'ಕನ್ನಡಕ್ಕೆ ಜೈ, ಕರ್ನಾಟಕಕ್ಕೆ ಸೇರಿಸಿ' ಎಂದು ಒತ್ತಾಯಿಸಿದ ಮಹಾರಾಷ್ಟ್ರ ವಾಸಿಗಳು
ಜತ್, ನವೆಂಬರ್ 28: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ ಮತ್ತೆ ತಾರಕಕ್ಕೆ ಏರಿದೆ.
ಹೆಚ್ಚಿನ ಕನ್ನಡಿಗರು ವಾಸವಿರುವ ಪ್ರದೇಶಗಳನ್ನು ಮಹಾರಾಷ್ಟ್ರ ಸರ್ಕಾರ ಕಡೆಗಣಿಸಿದೆ ಎಂದು ಮಹಾರಾಷ್ಟ್ರ ಕನ್ನಡಿಗರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಕನ್ನಡಿಗರು ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
'ಮಹಾರಾಷ್ಟ್ರ ಸರ್ಕಾರವು ಮೂಲಭೂತ ಸೌಕರ್ಯಗಳನ್ನು ಕಡೆಗಣಿಸಿದೆ. ನೀರು, ಉದ್ಯೋಗ, ರಸ್ತೆ, ಸಾರಿಗೆ, ಶಿಕ್ಷಣ ಹಾಗೂ ಆರೋಗ್ಯದಂತಹ ಸೌಕರ್ಯಗಳನ್ನು ಕನ್ನಡಿಗರಿಗೆ ನೀಡುತ್ತಿಲ್ಲ' ಎಂದು ಪ್ರತಿಭಟನಾಕಾರರ ಆಗ್ರವಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದ ತೀರ್ಪಿನ ನಂತರ ಚರ್ಚೆ: ಸಿಎಂ
ಜತ್ ತಾಲ್ಲೂಕಿನ ಸಿದ್ದಾಪುರದಲ್ಲಿ ಕನ್ನಡ ಪರ ಮುಖಂಡರು ಸಭೆ ನಡೆಸಿದ್ದಾರೆ. ಕನ್ನಡ ಧ್ವಜವನ್ನು ಹಿಡಿದು ಮೆರವಣಿಗೆ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿರುವ ಅವರು 'ಕರ್ನಾಟಕಕ್ಕೆ ಜಯವಾಗಲಿ' ಎಂಬ ಘೋಷವಾಕ್ಯ ಮೊಳಗಿಸಿದ್ದಾರೆ.
ಮಹಾ ಸರ್ಕಾರದಿಂದ ಕನ್ನಡಿಗರ ನಿರ್ಲಕ್ಷ್ಯ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ಹಾಗೂ ಅಂಕಲಗೂಡಾದ ನಲವತ್ತು ಗ್ರಾಮಗಳಲ್ಲಿ ಹೆಚ್ಚಾಗಿ ಕನ್ನಡಿಗರು ವಾಸವಾಗಿದ್ದಾರೆ. ಈ ಪ್ರದೇಶಗಳನ್ನು ಮಹಾರಾಷ್ಟ್ರ ಸರ್ಕಾರ ಕಡೆಗಣಿಸಿದೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.
'ಸರ್ಕಾರ ಹಲವು ದಶಕಗಳಿಂದ ಆಶ್ವಾಸನೆಯನ್ನು ನೀಡುತ್ತಲೇ ಬಂದಿದೆ. ಆದರೆ, ಈ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಪೂರೈಕೆ, ರಸ್ತೆ, ಉದ್ಯೋಗ, ನೀರಾವರಿಯಂತಹ ಮೂಲಭೂತ ಸೌಕರ್ಯಗಳನ್ನು ಮಹಾರಾಷ್ಟ್ರ ಸರ್ಕಾರ ಪೂರೈಸಿಲ್ಲ ಎಂಬ ಆರೋಪಗಳನ್ನು ಅಲ್ಲಿನ ಕನ್ನಡಿಗರು ಮಾಡಿದ್ದಾರೆ.
40 ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಲು ಸಿದ್ಧವೆಂದ ಬೊಮ್ಮಾಯಿ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸುಮಾರು ನಲವತ್ತು ಗ್ರಾಮಗಳಲ್ಲಿ ಹೆಚ್ಚಾಗಿ ಕನ್ನಡ ಭಾಷಿಗರು ವಾಸವಾಗಿದ್ದಾರೆ. ಅಂತಹ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದು ಎರಡು ರಾಜ್ಯಗಳ ನಡುವಿನ ವಿವಾದಕ್ಕೆ ಕಾರಣವಾಗಿತ್ತು. ಬೊಮ್ಮಾಯಿ ಹೇಳಿಕೆ ವಿರುದ್ಧ ಮಹಾರಾಷ್ಟ್ರದ ರಾಜಕೀಯ ನಾಯಕರು ವಾಗ್ದಾಳಿ ನಡೆಸಿದ್ದರು. ಬೊಮ್ಮಾಯಿಗೆ ದೆವ್ವ ಬಡಿದುಕೊಂಡಿದೆ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದರು. ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬೆಳಗಾವಿ, ಕಾರವಾರ ಸೇರಿದಂತೆ ಹಲವು ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದ್ದರು.
ಸಿಎಂ ಬೊಮ್ಮಾಯಿ ವಿರುದ್ಧ ಕ್ರಮಕ್ಕೆ ಆಗ್ರಹ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಟ್ ತಾಲೂಕಿನ 40 ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳಿಸುವ ಹೇಳಿಕೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದರು. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ಬೊಮ್ಮಾಯಿ ನೀಡಿದ್ದಾರೆ. ಅವರ ವಿರುದ್ಧ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಒತ್ತಾಯಿಸಿತ್ತು.
ದಶಕಗಳ ಹಿಂದೆಯೇ ಶುರವಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ
ಮಹಾರಾಷ್ಟ್ರ-ಕರ್ನಾಟಕ ನಡುವಿನ ಗಡಿ ವಿವಾದ 1960 ರಲ್ಲಿಯೇ ಆರಂಭವಾಗಿದೆ. ಬೆಳಗಾವಿ ಜಿಲ್ಲೆ ಮತ್ತು ಮರಾಠಿ ಭಾಷಿಗರ ಪ್ರಭಾವವಿರುವ 80 ಊರುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಅಲ್ಲಿನ ರಾಜಕೀಯ ಮುಖಂಡರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಹಲವು ಬಾರಿ ನ್ಯಾಯಾಂಗದಲ್ಲಿ ಸೋಲು ಅನುಭವಿಸಿದೆ. ಸುಪ್ರೀಂ ಕೋರ್ಟ್ನಲ್ಲಿರುವ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಬೆಳಗಾವಿ ವಿಚಾರವಾಗಿ ಎರಡೂ ರಾಜ್ಯಗಳಲ್ಲಿ ಹಲವು ಬಾರಿ ಸಂಘರ್ಷಗಳು ನಡೆದಿವೆ. ಗಲಭೆಗಳು ಸಂಭವಿಸಿವೆ.