NHAIದಿಂದ 10 ಯೋಜನೆಗಳನ್ನು ಅಭಿವೃದ್ದಿಪಡಿಸಲು ಕ್ರಮ: ಸಚಿವ ಸಿ.ಸಿ.ಪಾಟೀಲ್
ಬೆಳಗಾವಿ,ಡಿಸೆಂಬರ್ 28: ರಾಜ್ಯದಲ್ಲಿ ಎನ್ ಎಚ್ ಎ ಐ ದಿಂದ ಹಸಿರು ಕಾರಿಡಾರ್ ನಿರ್ಮಾಣದಡಿ 10 ಯೋಜನೆಗಳನ್ನು ಅಭಿವೃದ್ದಿಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ಹೇಳಿದರು.
ಈ ಕುರಿತು ಬುಧವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿ, ಕೇಂದ್ರ ಸರ್ಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ದೇಶದಲ್ಲಿ ಹಸಿರು ಯೋಜನೆಯಡಿ ಸುಮಾರು 781.38 ಕಿ.ಮೀ. ಉದ್ದದ ಹೆದ್ದಾರಿಯನ್ನು 23 ಪ್ಯಾಕೇಜ್ಗಳಲ್ಲಿ ಅಭಿವೃದ್ಧಿಪಡಿಸಲು ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ರಾಜ್ಯಗಳನ್ನು ಆಯ್ಕೆ ಮಾಡಿ ರಾಷ್ಟ್ರೀಯ ಹಸಿರು ಕಾರಿಡಾರ್ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿರುವುದು ತಿಳಿದು ಬಂದಿದೆ. ಆದರೆ, ವಿಶ್ವಬ್ಯಾಂಕ್ ನೆರವಿನಿಂದ ಹಸಿರು ರಾಜ್ಯ ಕಾರಿಡಾರ್ ನಿರ್ಮಾಣ ಯೋಜನೆಯಡಿ ರಾಜ್ಯ ಸರ್ಕಾರದ ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಾರ್ಗಸೂಚಿಯನ್ವಯ ನಿರ್ಹಹಣೆ: ಬೆಂಗಳೂರು ಮೈಸೂರ ದಶಪಥ
ಇನ್ನೂ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯನ್ನು ಐ.ಆರ್.ಸಿ ಮಾನದಂಡಗಳಂತೆ ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಹೊರಡಿಸುವ ಮಾರ್ಗಸೂಚಿ ಅನ್ವಯ ನಿರ್ವಹಿಸಲಾಗುತ್ತದೆ. ಈ ಯೋಜನೆಯ ಗುಣಮಟ್ಟದ ಕುರಿತು ಖಾತರಿಪಡಿಸಿಕೊಳ್ಳಲು ರಾಷ್ಟ್ರೀಯ ಮಟ್ಟದ ಥರ್ಡ್ ಪಾರ್ಟಿಯಿಂದ ಗುಣಮಟ್ಟದ ಪರಿವೀಕ್ಷಣೆ ಕೈಗೊಳ್ಳಲಾಗಿದ್ದು ಎಲ್ಲಾ ತರಹದ ಗುಣಮಟ್ಟದ ಪರೀಕ್ಷೆಗಳನ್ನು ಮಾಡಲಾಗಿರುತ್ತದೆ. ಯಾವುದೇ ಕಳಪೆ ಮಟ್ಟದ ಕಾಮಗಾರಿ ಕೈಗೊಂಡಿರುವುದಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವರದಿ ನೀಡಿದೆ ಎಂದು ಸಚಿವರಾದ ಸಿ. ಸಿ.ಪಾಟೀಲ್ ಅವರು ಸದಸ್ಯರಾದ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮಾರ್ಚ್ ಅಂತ್ಯದವರೆಗೆ ಅನುದಾನ ಬಳಕೆಗೆ ಕ್ರಮ
2022-23ನೇ ಸಾಲಿಗೆ ಲೋಕೋಪಯೋಗಿ ಇಲಾಖೆಗೆ ಒದಗಿಸಿದ ರೂ.9397.67 ಕೋಟಿ ಅನುದಾನದಲ್ಲಿ 17-12-2022ರವರೆಗೆ ಆರ್ಥಿಕ ಇಲಾಖೆಯು ಪ್ರದತ್ತ ಮಾಡಿರುವ ಅಧಿಕಾರದಂತೆ ಒಟ್ಟಾರೆ ರೂ.7084.31 ಕೋಟಿ ಬಿಡುಗಡೆ ಮಾಡಿದೆ. ಲೋಕೋಪಯೋಗಿ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಡಿಯ ಅನುದಾನವನ್ನು ಮಾರ್ಚ್ ಅಂತ್ಯದವರೆಗೆ ಬಳಸಲಾಗುವುದು ಎಂದು ಸಚಿವರು, ಸದಸ್ಯರಾದ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದರು












Click it and Unblock the Notifications