ಬಿಜೆಪಿಯಲ್ಲಿ ಹೆಚ್ಚಾಯ್ತು ಆಂತರಿಕೆ ಕಚ್ಚಾಟ; ಬಿಜೆಪಿಯಲ್ಲಿವೆ ಇಪ್ಪತ್ತು ಬಣ: ಎಂ ಬಿ ಪಾಟೀಲ್
ಬೆಂಗಳೂರು, ಜೂನ್ 29: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ನಾಯಕರಲ್ಲಿ ಆಂತರಿಕ ಕಚ್ಚಾಟ ಶುರುವಾಗಿದ್ದು, ಸ್ವಪಕ್ಷದ ನಾಯಕರ ವಿರುದ್ದವೇ ಬಿಜೆಪಿ ನಾಯಕರು ಬಹಿರಂಗವಾಗಿ ಆಕ್ರೋಶವನ್ನ ಹೊರಹಾಕಿದ್ದು, ಬಿಜೆಪಿಯಲ್ಲಿ ಇಪ್ಪತ್ತು ಬಣಗಳಿವೆ ಎಂದು ಸಚಿವ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಖಾಲಿ ಕುರ್ಚಿಯಲ್ಲಿ ಕೂತಿದ್ದಾರೆ ಅಂತಾರೆ. ಬಿಜೆಪಿ ಪಕ್ಷ ಛಿದ್ರ ಛಿದ್ರ ಆಗಿದೆ. ಒಂದಲ್ಲ ಇಪ್ಪತ್ತು ಗುಂಪು ಆಗಿದೆ. ಯಾರು ಜೋಡಿಸಿದ್ರೂ ಜೋಡಿಸೋದಕ್ಕೆ ಆಗಲ್ಲ. ಆ ರೀತಿ ಛಿದ್ರ ಛಿದ್ರ ಆಗಿದೆ. ಬಿಜಾಪುರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿ ಹೊಡೆದಾಟ ಆಗ್ತಿದೆ. ಬಿಜೆಪಿ ಅಂತಿಮ ಘಟ್ಟ ತಲುಪಿದೆ. ಬಿಜೆಪಿಗೆ ಫೆವಿಕಲ್ ಹಚ್ಚಿದ್ರೂ ಅಂಟಲ್ಲ ಎಂದು ಬಿಜೆಪಿ ನಾಯಕರ ಕಾಲೆಳೆದರು.

ಬಿಜೆಪಿಯವರನ್ನ ಜನ ತಿರಸ್ಕಾರ ಮಾಡಿದ್ದಾರೆ. ಸರಿಯಾದ ಪಾಠ ಕಲಿಸಿದ್ದಾರೆ, ಶಿಕ್ಷೆ ಕೊಟ್ಟಿದ್ದಾರೆ. 40% ಕಮಿಷನ್ ಹೊಡೆಯೋದು ಬಿಟ್ಟು ಬೇರೇನೂ ಮಾಡಿಲ್ಲ. ಈಗ ಅವರಿಗೆ ಕೆಲಸ ಇಲ್ಲ ಅಕ್ಕಿ ಇದ್ರೂ ಕೇಂದ್ರ ಕೊಡುತ್ತಿಲ್ಲ. ಅದಕ್ಕೆ ಪ್ರತೀ ಒಬ್ಬರಿಗೆ 170 ರೂ ಕೊಡುತ್ತೇವೆ. ಇದೇ ಸಿಟಿ ರವಿ ಅಕ್ಕಿ ಇಲ್ಲ ಅಂದ್ರೆ ಹಣ ಕೊಡಿ ಎಂದು ಹೇಳಿದರು. ಈಗ ನಾವು ಹಣವನ್ನೇ ಕೊಡ್ತಿದ್ದೀವಿ ಬೇರೆ ರಾಜ್ಯದವರು ಒಂದು ತಿಂಗಳಿಗೆ ಮಾತ್ರ ಕೊಡುತ್ತೇವೆ ಎಂದ್ರು. ಮುಂದೆ ಅದೇ ಸಮಸ್ಯೆ ಆಗ್ತಿತ್ತು, ಹೀಗಾಗಿ ಹಣ ಕೊಡ್ತಿದ್ದೀವಿ, ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಜನ ಖುಷಿಯಾಗಿದ್ದಾರೆ, ಬಿಜೆಪಿಯವರಿಗೆ ಕೆಲಸ ಇಲ್ಲ. ಇವರ ನಾಟಕವನ್ನ ಜನ ಗಣನೆಗೆ ತೆಗೆದುಕೊಂಡಿಲ್ಲ ದುಡ್ಡು ಕೊಡ್ತೀವಿ, ರಾಗಿ, ಜೋಳ ಯಾವುದು ಬೇಕೋ ಅದನ್ನ ತೆಗೆದುಕೊಳ್ಳುತ್ತಾರೆ. ಅಕ್ಕಿ ಕೊಡದಿದ್ರೆ ದುಡ್ಡು ಕೊಡಿ ಅಂತಾಬಸವರಾಜ ಬೊಮ್ಮಾಯಿ ಹೇಳಿಲ್ವಾ? ಈಗ ಪುಂಗಿ ಊದೋದಾ..? ಕೇಂದ್ರ ಸರ್ಕಾರ ಮೋಸ ಮಾಡಿ. ಬಡವರ ಅನ್ನ ದಲ್ಲಿ ರಾಜಕೀಯ ಮಾಡಿದ್ರು. ಅದಕ್ಕೆ ಅನಿವಾರ್ಯವಾಗಿ ಹಣ ಕೊಡುತ್ತಿದ್ದೇವೆ.
ಕಾಸಿಗಾಗಿ ವರ್ಗಾವಣೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ. ಪಾರದರ್ಶವಾಗಿ ನಡೆಯುತ್ತಿದೆ, ಟೆಂಡರ್ ಕೂಡ ನಾವು ಇನ್ನೂ ಕರೆದಿಲ್ಲ. ಕುಮಾರಸ್ವಾಮಿ ಬಹಳ ಆತುರರಾಗಿದ್ದಾರೆ, ಅವರ ಸರ್ಕಾರ ಇದ್ದಾಗ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ತೋರಿಸುತ್ತಿದ್ದಾರೆ. ಸಿಎಂ ಕಚೇರಿಯಲ್ಲಿ ಏನೂ ನಡೆದಿಲ್ಲ ಎಂದರು.
ಯತೀಂದ್ರ ಹೆಸರು ಯಾಕೆ ತರ್ತೀರಿ. ಅವರ ಮೇಲೆ ಯಾಕೆ ಗೂಬೆ ಕೂರಿಸೋದು, ಯತೀಂದ್ರ ಎಂಎಲ್ ಎ ಆಗಿದ್ದಾರಾ? ಎಂಎಲ್ ಎಗಳು ಹೋದಾಗ ಶಿಫಾರಸ್ಸು ಪತ್ರ ಕೊಟ್ಟಿರುತ್ತಾರೆ. ಅದಕ್ಕೆ ಹಣ ಲೇಪ ಕೊಡೋದು ಸರಿಯಲ್ಲ, ಕುಮಾರಸ್ವಾಮಿ ಎರಡೆರಡು ಲೆಟರ್ ಕೊಟ್ಟಿರಲಿಲ್ವಾ ಎಂದು ಪ್ರಶ್ನಿಸಿದ ಅವರು, ನಾನು ಕೂಡ ಆಗ ಸರ್ಕಾರದ ಭಾಗ ಆಗಿದ್ದೆ, ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರುತ್ತೆ. ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಿ ಅಂತಾ ಬರೆದಿರುತ್ತೇವೆ ಎಂದರು.












Click it and Unblock the Notifications