ಮಹದಾಯಿ ತೀರ್ಪು : ಕರ್ನಾಟಕಕ್ಕೆ ನಿಜಕ್ಕೂ ಸಿಗಬೇಕಾದದ್ದು ಸಿಕ್ಕಿದೆಯಾ?
Recommended Video

ಬೆಂಗಳೂರು, ಆಗಸ್ಟ್ 14 : ಮಹದಾಯಿ ನದಿ ನೀರು ನ್ಯಾಯಾಧೀಕರಣ, 50 ವರ್ಷಗಳ ಹೋರಾಟದ ನಂತರ, ಹೊರಡಿಸಿರುವ ಐತಿಹಾಸಿಕ ಅಂತಿಮ ತೀರ್ಪು, ಉತ್ತರ ಕರ್ನಾಟಕದ ಜನತೆಗೆ ಮರಳುಗಾಡಿನಲ್ಲಿ ಓಯಾಸಿಸ್ ಕಂಡಂತಾಗಿದೆ. ಈ ತೀರ್ಪಿಗಾಗಿ ಕಾದು ಕುಳಿತಿದ್ದವರಿಗೆಲ್ಲ ಅಮೃತ ಸಿಂಚನವಾಗಿದೆ.
ಬರದ ನಾಡಿನಲ್ಲಿ ನಲ್ಲಿಯಲ್ಲಿ ಬುಸ್ಸನೆ ಬರುವ ಗಾಳಿಯನ್ನು ತಳ್ಳಿಕೊಂಡು ನೀರು ಬಂದರೆ ಹೇಗೆ ಖುಷಿಯಾಗುವುದೋ ಅಂಥದೇ ಖುಷಿಯನ್ನು ಅಲ್ಲಿನ ಜನತೆ ಅನುಭವಿಸಿದ್ದಾರೆ. ಅವರ ಅವಿರತ ಹೋರಾಟ, ಅನುಭವಿಸಿರುವ ನೋವು, ರೈತರ ಸಾವಿನ ಸಂಕಟ, ಗುದ್ದಾಟ ಬಡಿದಾಟ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ಆದರೂ, ಇದು ನಿಜಕ್ಕೂ ಕರ್ನಾಟಕಕ್ಕೆ ಸಂದ ಜಯವಾ? ಉತ್ತರ ಕರ್ನಾಟಕದ ಎಲ್ಲ ಜನರೂ ಈ ತೀರ್ಪಿನಿಂದ ಸಂತೋಷವಾಗಿದ್ದಾರಾ? ಬೆಳಗಾವಿ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡದ ನೀರಿನ ದಾಹವನ್ನು ತಣಿಸುವ ತೀರ್ಪು ಇದಾಗಿದೆಯಾ? ಎಲ್ಲರ ಬಾಯಿಗೆ ಪೇಡೆ ಬಿದ್ದಿದೆಯಾ?
12 ಸಂಪುಟಗಳಷ್ಟಿರುವ ನ್ಯಾಯಾಧೀಕರಣದ ತೀರ್ಪನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ, ತಜ್ಞರೊಂದಿಗೆ ಕೂಲಂಕಷವಾಗಿ ಚರ್ಚಿಸಿದ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕಕ್ಕೆ ನ್ಯಾಯವಾಗಿ ಇನ್ನೂ ಹೆಚ್ಚಿನ ನೀರು ಸಿಗಬೇಕಾಗಿತ್ತು ಎಂದು ಕರ್ನಾಟಕವನ್ನು ಪ್ರತಿನಿಧಿಸಿದ್ದ ಮೋಹನ್ ಕಾತರಕಿ ಅವರು ಹೇಳಿದ್ದು, ಮುಂದಿನ ಹೋರಾಟದ ರೂಪುರೇಷೆಗಳನ್ನು ರಾಜ್ಯದ ನಾಯಕರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಈಗ ಬಂದಿರುವ ತೀರ್ಪಿನ ಪ್ರಕಾರ, ಉತ್ತರ ಕರ್ನಾಟಕದ ಹೋರಾಟ ಮುಂದುವರಿಯಲಿದೆ.

ಕರ್ನಾಟಕಕ್ಕೆ ಒಟ್ಟಾರೆ ಸಿಕ್ಕಿದ್ದೆಷ್ಟು?
ಕರ್ನಾಟಕ ಕೇಳಿದ್ದೆಷ್ಟು, ರಾಜ್ಯಕ್ಕೆ ಸಿಕ್ಕಿದ್ದೆಷ್ಟು ನೋಡೋಣ ಬನ್ನಿ. ಒಟ್ಟಾರೆ ನೀರು ಲಭ್ಯವಿರುವುದು 188.06 ಟಿಎಂಸಿ ನೀರು. ಕಳಸಾ-ಬಂಡೂರಿ ನಾಲೆ ಯೋಜನೆಗೆ 7.56 ಟಿಎಂಸಿ ನೀರು ಸೇರಿದಂತೆ ರಾಜ್ಯ ಆಗ್ರಹಿಸಿದ್ದು ನೀರಾವರಿ ಮತ್ತು ಕುಡಿಯುವ ನೀರು ಸೇರಿದಂತೆ 36.558 ಟಿಎಂಸಿ ನೀರು. ಆದರೆ, ಕರ್ನಾಟಕಕ್ಕೆ ಸಿಕ್ಕಿದ್ದು 13.42 ಟಿಎಂಸಿ ನೀರು ಮಾತ್ರ. ಇದರಲ್ಲಿ 8 ಟಿಎಂಸಿ ನೀರು ನೀರಾವರಿಗೆ ಉಪಯೋಗಿಸಬೇಕಾಗಿದ್ದರೆ, ಉಳಿದದ್ದು ಕುಡಿಯುವ ನೀರಿಗೆ ಬಳಕೆಯಾಗಬೇಕು. ಗೋವಾ 122.60 ಮತ್ತು ಮಹಾರಾಷ್ಟ್ರ 6.35 ಟಿಎಂಸಿ ನೀರು ಕೇಳಿದ್ದರೆ, ಸಿಕ್ಕಿದ್ದು ತಲಾ 24 ಮತ್ತು 1.30 ಟಿಎಂಸಿ ನೀರು. ಪಾಲಿಗೆ ಸಿಕ್ಕಿದ್ದು ಪಂಚಾಮೃತ.

