ಬಿಜೆಪಿ ಸರ್ಕಾರದ ಅವಧಿಯಲ್ಲಿ 5900 ಕೋಟಿ ಸಾಲದ ಹೊರೆ ನಮ್ಮ ತಲೆ ಮೇಲೆ : ರಾಮಲಿಂಗಾರೆಡ್ಡಿ
ಬೆಂಗಳೂರು, ಜೂನ್ 01: ಬಿಜೆಪಿ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ ರೂ.5900 ಕೋಟಿ ಸಾಲ ಮಾಡಿ ಆ ಹೊರೆಯನ್ನು ನಮ್ಮ ತಲೆ ಮೇಲೆ ಹೊರೆಸಿ ಹೋಗಿದ್ದಾರೆ. ಶಾಂತಿನಗರ ಟಿ.ಟಿ.ಎಂ.ಸಿಯನ್ನು ಸಾಲ ಪಡೆಯಲು ಅಡವಿಟ್ಟಿದ್ದ ವಿಷಯ ಜಗಜಾಹ್ಹೀರಾವಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಸಾರಿಗೆ ಸಂಸ್ಥೆಗಳಲ್ಲಿ 14000 ಹುದ್ದೆಗಳು ಖಾಲಿಯಿದ್ದರೂ, ಬಿ.ಜೆ.ಪಿ ಆಡಳಿತದ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಮಾಡದೆ, ನಮ್ಮ ಅವಧಿಯಲ್ಲಿ ಹೊರಡಿಸಲಾಗಿದ್ದ ನೇಮಕಾತಿ ಪ್ರಕಟಣೆಗಳಿಗೂ ತಡೆತಂದಿರುವುದು ನಿಮ್ಮ ಗರಿಮೆ ಮತ್ತು ಹಿರಿಮೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಕಳೆದ ಒಂದು ವರುಷದ ಅವಧಿಯಲ್ಲಿ 500 ಕ್ಕೂ ಹೆಚ್ಚು ಅನುಕಂಪ ಆಧಾರದ ಮೇಲೆ ನೇಮಕಾತಿ ಪತ್ರವನ್ನು ಸಿಬ್ಬಂದಿಗಳ ಅವಲಂಬಿತರಿಗೆ ನೀಡಲಾಗಿದೆ.

ನಮ್ಮ ಸರ್ಕಾರ ಬಂದೊಡನೆಯೇ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು ಈಗಾಗಲೇ 1650 ಚಾಲಕ/ ನಿರ್ವಾಹಕರು ಹಾಗೂ 250 ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭರದಿಂದ ಸಾಗಿದೆ. ಯುವಕರಿಗೆ ನಿರುದ್ಯೋಗ ಭಾಗ್ಯ ಕರುಣಿಸಿ, ಸಾರಿಗೆ ಸಂಸ್ಥೆಗಳನ್ನು ಅವನತಿಯತ್ತ ಕೊಂಡ್ಯೊಯ್ದ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲದಿರುವುದು ವಿಷಾದನೀಯ ಎಂದು ಹೇಳಿದರು.
ಕೇಂದ್ರ ಸರ್ಕಾರದಲ್ಲಿಯೇ ಇದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೀತಿ ನಿಯಮಗಳ ಬಗ್ಗೆಯೇ ಅರಿವಿಲ್ಲದೆ ಮಾತನಾಡುತ್ತಿರುವ ಪ್ರಹ್ಲಾದ್ ಜೋಶಿ ಅವರೇ, ರಾಜ್ಯದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಬಿ.ಜೆ.ಪಿ ಯ ರಾಜ್ಯಧ್ಯಕ್ಷರಾದ ವಿಜಯೇಂದ್ರ ಅವರುಗಳೇ ನಿಜಕ್ಕೂ ನೀವುಗಳು ತಮ್ಮ ಬುದ್ಧಿವಂತಿಕೆಯನ್ನು ಅಡವಿಟ್ಟಿರುವ ಹಾಗೆ ಕಾಣಿಸುತ್ತಿರುವುದು ಸಾಬೀತಾಗಿದೆ.
