ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!
ಮಂಡ್ಯ, ಅ.8 : ಮಂಡ್ಯದ ಕಬ್ಬನಹಳ್ಳಿ ಗ್ರಾಮದ ಜನರು ರಾಮಣ್ಣ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಗ್ರಾಮಸ್ಥರ ಒಡನಾಡಿಯಾಗಿದ್ದ ರಾಮಣ್ಣ ಮೃತಪಟ್ಟು 11 ದಿನ ಕಳೆದಿದೆ. ಮಂಗಳವಾರ ರಾಮಣ್ಣ ತಿಥಿಯನ್ನು ಗ್ರಾಮಸ್ಥರು ಮಾಡಿದ್ದು, ಬಾಡೂಟ ಏರ್ಪಡಿಸಿದ್ದರು.
ಅಂದಹಾಗೆ ರಾಮಣ್ಣ ಎಂಬುದು ಕಬ್ಬನಹಳ್ಳಿಯ ಬೀದಿನಾಯಿ. 2007 ಮತ್ತು 2012 ರಲ್ಲಿ ನಡೆದ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಮಣ್ಣ ಸೆ.27ರಂದು ಸಾವನ್ನಪ್ಪಿತ್ತು. ಮಂಗಳವಾರ 11ನೇ ದಿನವಾದ್ದರಿಂದ ಅದರ ಮಾಲೀಕ ಜಯರಾಮ್ ತಲೆ ಬೋಳಿಸಿಕೊಂಡು ಪುಣ್ಯತಿಥಿ ಮಾಡಿದರು. ನಂತರ ಗ್ರಾಮಸ್ಥರಿಗೆ ಬಾಡೂಟ ಹಾಕಿದರು.

ಕಾವೇರಿ ಕೇಳಿದರೆ ಕಚ್ಚುವೆ : ರಾಮಣ್ಣ ಎಂಬ ಈ ನಾಯಿ ಸುಮಾರು 10 ವರ್ಷಗಳಿಂದ ಕಬ್ಬನಹಳ್ಳಿ ಗ್ರಾಮದಲ್ಲಿತ್ತು. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ರಾಮಣ್ಣ ಅದರಲ್ಲಿ ಪಾಲ್ಗೊಂಡಿತ್ತು. ನಾಯಿ ಕುತ್ತಿಗೆಗೆ 'ಕಾವೇರಿ ನೀರು ಕೇಳಿದರೆ ಕಚ್ಚುವೆ' ಎಂಬ ಫಲಕ ತೂಗಿಹಾಕಿ ಅದನ್ನು ಪ್ರತಿಭಟನೆಗೆ ಸೇರಿಸಿಕೊಳ್ಳಲಾಗಿತ್ತು. [ಭೈರ, ಕೆಂಚಿ ಹುಡುಕಲು ಒಂದು ಲಕ್ಷ ಖರ್ಚು!]
ರಾಮಣ್ಣನ ಪುಣ್ಯತಿಥಿಗೆ ಗ್ರಾಮಸ್ಥರನ್ನು ಆಹ್ವಾನಿಸಲು ಆಹ್ವಾನ ಪತ್ರಿಕೆ ನೀಡಲಾಗಿತ್ತು. ಗ್ರಾಮದಲ್ಲಿ ಹಲವಾರು ಕಡೆ ರಾಮಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಿತ್ರವುಳ್ಳ ಬ್ಯಾನರ್, ಫ್ಲೆಕ್ಸ್ ಹಾಕಲಾಗಿದ್ದು, ನಾಯಿಯ ಕುರಿತ ತಮ್ಮ ಅಭಿಮಾನವನ್ನು ಗ್ರಾಮಸ್ಥರು ಪ್ರದರ್ಶಿಸಿದ್ದಾರೆ. [ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ!]
ಕಬ್ಬನಹಳ್ಳಿ ಗ್ರಾಮಸ್ಥರ ಮೆಚ್ಚಿನ ನಾಯಿಯಾದ ರಾಮಣ್ಣನ ಯೋಗಕ್ಷೇಮವನ್ನು ಜಯರಾಮ್ ನೋಡಿಕೊಳ್ಳುತ್ತಿದ್ದರು. ತರಕಾರಿ ವ್ಯಾಪಾರಿಯಾಗಿರುವ ಜಯರಾಮ್ ಮನೆ ಬಳಿ ಸುಮಾರು 10 ವರ್ಷಗಳಿಂದ ರಾಮಣ್ಣ ವಾಸಿಸುತ್ತಿತ್ತು.












Click it and Unblock the Notifications