MP Sumalatha: ರಾಜೀನಾಮೆ ನೀಡುವ ಕುರಿತು ಮಂಡ್ಯ ಸಂಸದೆ ಸುಮಲತಾ ಹೇಳಿದ್ದೇನು?
ಮಂಡ್ಯ, ಸೆಪ್ಟೆಂಬರ್ 22: ಕಾವೇರಿ ನೀರಿನ ಕುರಿತು ಮಂಡ್ಯ ಹಾಗೂ ಸುತ್ತಮುತ್ತಲಿನ ರೈತರು ನಿರಂತರವಾಗಿ ಪ್ರತಿಭಟನೆಯನ್ನ ನಡೆಸುತ್ತಿದೆ. ಇತ್ತ ಕಾವೇರಿ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಾಜೀನಾಮೆ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಹಾಲಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯಿಸಿದ್ದಾರೆ.
ಹೌದು, ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ರಾಜೀನಾಮೆ ನೀಡುವ ಬಗ್ಗೆ ಹಿಂಜರಿಯಲ್ಲ. ಮಂಡ್ಯದ ಜನತೆಗೆ ನನಗೆ ಮತ ಹಾಕಿದ್ದಾರೆ, ನನಗೆ ಜವಾಬ್ದಾರಿ ನೀಡಿದ್ದಾರೆ. ನನಗೆ ಅಧಿಕಾರ ಎಂದಿಗೂ ಶಾಶ್ವತವಲ್ಲ, ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡಲು ಯೋಚನೆ ಮಾಡುವುದಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ನನ್ನ ಬಗ್ಗೆ ರಾಜ್ಯ ಸರ್ಕಾರ ಸುಮ್ಮನೆ ದೂರುವುದು ಸರಿಯಲ್ಲ. ರಾಜಕೀಯಕ್ಕಾಗಿ ಟೀಕೆ ಯಾರು ಬೇಕಾದರೂ ಮಾಡಬಹುದು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಕೆ ಅವಕಾಶ ಸಿಕ್ಕಿಲ್ಲ, ಯಾಕೆ ಎಂದು ನನಗೂ ಗೊತ್ತಿಲ್ಲ, ಸಮಯ ಸಿಕ್ಕರೆ ಮಂಡ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಈ ಹಿಂದೆ ಕಾವೇರಿ ವಿಚಾರವಾಗಿ ಅಂಬರೀಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗ ನಾನು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇನೆ. ರೈತರು, ಜನರು ಏನು ಹೇಳುತ್ತಾರೆ ಕೇಳುತ್ತೇನೆ. ಮಳೆ ಬಾರದೇ ಇದ್ದರ ಕುಡಿಯುವ ನೀರಿಗೆ ಏನು ಮಾಡಬೇಕೊ ಗೊತ್ತಿಲ್ಲ. ಸರ್ಕಾರದ ಪರ ನಿಲ್ಲಲು ನಾನು ರೆಡಿ ಇದ್ದೇನೆ. ನಾನು ಸಂಸದೆಯಾಗಿ ಏನು ಮಾಡಬೇಕೋ ಮಾಡುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರೀ ಉತ್ತಮ ಮಳೆಯಾಗಿಲ್ಲ. ಈಗಾಗಲೇ ರಾಜ್ಯ ಸರ್ಕಾರ 194 ಬರಪೀಡಿತ ತಾಲೂಕುಗಳನ್ನ ಘೋಷಿಸಿದೆ, ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಬರಿಸಬೇಕಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲೂ ತೀವ್ರ ಬರ ಇದೆ. ಈಗ ಸುಮಲತಾ ರಾಜೀನಾಮೆ ವಿಚಾರ ಮಾತನಾಡುವ ಸಮಯವಲ್ಲ. ಜನರು ಮುಗ್ದರಿದ್ದಾರೆ. ಮಾಹಿತಿ ಇರುವುದಿಲ್ಲ. ಸದ್ಯ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವ ಪರಿಸ್ಥಿತಿ ಇಲ್ಲ. ಕೇಂದ್ರದ ಬಳಿ ಕೀ ಇದ್ದಿದ್ದರೆ ಈ ಹಿಂದೆ ಅಂಬರೀಶ್ ಏಕೆ ರಾಜೀನಾಮೆ ಕೊಡುತ್ತಿದ್ದರು ಎಂದು ಪ್ರಶ್ನಿಸಿದರು.
ನಾವು ಪಾಕಿಸ್ತಾನದ ಜೊತೆ ಕೂಡ ಮಾತನಾಡಿದ್ದೇವೆ. ಅಂದ ಮೇಲೆ ತಮಿಳುನಾಡು ಜೊತೆ ಏಕೆ ಮಾತನಾಡಲು ಸಾಧ್ಯವಿಲ್ಲ. ಕಾವೇರಿ ನೀರು ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ಕುಳಿತು ಮಾತುಕತೆ ನಡೆಸಬೇಕು. ಇಲ್ಲಿನ ಪರಿಸ್ಥಿತಿಯನ್ನು ನಾವು ತಿಳಿಸಿಕೊಡಬೇಕು. ನೀರು ಕೊಡಲು ಆಗುವುದಿಲ್ಲ ಎಂಬುದಕ್ಕಿಂತ ನಮ್ಮ ಪರಿಸ್ಥಿತಿ ಏನಿದೆ ಎಂದು ನೋಡಿ ಎಂದು ತಿಳಿಸಬೇಕು. ನಮ್ಮಲ್ಲೂ ತಮಿಳಿಗರು ಇದ್ದಾರೆ. ಅವರಿಗೆ ಕೊಡುವುದಕ್ಕೂ ನೀರು ಬೇಡವೇ ಎಂದು ಪ್ರಶ್ನಿಸಿದರು.
ಇನ್ನೂ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯದ ಪರವಾಗಿ ಸಮರ್ಥ ವಾದ ಮಂಡಿಸುವಲ್ಲಿ ಆಗುತ್ತಿರುವ ಲೋಪವೇ ಪ್ರತಿ ಬಾರಿ ರಾಜ್ಯಕ್ಕೆ ಹಿನ್ನಡೆಯಾಗಲು ಕಾರಣ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಪ್ರತಿ ಬಾರಿಯೂ ರಾಜ್ಯದ ವಿರುದ್ಧವಾಗಿಯೇ ತೀರ್ಪುಗಳು ಬರುತ್ತಿವೆ. ನಮ್ಮ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನೀರಿನ ವಾಸ್ತವ ಚಿತ್ರಣವನ್ನು ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಮುಂದಿಡುತ್ತಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು.












Click it and Unblock the Notifications