ಯಾವುದೇ ಒಂದು ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನೇ ಪಡೆಯದೆ, ಟ್ವೀಟ್ ಮಾಡುತ್ತೀರೋ ನೀವುಗಳು ಜನರ ಮುಂದೆ ತಮಗೆ ಅರಿವಿಲ್ಲ ಎಂಬುದನ್ನು ಪದೇ ಪದೇ ತೋರಿಸಿಕೊಳ್ಳುವ ಖಯಾಲಿಗೆ ಬಿದ್ದಂತಿದೆ. ನಾವು ಸಾರ್ವಜನಿಕರಿಗೆ ಸರಿಯಾದ ಮತ್ತು ಸತ್ಯವನ್ನು ತಿಳಿಸುವ ಬದ್ಧತೆ ಮತ್ತು ಜವಾಬ್ದಾರಿಯನ್ನು ಹೊಂದಿದ್ದೇವೆ . ಆದ್ದರಿಂದ ತಮ್ಮ ಸಾವಿರ ಸುಳ್ಳಿನ ಟ್ಟೀಟ್ ಗಳಿಗೂ ಕೂಡ ಉತ್ತರಿಸುವ ಎದೆಗಾರಿಕೆ ನಮ್ಮಲ್ಲಿದೆ. ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯು ಕೇಂದ್ರ ಸರ್ಕಾರದ ನೀತಿ ಯೋಜನೆಯಂತೆ ಜಾರಿಯಾಗಿದೆ.
ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿಸುವಂತಿಲ್ಲ, ಖಾಸಗಿ ಕಂಪನಿಯವರು ಮಾಲೀಕತ್ವ ಹೊಂದಿರುತ್ತಾರೆ, ಅವರಿಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ನೇರವಾಗಿ ನೀಡುತ್ತದೆ, ಚಾಲಕರನ್ನು ನಿಯೋಜಿಸುವ ಕಾರ್ಯವು ಖಾಸಗಿ ಅವರಿಗೆ ನೀಡಲಾಗಿದೆ.
ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್ಸುಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು, ಈ ವಿಷಯವನ್ನು ಹತ್ತು ಹಲವಾರು ನಾನು ಸ್ಪಷ್ಟಪಡಿಸಿದ್ದೇನೆ. ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ, ಪ್ರಹ್ಲಾದ್ ಜೋಷಿ ಅವರಿಂಗಿಂತ ಸಮರ್ಥವಾಗಿ ಉತ್ತರಿಸಲು ಯಾರಿಂದ ಸಾಧ್ಯ?? ಎಂದು ಪ್ರಶ್ನಿಸಿದ್ದಾರೆ.
ಬರೀ ಭಾಷಣಕ್ಕೆ ಸೀಮಿತವಾಗದೆ, ಕೋಟಿ ಕೋಟಿ ಉದ್ಯೋಗ ಕರುಣಿಸುವ ಸುಳ್ಳು ಭರವಸೆ ನೀಡಿ, ಯುವಜನರನ್ನು ಶೋಷಿಸುವ ಕಾರ್ಯ ಮಾಡದೇ, ನುಡಿದಂತೆ ನಡೆಯುತ್ತಿದ್ದೇವೆ. ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಮಾಡದೇ , ಡಕೋಟ ಬಸ್ಸುಗಳಲ್ಲೇ ಕಾರ್ಯಾಚರಣೆ ಮಾಡಿ , ತಮ್ಮ ಅವಧಿಯ ಕೊಳೆ ತೊಳೆಯುವ ಕಾರ್ಯವೂ ಕೂಡ ಭರದಿಂದ ಸಾಗಿದೆ. ತಮ್ಮ ಈ ಎಲ್ಲಾ ಸುಳ್ಳು, ಕಪೋಲ ಕಲ್ಪಿತ, ಆಧಾರರಹಿತ ಟ್ಟೀಟ್ ಗಳ ಸರಮಾಲೆಗೆ ಶೀಘ್ರದಲ್ಲಿಯೇ ಮುಕ್ತಿ ಸಿಗುವ ಭರವಸೆ ನಮಗಿದೆ ಎಂದು ಹೇಳಿದರು.












Click it and Unblock the Notifications