ಹೈಕಮಾಂಡ್ ನಾಯಕರು ಕಾದು ನೋಡುವಂತೆ ಮಾಡಿದ್ದರು ಅಂಬರೀಶ್!
ಬೆಂಗಳೂರು, ನವೆಂಬರ್ 25 : ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ವಿಧಿವಶರಾಗಿದ್ದಾರೆ. ರಾಜಕೀಯ ಜೀವನದಲ್ಲಿಯೂ ರೆಬಲ್ ಸ್ಟಾರ್ ಆಗಿಯೇ ಅವರು ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಹ ತಮಗಾಗಿ ಕಾಯುವಂತೆ ಮಾಡಿದ್ದರು.
ಅಂಬರೀಶ್ ಅವರು 2013ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕಿಳಿದರು. 90,329 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾದರು.
ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ
ಆದರೆ, 2016ರಲ್ಲಿ ಸಂಪುಟ ಪುನಾರಚನೆ ಮಾಡುವಾಗ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಸೌಜನ್ಯಕ್ಕೂ ತಮ್ಮ ಗಮನಕ್ಕೆ ತಾರದೇ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಂಬರೀಶ್ ಅಸಮಾಧಾನಗೊಂಡರು.
ಕಂಠೀರವ ಸ್ಟುಡಿಯೋದಲ್ಲಿ ನ.26ರಂದು ಅಂಬರೀಶ್ ಅಂತ್ಯಕ್ರಿಯೆ
ಈ ಬೆಳವಣಿಗೆ ಬಳಿಕ ಅಂಬರೀಶ್ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರವುಳಿದರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾದರು. ವಿಧಾನಸಭೆ ಕಲಾಪಗಳಿಗೂ ಹಾಜರಾಗಲಿಲ್ಲ. 2018ರ ವಿಧಾಸನಸಭೆ ಚುನಾವಣೆ ಬಂದಿತು.
ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಎಚ್.ಡಿ.ಕುಮಾರಸ್ವಾಮಿ ಸಂತಾಪ
ಮಂಡ್ಯ ಕ್ಷೇತ್ರದಿಂದ ಅಂಬರೀಶ್ ಮತ್ತೆ ಸ್ಪರ್ಧೆ ಮಾಡಲಿದ್ದಾರೆಯೇ? ಎಂಬ ಬಗ್ಗೆ ಭಾರಿ ಚರ್ಚೆಗಳು ಆರಂಭವಾದವು. ಆದರೆ, ಅಂಬರೀಶ್ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರದಲ್ಲಿ ಮೌನ ವಹಿಸಿದರು. ಪಕ್ಷದ ಹೈಕಮಾಂಡ್ ನಾಯಕರು ಸಹ ಅಂಬರೀಶ್ ಮುಂದಿನ ನಡೆ ಏನು? ಎಂದು ಕಾದು ನೋಡಿದರು.
ನಾಮಪತ್ರ ಸಲ್ಲಿಸಲು 2 ದಿನ ಬಾಕಿ ಇರುವ ತನಕ ಅಂಬರೀಶ್ ತಮ್ಮ ನಿರ್ಧಾರ ಪ್ರಕಟಿಸಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಅಂಬರೀಶ್ ಹೆಸರಿನಲ್ಲಿ ಬಿ-ಫಾರಂ ಸಿದ್ಧವಾಗಿಟ್ಟುಕೊಂಡು ಅವರ ನಿರ್ಧಾರಕ್ಕಾಗಿ ಕಾದಿದ್ದರು.
ಅಂತಿಮವಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಅಂಬರೀಶ್ ಘೋಷಣೆ ಮಾಡಿದರು. ಪಕ್ಷ ಪಿ.ರವಿಕುಮಾರ್ ಅವರಿಗೆ ಟಿಕೆಟ್ ನೀಡಿತು. ಅಂಬರೀಶ್ ಬೆಂಬಲಿಗರು ಚುನಾವಣೆಯಲ್ಲಿ ಜೆಡಿಎಸ್ ಬೆಂಬಿಸುವುದಾಗಿ ಘೋಷಣೆ ಮಾಡಿದೆ.