ಮಂಡ್ಯ ಕಾಂಗ್ರೆಸ್ ನಲ್ಲಿ ಮತ್ತೆ ಕದನ ಆರಂಭ
ಶನಿವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ನಡೆಯಲಿದೆ. ಇದಕ್ಕೆ ಮುಂಚಿತವಾಗಿ ಶುಕ್ರವಾರ ಮಂಡ್ಯ ಹೊರವಲಯದ ಅಮರಾವತಿ ಹೋಟೆಲ್ ನಲ್ಲಿ ವಸತಿ ಸಚಿವ ಅಂಬರೀಶ್ ಬೆಂಬಲಿಗರು ಸಭೆ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ.
ಅಂಬರೀಶ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ನಡುವಿನ ಕಾಳಗ ವಿಧಾನಸಭೆ ಚುನಾವಣೆದಿನದಿಂದಲೂ ನಡೆಯುತ್ತಿದೆ. ಸದ್ಯ ಇದು ವಿಕೋಪಕ್ಕೆ ಹೋಗಿದ್ದು, ಕೆಪಿಸಿಸಿಗೆ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವ ಕುರಿತು ಒತ್ತಡ ಹೇರಲು ಸಭೆ ನಡೆಸಲಾಗುತ್ತಿದೆ.
ಅಮರಾವತಿ ಚಂದ್ರಶೇಖರ್, ನಗರಸಭೆ ಅಧ್ಯಕ್ಷ ಸಿದ್ದರಾಜು, ಶಶಿಕುಮಾರ್, ಪಿ.ಸಿ.ಶಿವಾನಂದ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಿ.ಸಿ.ಆನಂದ್ ನೇತೃತ್ವದಲ್ಲಿ ಶುಕ್ರವಾರ ಅಂಬರೀಶ್ ಬೆಂಬಲಿಗರ ಸಭೆ ನಡೆಯುತ್ತಿದೆ. ಆತ್ಮಾನಂದ ಅವರನ್ನು ಬದಲಾವಣೆ ಮಾಡಬೇಕು ಎಂಬುದು ಸಭೆಯ ಆಗ್ರಹವಾಗಿದೆ.
ಲೋಕಸಭೆ ಉಪಚುನಾವಣೆಯ ಸಂದರ್ಭದಲ್ಲಿಯೇ ಅಂಬರೀಶ್ ಮತ್ತು ಆತ್ಮಾನಂದ ಬಣದ ನಡುವೆ ಘರ್ಷಣೆ ನಡೆದಿತ್ತು. ಆಗ ಮಧ್ಯ ಪ್ರವೇಶಿಸಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸಿ ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡುವ ಭರವಸೆ ನೀಡಿದ್ದರು.
ಸದ್ಯ ಶನಿವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ ನಡೆಯಲಿದೆ. ಸಭೆಯಲ್ಲಿ ಮಂಡ್ಯದ ಜಿಲ್ಲಾಧ್ಯಕ್ಷರ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಒತ್ತಡ ಹೇರುವುದಕ್ಕೆ ಶುಕ್ರವಾರ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಈಗಾಗಲೇ ಆತ್ಮಾನಂದ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ಕೆಪಿಸಿಸಿ ಅಂಗೀಕರಿಸಿಲ್ಲ. ಇತ್ತೀಚೆಗೆ ಸೋನಿಯಾ ಗಾಂಧಿ ಮಂಡ್ಯಕ್ಕೆ ಆಗಮಿಸುವ ಕೆಲವು ದಿನಗಳ ಮುಂಚೆ ಸಹ ಎರಡೂ ಬಣಗಳ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮುಂದೆಯೇ ಬಡಿದಾಡಿಕೊಂಡಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆರಂಭವಾದ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿನ ಭಿನ್ನಮತದ ಕಿಚ್ಚು ಮತ್ತಷ್ಟು ಹೆಚ್ಚಾಗುತ್ತಲೇ ಇದೆ.