ಮ್ಯಾನುವೆಲ್ ಸ್ಕ್ಯಾವೆಂಜರ್: ಹೈಕೋರ್ಟ್ನಿಂದ ಸ್ವಯಂ ಪಿಐಎಲ್ ದಾಖಲು
ಬೆಂಗಳೂರು, ಜನವರಿ 04: ರಾಜ್ಯದಲ್ಲಿ ಮಲಗುಂಡಿಗಳ ಸ್ವಚ್ಛತೆಗೆ ಮಾನವರ ಬಳಕೆ ನಿಷೇಧವಾಗಿದ್ದರೂ ಸ್ವಚ್ಛತೆಗೆ ಕೆಳ ಸಮುದಾಯಗಳ ವ್ಯಕ್ತಿಗಳನ್ನು ಬಳಕೆ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಆ ಕುರಿತು ಸ್ವಯಂ ಪಿಐಎಲ್ ದಾಖಲಿಸಿಕೊಂಡಿದೆ. ಅಲ್ಲದೆ, ಈ ಪ್ರಕ್ರಿಯೆಗೆ ಜಾತಿ ತಾರತಮ್ಯ ಮಾಡುತ್ತಿರುವುದು ತೀವ್ರ ನೋವಿನ ಸಂಗತಿ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಬುಧವಾರ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಈ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲು ರಿಜಿಸ್ಟ್ರಾರ್ ಜನರಲ್ಗೆ ಆದೇಶಿಸಿದೆ.

ಅಲ್ಲದೆ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯನ್ನಾಗಿ ವಕೀಲ ಶ್ರೀಧರ ಪ್ರಭು ಅವರನ್ನು ನೇಮಕ ಮಾಡಿ ವಿಚಾರಣೆಜಯನ್ನು ಜನವರಿ 5ರಂದು ನಡೆಸುವುದಾಗಿ ಹೇಳಿದೆ.
ನಾಚಿಕೆಗೇಡಿನ ಸಂಗತಿ: ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಕಳೆದ 60 ವರ್ಷಗಳಿಂದಲೂ ನಮ್ಮ ಸಹೋದರನಂತೆ ಜತೆಯಲ್ಲಿರುವ ವ್ಯಕ್ತಿ ದೂರದೃಷ್ಟವಶಾತ್ ಕೆಳ ಜಾತಿಯಲ್ಲಿ ಜನಿಸಿದ್ದಾನೆ ಎಂಬ ಕಾರಣದಿಂದ ಈ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಈ ಬೆಳವಣಿಗೆ ಮನುಷ್ಯತ್ವಕ್ಕೆ ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದರು.
ಅಲ್ಲದೆ, ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾನೆ ಎಂಬ ಕಾರಣದಿಂದ ಅವರನ್ನು ಪ್ರಾಣಿಗಳಿಗಿಂತಲೂ ಕೆಟ್ಟದಾಗಿ ನೋಡಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ನ್ಯಾಯಪೀಠ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಚಂದ್ರನ ಮೇಲೆ ಹೆಜ್ಜೆ ಇಡುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹೋದರನನ್ನು ಮನುಷ್ಯರಂತೆ ಪರಿಗಣಿಸುತ್ತಿಲ್ಲ. ಈ ಬೆಳವಣಿಗೆ ತಂತ್ರಜ್ಞಾನದ ಅಭಿವೃದ್ಧಿ ವ್ಯರ್ಥವಾದಂತಲ್ಲವೇ ಎಂದು ಹೇಳಿತು.
ಸದ್ಯ ತಂತ್ರಜ್ಞಾನದ ಅನುಸಾರವಾಗಿ ಯಂತ್ರೋಪಕರಣಗಳಿಂದ ಮಲಗುಂಡಿ ಸ್ವಚ್ಛಗೊಳಿಸುವುದಕ್ಕೆ ಅವಕಾಶವಿದೆ. ಆದರೂ ಬಳಕೆ ಮಾಡುತ್ತಿಲ್ಲ. ಇದು ಅಮಾನವೀಯ, ಬಡತನ ಕಾರಣಕ್ಕೆ ಅವರನ್ನು ಆ ಕೆಲಸಕ್ಕೆ ಹಚ್ಚುವುದು ಜಾತೀಯತೆಯ ತಾರತಮ್ಯ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇದೆಲ್ಲಾ ನಡೆಯುತ್ತಿದೆಯಲ್ಲಾ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಇದು ತಂತ್ರಜ್ಞಾನದ ಸಮಸ್ಯೆ ಅಲ್ಲ. ಮನಸ್ಥಿತಿಯಲ್ಲಿಯೇ ಸಮಸ್ಯೆ ಇದೆ. ಇದು ಬದಲಾಗಬೇಕಿದೆ ಎಂದು ತಿಳಿಸಿದರು.
ದ್ವಿಪದಿ ಉಲ್ಲೇಖ: ಕವಿ ಸಾಹಿರ್ ಲುಧಿಯಾನ್ವಿ ಅವರ ಒಂದು ದ್ವಿಪದ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ "ಮಿಟ್ಟಿ ಕಾ ಭಿ ಹೈ ಕುಚ್ ಮೋಲ್ ಮಗರ್ ಇನ್ಸಾನೋನ್ ಕಿ ಕಿಮತ್ ಕುಚ್ ಭಿ ನಹೀಂ, ಇನ್ಸಾನೋನ್ ಕಿ ಇಜ್ಜತ್ ಜಬ್ ಜುಟೆ ಸಿಕ್ಕೊನ್ ಮೇ ನಾ ತೌಲಿ ಜಾಯೆಂಗಿ... ವೋಹ್ ಸುಭಾಹ್ ಕಭಿ ತೋ ಆಯೆಂಗಿ..." ಇಲ್ಲಿ ಮಣ್ಣಿಗಾದರೂ ಬೆಲೆ ಇದೆ. ಮನುಷ್ಯ ಜಾತಿಗೆ ಬೆಲೆ ಇಲ್ಲ. ಮನುಷ್ಯನ ಮೌಲ್ಯಗಳನ್ನು ನಕಲಿ ನಾಣ್ಯಗಳಲ್ಲಿ ಅಳೆಯುವುದಕ್ಕೆ ಮುಂದಾಗಬೇಡಿ. ಆ ನಾಳೆ ಎಂದು ಬರಲಿದೆ" ಎಂದು ಹೇಳಿದರು.












Click it and Unblock the Notifications