ಉಘೇ ಉಘೇ ಜೈಕಾರದಲ್ಲಿ ಮಿಂದ ಮಲೆ ಮಹದೇಶ್ವರ
ಹನೂರು, ಅಕ್ಟೋಬರ್, 12 : ಮಹಾಲಯ ಅಮವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ಸನ್ನಿಧಿಗೆ ಸಾಗರೋಪಾದಿಯಲ್ಲಿ ಆಗಮಿಸಿದ ಭಕ್ತರು ಧಾರ್ಮಿಕ ವಿಧಿವಿಧಾನ ಪೂರೈಸುವುದರೊಂದಿಗೆ ಮಾದಪ್ಪನ ಕೃಪೆಗೆ ಪಾತ್ರರಾದರು.
ಮಹಾಲಯ ಜಾತ್ರೆಯ ಅಂಗವಾಗಿ ಸೋಮವಾರ ಮಾದಪ್ಪನಿಗೆ ಬೆಳಗಿನ ಜಾವ 3 ರಿಂದ 6 ಗಂಟೆಯವರಗೆ ಎಣ್ಣೆ ಮಜ್ಜನ ಸೇವೆ, ಪಂಚಾಭಿಷೇಕ, ಹಾಲಿನ ಅಭಿಷೇಕ ಹಾಗೂ ಬಿಲ್ವಾರ್ಚನೆ ಪೂಜೆಗಳು ಜರುಗಿದವು. ಲಕ್ಷಾಂತರ ಭಕ್ತರು ಅಂತರ ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದರು.[ಮಲೆ ಮಹದೇಶ್ವರಬೆಟ್ಟದ ಅಭಿವೃದ್ಧಿ ಬಂತು ಪ್ರಾಧಿಕಾರ]

ಜಾತ್ರೆ ಪ್ರಯುಕ್ತ ದೇವಸ್ದಾನವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಹರಕೆಯ ರೂಪದಲ್ಲಿ ಹುಲಿವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ಉತ್ಸವವನ್ನು ನೆರವೇರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದರ ಮೂಲಕ ಉತ್ಸವವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಹಾಗೂ ಸಾರ್ವಜನಿಕರು ತಾವು ಮೊದಲು ಬೆಳೆದಿದ್ದ ಧಾನ್ಯಗಳನ್ನು ಹಣ್ಣು ಜವನೆ, ಚಿಲ್ಲರೆ ಹಣವನ್ನು ಹುಲಿ, ಬಸವ, ರುದ್ರಾಕ್ಷಿ ಉತ್ಸವ ವಾಹನಗಳ ಮೇಲೆ ಎಸೆದು ಭಕ್ತಿಯನ್ನು ಸಮರ್ಪಿಸಿದರು.
ಮಹದೇವ ಬೆಟ್ಟದಲ್ಲಿ ಚಿನ್ನದ ರಥೋತ್ಸವವು ಅದ್ದೂರಿಯಾಗಿ ಜರುಗಿತು. ಹರಕೆ ತೀರಿಸಿಕೊಳ್ಳುವ ಭಕ್ತರು ಕಳಸ ಹಿಡಿದು ದೇವಸ್ಥಾನವನ್ನು ಪ್ರದಕ್ಷ್ಷಿಣೆ ಹಾಕಿ ಉಘೇ ಉಘೇ ಮಾದಪ್ಪ ಎಂದು ಜೈಕಾರ ಕೂಗಿದರು. ಸತ್ತಿಗೆ, ಸೂರಿಪಾನಿ, ನಂದಿ, ಕಂಬ, ಮಂಗಳ ವಾದ್ಯಗಳ ಜತೆ ಸಾಗಿದ ಚಿನ್ನದ ತೇರಿಗೆ ವಿದ್ಯುದೀಪ ಅಳವಡಿಸಿ ಕಣ್ಮನ ಸೆಳೆಯುವಂತೆ ಮಾಡಲಾಗಿತ್ತು.












Click it and Unblock the Notifications