ಮಂಡ್ಯ ರೈತರಿಗೆ ನೀಡಿದ ಚೆಕ್ ವಿವಾದ : ಯಾರು, ಏನು ಹೇಳಿದರು?
ಮಂಡ್ಯ, ಅಕ್ಟೋಬರ್ 13 : ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿದಾಗ ರೈತ ಕುಟುಂಬಗಳಿಗೆ ನೀಡಿದ ಚೆಕ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಕೆಪಿಸಿಸಿಯಿಂದ ಸಣಬದಕೊಪ್ಪಲು ಹಾಗೂ ಕೊತ್ತತ್ತಿ ಗ್ರಾಮದ ಮೃತ ರೈತರ ಕುಟುಂಬಕ್ಕೆ ನೀಡಿ ಮತ್ತೆ ವಾಪಸ್ ಪಡೆದ ಚೆಕ್ ಇನ್ನೂ ಸಂತ್ರಸ್ತ ಕುಟುಂಬಕ್ಕೆ ತಲುಪಿಲ್ಲ.
ರಾಹುಲ್ ಗಾಂಧಿ ಅವರು ಪಾಂಡವಪುರ ತಾಲೂಕಿನ ಸಣಬದಕೊಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ ಮನೆಗೆ ಭೇಟಿ ನೀಡಿದಾಗ ಕೆಪಿಸಿಸಿ ವತಿಯಿಂದ ರೈತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ನಂತರ ಚೆಕ್ ಕ್ರಾಸ್ ಮಾಡಿಲ್ಲವೆಂಬ ಕಾರಣದಿಂದ ವಾಪಸ್ ಪಡೆಯಲಾಗಿತ್ತು. [ಮಂಡ್ಯಕ್ಕೆ ರಾಹುಲ್ ಭೇಟಿ : ಚಿತ್ರಗಳು]
ಆದರೆ, ರಾಹುಲ್ ನವದೆಹಲಿಗೆ ಮರಳಿ ಎರಡು ದಿನಗಳು ಕಳೆದರೂ ಕೆಪಿಸಿಸಿ ವಾಪಸ್ ಪಡೆದ ಚೆಕ್ ಇನ್ನೂ ರೈತರ ಕುಟುಂಬಕ್ಕೆ ತಲುಪಿಲ್ಲ. ಕ್ರಾಸ್ ಮಾಡಿಲ್ಲವೆಂಬ ಕಾರಣದಿಂದ ವಾಪಸ್ ಪಡೆದ ಚೆಕ್ ಅನ್ನು ಮರಳಿ ರೈತ ಕುಟುಂಬಕ್ಕೆ ನೀಡಲು ಎರಡು ದಿನಗಳು ಬೇಕೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. [ಅಂಬಿ ವಿರುದ್ಧ ಫಿಟ್ಟಿಂಗ್ ಇಟ್ಟಿದ್ದು ರಮ್ಯಾ]
ಅತ್ತ ಸಂಸದೆ ರಮ್ಯಾ ಅವರು 'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದ ವೇಳೆ ರಮ್ಯಾ ಅವರು ಯಾವುದೇ ರಾಜಕಾರಣ ಮಾಡಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಂಬರೀಶ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು ರಮ್ಯಾ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಚೆಕ್ ವಿವಾದದ ಬಗ್ಗೆ ಯಾರು ಏನು ಹೇಳಿದರು? ಚಿತ್ರಗಳಲ್ಲಿ...
ಮಂಡ್ಯ ಸಂಸದ ಪುಟ್ಟರಾಜು ಗರಂ
ಚೆಕ್ ವಿತರಣೆಯಲ್ಲಿ ವಿಳಂಬವಾಗಿರುವುದಕ್ಕೆ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ಅಸಮಾಧಾನ ವ್ಯಕ್ತವಡಿಸಿದ್ದಾರೆ. 'ಕಾಂಗ್ರೆಸ್ ಪಕ್ಷ ಒಂದು ಕೈನಲ್ಲಿ ಚೆಕ್ ಕೊಟ್ಟು ಮತ್ತೊಂದು ಕೈಯ್ಯಲ್ಲಿ ವಾಪಸ್ ಪಡೆದಿದೆ. 1 ಲಕ್ಷ ರೂ. ಪರಿಹಾರವನ್ನು ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡಿ, ರೈತರ ಕುಟುಂಬಕ್ಕೆ ನೀಡಲಾಗದವರು ರೈತರ ಬಗ್ಗೆ ಎಂತಹ ಕಾಳಜಿ ತೋರಿಸುವರು?' ಎಂದು ಅವರು ಪ್ರಶ್ನೆ ಮಾಡಿದರು.
