡಿರುವ ಸಚಿವ ಆನಂದ್ ಸಿಂಗ್ ಅವರು, ಮತ್ತೆ ಬೇರೆ ಖಾತೆ ನೀಡಿದರೂ ನಾನು ನಿಭಾಯಿಸುತ್ತೇನೆ. ಈಗಿರುವ ಖಾತೆಗಳನ್ನು ಹಿಂದಕ್ಕೆ ಪಡೆದರೂ ನಾನು ಸಂತೋಷವಾಗಿರುತ್ತೇನೆ ಎಂಬ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಹಾಗೇ ಹೇಳುವ ಮೂಲಕ ಸಂಪುಟ ಪುನಾರಚನೆ ಆಗುತ್ತದೆ ಎಂಬ ಮುನ್ಸೂಚನೆ ನೀಡಿದ್ದಾರೆ.
ನಮ್ಮ ಪಕ್ಷದ ಹಿರಿಯ ಶಾಸಕರು ಸಭೆ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಹಿರಿಯ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನೂ ಮಾಡಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ಆಗಬೇಕು. ಆಗ ಇತರರಿಗೂ ಖಾತೆ ನೀಡಬೇಕು ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ
ತಮ್ಮ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟಿರುವ ಆನಂದ್ ಸಿಂಗ್ ಅವರು, ಸಚಿವ ಸ್ಥಾನ ಬದಲಿಸಿದಾಗ ಅಸಮಧಾನವಾಗುವುದು ಸಹಜ. ಆದರೆ ನನಗೆ ಯಾವುದೇ ಅಸಮಧಾನ ಇಲ್ಲ. ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ಮಾಡಿದ್ದೇನೆ. ಎಲ್ಲರನ್ನು ಸಮಾಧಾನ ಮಾಡಲು ಬದಲಾವಣೆ ಮಾಡುವುದು ಸಹಜ. ಖಾತೆ ದೊಡ್ಡದು, ಚಿಕ್ಕದು ಅಂತ ಇಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸಿ, ಸಿಎಂ ಯಡಿಯೂರಪ್ಪ ಅವರಿಗೆ ಸಹಕಾರ ಕೊಡಬೇಕು.

ಅರವಿಂದ್ ಲಿಂಬಾವಳಿ ಓಡಾಡಲಿ
ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ. ಮುಂದೆ ಮತ್ತೆ ಸಂಪುಟ ಪುನಾರಚನೆ ಆಗಲಿದೆ ಅಂತ ಹೇಳ್ತಿದ್ದಾರೆ. ಹಾಗೇ ಆದಾಗ ಮತ್ತೆ ಖಾತೆ ಬದಲಾವಣೆ ಆಗುತ್ತದೆ. ನನಗೆ ಅರಣ್ಯ ಇಲಾಖೆ ಖಾತೆ ನೀಡಿದ್ದಾಗ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಡೀಮ್ಡ್ ಫಾರೆಸ್ಟ್ ಮಾಡಲಾಗಿದೆ. ಈಗ ಅರಣ್ಯ ಇಲಾಖೆ ವಹಿಸಿಕೊಂಡಿರುವ ಸಚಿವ ಅರವಿಂದ್ ಲಿಂಬಾವಳಿ ಅವರು ಓಡಾಡಿ ಕೆಲಸ ಮಾಡಿದಲ್ಲಿ, ಒಂದುವರೆ ತಿಂಗಳಲ್ಲಿ ಡೀಮ್ಡ್ ಫಾರೆಸ್ಟ್ ಕೆಲಸ ಪೂರ್ಣಗೊಳ್ಳಲಿದೆ. ಪರಿಸರ ಖಾತೆ ಕೊಟ್ಟಿದ್ದು, ಅದನ್ನೂ ನಿಭಾಯಿಸಿದ್ದೇನೆ ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಈಗಿನ ಖಾತೆಯೂ ದೊಡ್ಡದು
ಈಗ ಹಜ್ ಮತ್ತು ವಕ್ಫ್ ಖಾತೆಯನ್ನು ನೀಡಿದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತೇನೆ. ಹಾಗಂತ ಎಲ್ಲರೂ ನನ್ನಂತೆಯೇ ಇರಬೇಕು ಅಂತೇನಿಲ್ಲ. ನನಗೆ ಯಾವುದೇ ಅಸಮಧಾನ ಇಲ್ಲ. ಯಾವುದೇ ಖಾತೆ ನೀಡಿದರೂ ಅಸಮಧಾನ ಇಲ್ಲ.












Click it and Unblock the Notifications