ಬಿಎಸ್ವೈ ಸರಕಾರದ ವಿರುದ್ದ ಕುಮಾರಸ್ವಾಮಿ ಮಾಡಿದ ಆರು ಗಂಭೀರ ಟ್ವೀಟ್
ಬೆಂಗಳೂರು, ಡಿ 25: ಯಾವತ್ತು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮನ್ನು ಅಡ್ರೆಸ್ ಇಲ್ಲದಂತೆ ಹೋಗಿದ್ದಾರೆ ಎಂದು ಕೆಣಕಿದರೋ, ಅಲ್ಲಿಂದ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಒಂದೇ ಸಮನೆ ಕಿಡಿಕಾರುತ್ತಿದ್ದಾರೆ.
ಮಂಗಳವಾರ (ಡಿ 24) "ಬಿಜೆಪಿಯ ತ್ರಿಮೂರ್ತಿಗಳು ನನ್ನನ್ನು ಕೆಣಕಿ ಬೆತ್ತಲಾಗಿದ್ದಾರೆ" ಎಂದು ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ಇಂದು, ಮತ್ತೆ ಬಿಜೆಪಿ ಸರಕಾರದ ವಿರುದ್ದ ಆರು ಟ್ವೀಟ್ ಗಳ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
"ಅನರ್ಹರಿಗಾಗಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿ ನಾಯಕರು ನನ್ನ ಅಡ್ರೆಸ್ ಹುಡುಕುತ್ತಿದ್ದಾರೆ. ನನ್ನ ಅಡ್ರೆಸ್ ಕೇಳಿದ ಬಿಎಸ್ವೈ ಸೂಕ್ತ ಉತ್ತರ ಪಡೆದುಕೊಂಡರು", ಎಂದು ಕುಮಾರಸ್ವಾಮಿ, ನಿನ್ನೆ ಟ್ವೀಟ್ ಮಾಡಿದ್ದರು.
ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಘೋಷಿಸಲಾಗಿದ್ದ ಪರಿಹಾರವನ್ನು ಹಿಂದಕ್ಕೆ ಪಡೆಯುವ ವಿಚಾರ, ಮತ್ತು ಮಂಗಳೂರು ಪೊಲೀಸರ ಕ್ರಮದ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದ್ದು, ಆರು ಟ್ವೀಟ್ ಗಳನ್ನು ಮಾಡಿದ್ದರೆ. ಅದು ಹೀಗಿದೆ:

ಎಚ್ಡಿಕೆ ಮಾಡಿರುವ ಮೊದಲ ಟ್ವೀಟ್
1. "ಮಂಗಳೂರಿನಲ್ಲಿ ಆ'ರಕ್ಷಕ'ರಿಂದಲೇ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿದ ಸರ್ಕಾರ ಇಬ್ಬರು ಅಮಾಯಕರನ್ನು ಕೊಂದಿದ್ದೂ ಅಲ್ಲದೇ ಪರಿಹಾರವನ್ನೂ ವಂಚಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿ ಈಗ ಇಲ್ಲ ಎನ್ನುತ್ತಿರುವ ಬಿಎಸ್ವೈ ವಚನ ಭ್ರಷ್ಟ, ಸುಳ್ಳುಗಾರ".

ಕುಮಾರಸ್ವಾಮಿ ಮಾಡಿರುವ ಎರಡನೇ ಟ್ವೀಟ್
2. "ಸತ್ತವರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ ಎಂದು ಪರಿಹಾರ ವಂಚನೆಗೆ ಬಿಎಸ್ವೈ ನೀಡಿರುವ ಸಬೂಬು ಎಂಥ ಕ್ಷುಲ್ಲಕ? ಹೋರಾಟ ಅಪರಾಧವೇ? ಹೋರಾಟ ಸಂವಿಧಾನ ಬದ್ಧ ಹಕ್ಕು. ಹೋರಾಟಗಳನ್ನು ಹತ್ತಿಕ್ಕುವವರು ಸಂವಿಧಾನ ವಿರೋಧಿಗಳು. ದೇಶಭ್ರಷ್ಟರು".

ಮಾಜಿ ಸಿಎಂ ಕುಮಾರಸ್ವಾಮಿ ಮೂರನೇ ಟ್ವೀಟ್
3. "ಅಭಿಪ್ರಾಯ ಬೇಧವನ್ನು ಬಿಜೆಪಿ ಸಹಿಸುವುದಿಲ್ಲ. ಹೋರಾಟಗಳನ್ನು, ಹೋರಾಟಗಾರರನ್ನು 'so called ಹೋರಾಟಗಾರ' ಯಡಿಯೂರಪ್ಪ ಸಹಿಸುವುದಿಲ್ಲ. ಬಿಎಸ್ವೈ ನಿಜವಾಗಿಯೂ ಹೋರಾಟಗಾರರಾಗಿದ್ದರೆ ಪರಿಹಾರ ಮಂಜೂರು ಮಾಡಲಿ. ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಲಿ".

ಕುಮಾರಸ್ವಾಮಿಯವರ ನಾಲ್ಕನೇ ಟ್ವೀಟ್
4. "ಯಡಿಯೂರಪ್ಪನವರು ಮಂಗಳೂರಿಗೆ ಭೇಟಿ ನೀಡಿದಂದೇ ಗೋಲಿಬಾರಿಗೆ ಬಲಿಯಾದವರು ಗಲಭೆಯಲ್ಲಿ ಭಾಗಿಯಾದವರು ಎಂದು ಪೊಲೀಸರು ಯಡಿಯೂರಪ್ಪನವರಿಗೆ ಮಾಹಿತಿ ನೀಡಿರಲಿಲ್ಲವೇ? ಅಂದು ಯಡಿಯೂರಪ್ಪನವರಿಗೆ ಆ ಎಡಿಟೆಡ್ ವೀಡಿಯೋ ತೋರಿಸಿರಲಿಲ್ಲವೇ?".

ಎಚ್ಡಿಕೆ ಮಾಡಿರುವ ಐದನೇ ಟ್ವೀಟ್
5. "ನಾಲ್ಕು ದಿನ ಕಳೆದ ನಂತರ ಗೋಲಿಬಾರಿಗೆ ಬಲಿಯಾದವರಿಬ್ಬರೂ ಗಲಭೆಕೋರರು ಎಂದು ಬಿಂಬಿಸಿರುವ ಉದ್ದೇಶವಾದರೂ ಏನು? ಇದನ್ನು ನೀವು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ, ಜನತೆಗೆ ಉತ್ತರ ನೀಡಬೇಕಾಗುತ್ತದೆ. ಅಮಾಯಕರ ಮೇಲೆ ನಿಮ್ಮ ನೀಚ ಕೆಲಸದ ತಪ್ಪನ್ನು ಹೊರಿಸಿದರೆ ಮುಂದಿನ ದಿನಗಳಲ್ಲಿ ಪ್ರಾಯಶ್ಚಿತಕ್ಕೆ ತಯಾರಾಗಬೇಕಾಗುತ್ತದೆ".
6. ಬಿಎಸ್ವೈ ಆಡಳಿತದಲ್ಲಿ ಜನರಿಗೆ, ಹೋರಾಟಗಾರರಿಗೆ ರಕ್ಷಣೆ ಇಲ್ಲ. ಎಷ್ಟೇ ಆದರೂ ಇದು ಅನರ್ಹ ಸರ್ಕಾರವಲ್ಲವೇ?












Click it and Unblock the Notifications