'ಯಾವುದೇ ರಾಜಕೀಯ ನಡೆದಿಲ್ಲ'
ರೈತನಿಗೆ ನೀಡಬೇಕಾದ ಚೆಕ್ ಅನ್ನು ಅಂಬರೀಶ್ ಅವರು ಸಂಸದ ಪುಟ್ಟರಾಜು ಅವರಿಗೆ ನೀಡಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಅಂಬರೀಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಷಯವನ್ನು ಮಾಧ್ಯಮಗಳಿಗೆ ರಮ್ಯಾ ತಿಳಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು, 'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದ ವೇಳೆ ರಮ್ಯಾ ಅವರು ಯಾವುದೇ ರಾಜಕಾರಣ ಮಾಡಿಲ್ಲ' ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ.
'ವಿವರಣೆ ಕೊಡಲು ಭೇಟಿ ಮಾಡಿದ್ದೆ'
ಮಂಡ್ಯದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡಿದ್ದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು 'ಇದೊಂದು ಸೌಹಾರ್ದ ಭೇಟಿಯಷ್ಟೇ. ಮಂಡ್ಯದ ಮೃತ ರೈತ ಕುಟುಂಬಕ್ಕೆ ಚೆಕ್ ನೀಡುವ ವೇಳೆ ಉಂಟಾಗಿದ್ದ ಗೊಂದಲದ ಬಗ್ಗೆ ಹರಿಪ್ರಸಾದ್ ಅವರು ಮಾಹಿತಿ ಕೇಳಿದ್ದರು. ಆದ್ದರಿಂದ ಭೇಟಿ ಮಾಡಿದ್ದೇನೆ' ಎಂದು ಹೇಳಿದ್ದಾರೆ.
'ಎರಡು ದಿನದಲ್ಲಿ ಪರಿಹಾರ ವಿತರಣೆ'
'ಚೆಕ್ ಕ್ರಾಸ್ ಮಾಡಿಲ್ಲವೆಂಬ ಕಾರಣಕ್ಕೆ ಒಂದು ಚೆಕ್ ವಾಪಸ್ ಪಡೆಯಲಾಗಿದೆ. ಕೊತ್ತತ್ತಿ ಗ್ರಾಮಕ್ಕೆ ಭೇಟಿ ನೀಡಲಾಗದ ಕಾರಣ ಆ ಪರಿಹಾರದ ಚೆಕ್ ಅನ್ನು ಕುಟುಂಬಕ್ಕೆ ನೀಡಲಾಗಿಲ್ಲ. ಇನ್ನೆರಡು ದಿನದಲ್ಲಿ ಪರಿಹಾರದ ಚೆಕ್ ಗಳನ್ನು ವಿತರಣೆ ಮಾಡಲಾಗುತ್ತದೆ' ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರು ಹೇಳಿದ್ದಾರೆ.
'ಚೆಕ್ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ'
ಮಂಡ್ಯದ ಕಾಂಗ್ರೆಸ್ ಮುಖಂಡ ಬೇಲೂರು ಸೋಮಶೇಖರ್ ಅವರು ಚೆಕ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಚೆಕ್ನಲ್ಲಿ ಚಿಕ್ಕ ದೋಷವಿದ್ದ ಕಾರಣ ವಾಪಸ್ ಪಡೆಯಲಾಗಿದೆ. ಅದನ್ನು ಸರಿಪಡಿಸಲಾಗುತ್ತಿದ್ದು, ಎರಡು ದಿನದಲ್ಲಿ ರೈತ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗುತ್ತದೆ' ಎಂದು ಹೇಳಿದ್ದಾರೆ.