
ವಿಕ್ರಮ್ ಕಿರ್ಲೋಸ್ಕರ್ ಕನಸು ನೆನಪಿಸಿಕೊಂಡ ಮುರುಗೇಶ ನಿರಾಣಿ
ಬೆಂಗಳೂರು, ನವೆಂಬರ್ 30; ಭಾರತದ ವಾಹನೋದ್ಯಮದ ದಿಗ್ಗಜ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಅವರ ಹಠಾತ್ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್. ನಿರಾಣಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
"ಉದ್ಯಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದ ವಿಕ್ರಮ್ ಕಿರ್ಲೋಸ್ಕರ್ ಅವರ ನಿಧನದಿಂದ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ," ಎಂದು ಶೋಕ ಸಂದೇಶದಲ್ಲಿ ಸಚಿವ ನಿರಾಣಿ ಕಂಬನಿ ಮಿಡಿದಿದ್ದಾರೆ.
Vikram Kirloskar : ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ
"ವಿಕ್ರಮ್ ಕಿರ್ಲೋಸ್ಕರ್ ಅವರ ನಿಧನದ ಸುದ್ದಿ ಕೇಳಿ ನನಗೆ ಆಘಾತವಾಯಿತು. ಈಗಲೂ ನಾನು ವಿಷಯ ನಂಬಲು ಸಾಧ್ಯವಾಗುತ್ತಿಲ್ಲ. ಕಿರ್ಲೋಸ್ಕರ್ ಕುಟುಂಬದ ಜತೆ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದ ಒಡನಾಟವಿತ್ತು" ಎಂದು ಹೇಳಿದರು.
ವಿದ್ಯುತ್ ಸ್ವಾವಲಂಬನೆ ಸಾಧಿಸಿದ ಬಿಡದಿ ಟೊಯೋಟಾ ಘಟಕ
ವಿಕ್ರಮ್ ಕಿರ್ಲೋಸ್ಕರ್ ಅವರೊಂದಿಗಿನ ಒಡನಾಟ ಸ್ಮರಿಸಿಕೊಂಡಿರುವ ನಿರಾಣಿ, "2010ರ ಜಾಗತಿಕ ಹೂಡಿಕೆದಾರರ ಸಮಾವೇಶದ ನಿಮಿತ್ತ ಅಮೆರಿಕಗೆ ಭೇಟಿ ನೀಡಿದ್ದಾಗ ವಿಕ್ರಮ್ ಕಿರ್ಲೋಸ್ಕರ್ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ದೊರೆಕಿತ್ತು. ಇದರಿಂದ ನಾವು ಹೆಚ್ಚು ಆತ್ಮೀಯರಾದೆವು. ರಾಜ್ಯ ಮತ್ತು ದೇಶದ ಕೈಗಾರಿಕಾ ಪ್ರಗತಿ ಕುರಿತು ನಾವು ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
43 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಟೊಯೋಟಾ
"ಕೈಗಾರಿಕೋದ್ಯಮಿ ವಿಕ್ರಮ್ ಅವರು ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ್ದರು. ಕೈಗಾರಿಕೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿದ್ದರೂ ಅವರು ತಪ್ಪದೇ ಹಾಜರಾಗುತ್ತಿದ್ದರು. ಕೈಗಾರಿಕಾ ಬೆಳವಣಿಗೆ, ಪುನಶ್ಚೇತನ ಸೇರಿದಂತೆ ಉದ್ಯಮದ ಕುರಿತ ಕಳಕಳಿ ಅಪಾರವಾದುದು. ಅವರ ನಿಧನದಿಂದಾಗಿ ದೇಶ ಓಬ್ಬ ಉತ್ತಮ ಉದ್ಯಮಿಯನ್ನು ಕಳೆದುಕೊಂಡಿದೆ" ಎಂದು ಕಂಬನಿ ಮಿಡಿದಿದ್ದಾರೆ.
"2022ರ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರು ಅರಮನೆಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಿಕ್ರಮ್ ಅವರನ್ನು ಭೇಟಿಯಾಗಿದ್ದೆ, ಅದೇ ನಮ್ಮ ಕಡೆಯ ಭೇಟಿ . ವೇದಿಕೆಯಲ್ಲಿ ವಿಕ್ರಮ್ ಕಿರ್ಲೋಸ್ಕರ್ ಅವರ ಪತ್ನಿ ಗೀತಾಂಜಲಿ ಅವರಿಗೂ ಆಹ್ವಾನ ನೀಡಿದ್ದರಿಂದ ನೀವು ಯಾಕೆ ಬಂದಿದ್ದೀರಿ ಎಂದು ನಾನು ತಮಾಷೆಯಾಗಿ ಕೇಳಿದೆ. ಆಗ ವಿಕ್ರಮ್ ಅವರು, ಗೀತಾಂಜಲಿ ಅಸ್ವಸ್ಥರಾಗಿದ್ದಾರೆ. ಆದರೆ ಈ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸುತ್ತಿದ್ದಾರೆಂದು ಹೇಳಿದ್ದರು" ಎಂದು ಮೆಲುಕು ಹಾಕಿದರು.

ವಿಕ್ರಮ್ ಕಿರ್ಲೋಸ್ಕರ್ ಅವರೊಂದಿಗಿನ ಮತ್ತೊಂದು ಪ್ರಸಂಗವನ್ನು ನೆನಪಿಸಿಕೊಂಡ ಸಚಿವ ನಿರಾಣಿ, "ಬಾಗಲಕೋಟೆ ಜಿಲ್ಲೆಯ ಮುಧೋಳವು ಸಕ್ಕರೆ ಸಮೃದ್ಧವಾಗಿರುವ ಪ್ರದೇಶ. ವಿಕ್ರಂ ಮತ್ತು ಅವರ ಕುಟುಂಬದವರು ಸಕ್ಕರೆ ಮತ್ತು ಸಂಬಂಧಿತ ಉದ್ಯಮಗಳ ಕುರಿತು ಅಧ್ಯಯನ ಮಾಡಲು ಪಟ್ಟಣಕ್ಕೆ ಭೇಟಿ ನೀಡಲು ಬಯಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ," ಎಂದು ವಿಷಾದಿಸಿದರು.