Mettur Dam: ರಾಜ್ಯದಲ್ಲಿ ಪುನರ್ವಸು ಅಬ್ಬರ; ಮೆಟ್ಟೂರು ಜಲಾಶಯಕ್ಕೆ 40,000 ಕ್ಯೂಸೆಕ್ಸ್ ಒಳಹರಿವು
ಕರ್ನಾಟಕ-ತಮಿಳುನಾಡು ನೀರು ಜಗಳ ಆರಂಭವಾಗುವ ಮುನ್ನವೇ ಪುನರ್ವಸು ಅಂತ್ಯ ಹಾಡಲು ಶುರು ಮಾಡಿದೆ. ತಮಿಳುನಾಡಿಗೆ 19 ಟಿಎಂಸಿ ನೀರು ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ರಾಜ್ಯಕ್ಕೆ ಆದೇಶ ಕೊಟ್ಟ ಬೆನ್ನಲ್ಲೇ ಮಳೆ ಅಬ್ಬರಿಸಲು ಆರಂಭಿಸಿದ್ದು, ತಮಿಳುನಾಡು ಕೇಳಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ.
ವಯನಾಡು ಮತ್ತು ರಾಜ್ಯದ ಮೈಸೂರು, ಕೊಡಗು ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಕಬಿನಿ ಮತ್ತು ನುಗು ಜಲಾಶಯಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಭಾರಿ ಮಳೆಯಿಂದ ಕೆಆರ್ ಎಸ್ ಜಲಾಶಯ ದಿನೇ ದಿನೇ ಭರ್ತೀಯಾಗುತ್ತಿದೆ. ತಮಿಳುನಾಡಿಗೆ ಕಬಿನಿ, ನುಗು ಜಲಾಶಯದಿಂದಲೇ ನೀರನ್ನು ಹೊರಬಿಡಲಾಗುತ್ತಿದೆ. ಪ್ರತಿದಿನ 11,500 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಲಾಗಿತ್ತು, ಆದರೆ ಈಗ 40,000 ಕ್ಯೂಸೆಕ್ಸ್ಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿಯುತ್ತಿದೆ.
ಮೆಟ್ಟೂರು ಜಲಾಶಯಕ್ಕೆ ಭಾರಿ ನೀರು
ಮೆಟ್ಟೂರು ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಶುಕ್ರವಾರ ಬೆಳಗ್ಗೆ ಮೆಟ್ಟೂರು ಜಲಾಶಯದ ಒಳಹರಿವು 40,018 ಕ್ಯೂಸೆಕ್ಸ್ ಇದ್ದು, ಸಂಜೆ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಲಾಶಯದಿಂದ 1000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. 120 ಅಡಿ ಗರಿಷ್ಠ ಅಡಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 55.120 ಅಡಿ ನೀರು ಸಂಗ್ರಹವಾಗಿದೆ.
ಕೆಆರ್ ಎಸ್ ಭರ್ತಿಗೆ ದಿನಗಣನೆ
ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಹೇಮಾವತಿ ಮತ್ತು ಹಾರಂಗಿ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ನೀರನ್ನು ನದಿಗೆ ಹರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದು ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.
ಕೆಆರ್ ಎಸ್ ಜಲಾಶಯಕ್ಕೆ ಶುಕ್ರವಾರ 45,091 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯದ ನೀರಿನ ಮಟ್ಟ 117.20 ಅಡಿಗೆ ತಲುಪಿದೆ. ಜಲಾಶಯ ಭರ್ತಿಯಾಗಲು ಇನ್ನು 7 ಅಡಿ ಮಾತ್ರ ಬಾಕಿ ಇದ್ದು, ಇದೇ ರೀತಿ ಒಳಹರಿವು ಇದ್ದರೆ ಇನ್ನು ನಾಲ್ಕೈದು ದಿನಗಳಲ್ಲಿ ಜಲಾಶಯ ಭರ್ತಿಯಾಗುವುದು ಖಚಿತವಾಗಿದೆ. ಕೆಆರ್ ಎಸ್ ಭರ್ತಿಯಾದ ಬಳಿಕ ಒಳಬರುವ ಎಲ್ಲಾ ನೀರನ್ನು ನದಿಗೆ ಹರಿಸಲಿದ್ದು, ತಮಿಳುನಾಡಿಗೆ ಮತ್ತಷ್ಟು ನೀರು ಹರಿಯಲಿದೆ.
ಕಾವೇರಿ ಕೊಳ್ಳದಲ್ಲಿ ಇನ್ನೂ 10 ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಮುಂಗಾರು ಆರಂಭದಲ್ಲೇ ಮಳೆರಾಯ ಎರಡೂ ರಾಜ್ಯಗಳ ನೀರಿನ ಸಮಸ್ಯೆಗೆ ಅಂತ್ಯ ಹಾಡಿದ್ದಾನೆ. ಮುಂದಿನ ದಿನಗಳಲ್ಲಿ ಕೂಡ ಉತ್ತಮ ಮಳೆಯಾದರೆ, ಬೇಸಿಗೆಯಲ್ಲಿ ಕೂಡ ರಾಜ್ಯದ ರೈತರು ನೆಮ್ಮದಿಯಾಗಿ ಬೆಳೆ ಬೆಳೆದುಕೊಳ್ಳಲಿದ್ದಾರೆ.












Click it and Unblock the Notifications