ಕರ್ನಾಟಕದಲ್ಲಿ ಕೊವಿಡ್-19 ಲಸಿಕೆ ಹಂಚಿಕೆಗೆ ಹೇಗಿದೆ ಪ್ಲ್ಯಾನ್?
ಬೆಂಗಳೂರು, ನವೆಂಬರ್.24: ಭಾರತದಲ್ಲಿ 30 ಕೋಟಿ ಜನರಿಗೆ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ಮೊದಲ ಹಂತದಲ್ಲೇ ನೀಡಲಾಗುತ್ತದೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ದೇಶದ ಕೊವಿಡ್-19 ಪರಿಸ್ಥಿತಿ ಸಮಾಲೋಚನೆ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿತ್ತು. ಈ ಸಭೆಯ ನಂತರ ಮಾಧ್ಯಮಗಳಿಗೆ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಮಾದರಿ ಹೇಗಿರುತ್ತದೆ. ರಾಜ್ಯದಲ್ಲಿ ಸೋಂಕು ವಿತರಣೆಯ ಸಿದ್ಧತೆ ಹೇಗಿರಬೇಕು ಎನ್ನುವುದರ ಕುರಿತು ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ "Cheap And Best" ಲಸಿಕೆ!
ಭಾರತದಲ್ಲಿ ಕೊರೊನಾವೈರಸ್ ಲಸಿಕೆಗಳ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳು ಯಾವ ಹಂತದಲ್ಲಿದೆ ಎನ್ನುವುದರ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಇದರ ಜೊತೆಗೆ ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಿದ್ಧತೆಗಳು ಹೇಗಿರಬೇಕು ಎನ್ನುವುದರ ಕುರಿತು ಸೂಚನೆಗಳನ್ನು ನೀಡಿದ್ದಾರೆ ಎಂದು ಸಚಿವ ಬೊಮ್ಮಾಯಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾವೈರಸ್ ಲಸಿಕೆಗಳ ಬಗ್ಗೆ ಮಾಹಿತಿ
ಕೊರೊನಾವೈರಸ್ ಲಸಿಕೆಗಳ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳು ಯಾವ ಹಂತದಲ್ಲಿದೆ ಎನ್ನುವುದರ ಕುರಿತು ನೀತಿ ಆರೋಗದ ಸದಸ್ಯ ಡಾ.ವಿ.ಕೆ. ಪೌಲ್ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ 50 ಲಸಿಕೆಗಳು ವೈದ್ಯಕೀಯ ಸಂಶೋಧನೆ ಹಂತದಲ್ಲಿವೆ. 25 ಲಸಿಕೆಗಳು ಮುಂಗಡ ಪ್ರಯೋಗ, 5 ಲಸಿಕೆಗಳ ಮಾದರಿಯು ವೈದ್ಯಕೀಯ ಪ್ರಯೋಗದ ಹಂತದಲ್ಲಿವೆ. ಭಾರತದಲ್ಲಿ ಒಟ್ಟು 24 ಸಂಸ್ಥೆಗಳು ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಡಾ.ವಿ.ಕೆ.ಪೌಲ್ ತಿಳಿಸಿದ್ದಾರೆ ಎಂಬುದಾಗಿ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದರು.
ಕೊರೊನಾವೈರಸ್ ಲಸಿಕೆ ನೀಡುವಲ್ಲಿ ಮೊದಲ ಆದ್ಯತೆ ಯಾರಿಗೆ?
ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಎನಿಸಿರುವ ಭಾರತದಲ್ಲಿ ಏಕಕಾಲಕ್ಕೆ 130 ಕೋಟಿಗೂ ಅಧಿಕ ಜನರಿಗೆ ಕೊವಿಡ್-19 ಲಸಿಕೆ ಪೂರೈಸುವುದು ಅಸಾಧ್ಯ. ಈ ಹಿನ್ನೆಲೆ ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆಯನ್ನು ನೀಡುವುದಕ್ಕೆ ಯೋಜನೆ ರೂಪಿಸಲಾಗಿದೆ. 30 ಕೋಟಿ ಲಸಿಕೆಗಳನ್ನು ನೀಡುವುದರಲ್ಲೂ ಯಾರಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ. 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕೊರೊನಾವಾರಿಯರ್ಸ್ ಹಾಗೂ 50 ರಿಂದ 60 ವರ್ಷ ಮೇಲ್ಪಟ್ಟವರಿಗೆ 26 ಕೋಟಿ ಕೊವಿಡ್-19 ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಎಲೆಕ್ಷನ್ ಬೂತ್ ಸ್ಟೈಲ್ ನಲ್ಲಿ ಲಸಿಕೆಗಳ ವಿತರಣೆ
ಕರ್ನಾಟಕದಲ್ಲಿ ಕೊರೊನಾವೈರಸ್ ಲಸಿಕೆಗಳ ವಿತರಣೆ ಕುರಿತು ತೀರ್ಮಾನಕ್ಕೆ ಮೂರು ಸಮಿತಿಗಳನ್ನು ರಚಿಸಲಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಒಂದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಹಾಗೂ ತಾಲೂಕು ಮಟ್ಟದಲ್ಲಿ ಒಂದು ಸಮಿತಿ ರಚಿಸುವುದಕ್ಕೆ ನಿರ್ಧರಿಸಲಾಗಿದೆ. ಚುನಾವಣಾ ಬೂತ್ ಗಳ ರೀತಿಯಲ್ಲೇ ಲಸಿಕೆ ವಿತರಣೆಗೆ ಬೂತ್ ಗಳನ್ನು ರಚಿಸಲಾಗುತ್ತದೆ. ಕೊರೊನಾವೈರಸ್ ಲಸಿಕೆಯನ್ನು ನೀಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ಟ್ರ್ಯಾಕ್ ರಿಪೋರ್ಟ್ ನ್ನು ಸಂಗ್ರಹಿಸಲಾಗುತ್ತದೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಿದ್ಧ ಎಂದ ಡಾ.ಸುಧಾಕರ್
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಕೂಡಾ ಭಾಗವಹಿಸಿದ್ದರು. ಹೈದ್ರಾಬಾದ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಾದ ಸಚಿವರು, ರಾಜ್ಯದಲ್ಲಿ ಲಸಿಕೆ ವಿತರಣೆಗೆ ಕೇಂದ್ರದ ಸೂಚನೆಯಂತೆ ಸಿದ್ಧತೆ ನಡೆಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ಲಸಿಕೆ ವಿತರಣೆಗೆ 29451 ಕೇಂದ್ರಗಳನ್ನು ರಚಿಸಲಾಗಿದ್ದು, 10,000ಕ್ಕೂ ಹೆಚ್ಚು ವ್ಯಾಕ್ಸಿನೇಟರ್ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಒಟ್ಟು 2855 ಕೋಲ್ಡ್ ಚೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಪಶು ಸಂಗೋಪನಾ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನೂ ಬಳಸಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.