ಕಳಸಾ ಬಂಡೂರಿಯಿಂದ ಮಲಪ್ರಭಾ ನದಿಗೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಢದಲ್ಲಿ ಉದ್ಭವಾಗುವ ಮಹದಾಯಿ ನದಿಯ ನೀರನ್ನು ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ತಿರುವುಗೊಳಿಸಲು ರಾಜ್ಯ ಬೇಡಿಕೆ ಇಟ್ಟಿತ್ತು. ಕಳಸಾ ಮೂಲಕ 3.56 ಟಿಎಂಸಿ ನೀರು ಮತ್ತು ಬಂಡೂರಿ ನಾಲೆಯ ಮೂಲಕ 4 ಟಿಎಂಸಿ ನೀರುನ್ನು ಹರಿಸಲು ಅವಕಾಶ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ ಸಿಕ್ಕಿದ್ದೆಷ್ಟು? ಕೇವಲ 3.90 ಟಿಎಂಸಿ ನೀರು ಮಾತ್ರ. ಕಳಸಾ ನಾಲೆಗೆ 1.18 ಮತ್ತು ಬಂಡೂರಿ ನಾಲೆಗೆ 2.72 ಟಿಎಂಸಿ ನೀರು. ಕಾಮಗಾರಿಯೂ ಪೂರ್ತಿಯಾಗದೆ ಹಾಗೆಯೇ ಕುಳಿತಿರುವ ಈ ನಾಲೆಗಳಿಗೆ ಅಷ್ಟಾದರೂ ನೀರು ಹರಿದು ಬರಲಿದೆಯಲ್ಲ?

ಬೆಳಗಾವಿ ಬರದ ಜಿಲ್ಲೆಗಳಿಗೆ ಹನಿಯೂ ಇಲ್ಲ
ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ ಮತ್ತು ಬೈಲಹೊಂಗಲ ಗ್ರಾಮಗಳ ಪಾಲಿಗೆ ಮಹದಾಯಿ ನೀರು ಗಗನ ಕುಸುಮವಾಗಲಿದೆ. ಮಹದಾಯಿ ನದಿಪಾತ್ರದಲ್ಲಿರುವ 7 ಟಿಎಂಸಿ ಹೆಚ್ಚು ನೀರನ್ನು ಬರದಿಂದ ಜರ್ಝರಿತವಾಗಿರುವ ಈ ಗ್ರಾಮಗಳ ನೀರಾವರಿಗೆ ಮತ್ತು ಕುಡಿಯುವ ನೀರಿಗೆಂದು ಹರಿಸಬೇಕೆಂದು ಕೇಳಿದ್ದಕ್ಕೆ ಒಂದೇ ಒಂದು ಹನಿಯೂ ಸಿಕ್ಕಿಲ್ಲ. ನೀರಾವರಿಗೆ 3 ಟಿಎಂಸಿ, ಕುಡಿಯುವ ನೀರಿಗೆ 2 ಟಿಎಂಸಿ ಮತ್ತು ಹೆಚ್ಚು ನೀರು ಲಭಿಸದ ಮಲಪ್ರಭಾ ಕಮಾಂಡ್ ಪ್ರದೇಶಕ್ಕೆ 2 ಟಿಎಂಸಿ ನೀರನ್ನು ಕೇಳಲಾಗಿತ್ತು. ಆದರೆ, ಈ ತೀರ್ಪಿನಿಂದಾಗಿ ಈ ಭಾಗದ ಜನತೆಗೆ ಭಾರೀ ನಿರಾಶೆಯಾಗಿದೆ.

ಕಾಳಿ ನದಿಗೆ ಹರಿಯದು ಮಹದಾಯಿ ನೀರು
ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಅಂಬಿಕಾನಗರದಲ್ಲಿ ವಿದ್ಯುತ್ ಉದ್ಪಾದನೆಗೆಂದು ಕಾಳಿ ನದಿಗೆ ಹರಿಸಲು 5.527 ಟಿಎಂಸಿ ನೀರನ್ನು ನೀಡಬೇಕೆಂದು ಕರ್ನಾಟಕ ಮಹದಾಯಿ ನದಿ ನೀರು ನ್ಯಾಯಾಧೀಕರಣಕ್ಕೆ ಆಗ್ರಹಿಸಿತ್ತು. ಇಲ್ಲಿಯೂ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ಮಹದಾಯಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟಿಗೆ 14.971 ಟಿಎಂಸಿ ನೀರು ಕೇಳಿತ್ತು. ಈ ಯೋಜನೆಗಾಗಿ ಕರ್ನಾಟಕ್ಕೆ ಸಿಕ್ಕಿದ್ದು 8.02 ಟಿಎಂಸಿ ನೀರು.












Click it and Unblock the Notifications