ಬಿಜೆಪಿಯತ್ತ ಗುಳೆಹೊರಟ ಕೊಡಗಿನ ಜೆಡಿಎಸ್ ಮುಖಂಡರು!
ಮಡಿಕೇರಿ, ಜನವರಿ 14 : ಕೊಡಗಿನಲ್ಲಿ ಜೆಡಿಎಸ್ ಸಂಘಟನೆಗೊಳ್ಳುವುದು ಕಷ್ಟ ಸಾಧ್ಯವಾಗಿದೆ. ಜೆಡಿಎಸ್ನ ಹಿರಿಯ ನಾಯಕ ಎಂ.ಸಿ.ನಾಣಯ್ಯ ಅವರು ಕಾಂಗ್ರೆಸ್ನತ್ತ ಮುಖ ಮಾಡುತ್ತಿರುವುದು ಸುದ್ದಿಯಾಗುತ್ತಿದ್ದಂತೆಯೇ ಒಂದಷ್ಟು ನಾಯಕರು, ಕಾರ್ಯಕರ್ತರು ಬಿಜೆಪಿಯತ್ತ ವಾಲುತ್ತಿರುವುದು ಸದ್ಯದ ಬೆಳವಣಿಗೆ.
ಒಂದೆರಡು ದಶಕಗಳ ಹಿಂದೆ ಒಂದಷ್ಟು ಮಟ್ಟಿಗೆ ದಳ ಜಿಲ್ಲೆಯಲ್ಲಿ ಬಲಗೊಂಡಿತ್ತು. ಎಂ.ಸಿ.ನಾಣಯ್ಯ ಅವರ ನೇತೃತ್ವದಲ್ಲಿ ಹಲವು ಮುಖಂಡರು ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಅಮೂಲ್ಯ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ಗೆ ಸೆಡ್ಡು ಹೊಡೆದಿದ್ದರು.
ಎಂ.ಸಿ.ನಾಣಯ್ಯ ಕಾಂಗ್ರೆಸ್ ಸೇರ್ತಾರಾ?
ಜೆ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಎಂ.ಸಿ.ನಾಣಯ್ಯ ಅವರು ಕಾನೂನು ಸಚಿವರಾಗಿದ್ದರಲ್ಲದೆ, ಒಂದಷ್ಟು ಉತ್ತಮ ನಾಯಕರ ಹುಟ್ಟಿಗೂ ಕಾರಣವಾಗಿದ್ದರು. ಅವತ್ತಿನ ದಿನಗಳಲ್ಲಿ ಪಕ್ಷ ಕಾಂಗ್ರೆಸ್, ಬಿಜೆಪಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಬೆಳೆದಿತ್ತು.
ಭಾರೀ ಸಂಚಲನ ಮೂಡಿಸಿದ ಶೃಂಗೇರಿಯಲ್ಲಿ ಗೌಡರ 'ಅತಿರುದ್ರ ಮಹಾಯಾಗ'
ಜನತಾದಳ ಇಬ್ಭಾಗವಾದ ಬಳಿಕ ಎಂ.ಸಿ.ನಾಣಯ್ಯ ಸೇರಿದಂತೆ ಒಂದಷ್ಟು ಬೆರಳೆಣಿಕೆಯ ನಾಯಕರು ತಟಸ್ಥರಾಗಿ ಉಳಿದುಕೊಂಡರಾದರೂ ಪಕ್ಕಾ ಬೆಂಬಲಿಗರಾಗಿದ್ದ ಟಿ.ಪಿ.ರಮೇಶ್ ಸೇರಿದಂತೆ ಇನ್ನೊಂದಷ್ಟು ಮಂದಿ ಕಾಂಗ್ರೆಸ್ ಕದ ತಟ್ಟಿ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಿಕೊಂಡಿದ್ದರು.
ಎಂ.ಸಿ.ನಾಣಯ್ಯ
ಎಂ.ಸಿ.ನಾಣಯ್ಯ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ದೇವೇಗೌಡರು ಪಕ್ಷದಲ್ಲಿ ಸ್ಥಾನಮಾನ ನೀಡಿದ್ದರು. ಇತ್ತೀಚೆಗೆ ಅವರನ್ನು ಕೈಬಿಡಲಾಗಿತ್ತು. ಹೀಗಾಗಿ ಅವರು ಮೌನಕ್ಕೆ ಶರಣಾಗಿದ್ದರು. ಈಗ ಕಾಂಗ್ರೆಸ್ ಗಾಳ ಹಾಕಿದೆ. ಆದರೆ, ಈಗಾಗಲೇ ಕೊಡಗಿನಲ್ಲಿ ನಾಣಯ್ಯ ಅವರ ಯುಗ ಮುಗಿದಿದೆ. ಅವರು ಕಾಂಗ್ರೆಸ್ಗೆ ಸೇರುವುದರಿಂದ ಪಕ್ಷಕ್ಕೆ ಅಂತಹ ಯಾವುದೇ ಲಾಭ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಜೆಡಿಎಸ್ ಗೆಲುವು ಸಾಧಿಸಿತ್ತು
ಕೊಡಗಿನಲ್ಲಿ ಜೆಡಿಎಸ್ ವರ್ಚಸ್ಸು ಕುಂಠಿತವಾಯಿತಾದರೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಣ್ಣಪುಟ್ಟ ನಾಯಕರು, ಕಾರ್ಯಕರ್ತರು ಪಕ್ಷದಲ್ಲೇ ಉಳಿದುಕೊಂಡಿದ್ದರು. ಇದರಿಂದಾಗಿ 2004ರಲ್ಲಿ ಚುನಾವಣೆ ನಡೆದಾಗ ಸೋಮವಾರಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎ.ಜೀವಿಜಯ ಅವರು ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.
ಮುಂದೆ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ವೇಳೆ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಆದರೆ, ನಂತರ ಕ್ಷೇತ್ರವಿಂಗಡಣೆಯಾದಾಗ ಕೊಡಗಿನಲ್ಲಿ ಸೋಮವಾರಪೇಟೆ ಕ್ಷೇತ್ರ ಕಳೆದು ಹೋಗಿ ಮಡಿಕೇರಿ ಮತ್ತು ವೀರಾಜಪೇಟೆಯೊಂದಿಗೆ ಲೀನವಾಗಿದ್ದರಿಂದ ಸೋಲು ಕಾಣಬೇಕಾಯಿತು. ಆ ನಂತರ ಜೀವಿಜಯ ಪಕ್ಷದ ಸಂಘಟನೆಯಿಂದ ದೂರವೇ ಉಳಿದು ಹೋದರು.
1 ಸಾವಿರ ನಾಯಕರು ಬಿಜೆಪಿಗೆ
ಚುನಾವಣೆ ಬಂದಾಗಲೆಲ್ಲ ಬಿ.ಎ.ಜೀವಿಜಯ ಅವರನ್ನು ಜೆಡಿಎಸ್ನಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗುತ್ತಿದೆ. ಆದರೆ, ಈ ಬಾರಿ ಜೆಡಿಎಸ್ಗೆ ಭಾರೀ ಹೊಡೆತ ಬೀಳುವುದು ನಿಶ್ಚಯವಾಗಿದೆ. ಕಾರಣ ಸೋಮವಾರಪೇಟೆ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಸೇರಿ ಸುಮಾರು ಒಂದು ಸಾವಿರ ಮಂದಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
ಯಾರು, ಯಾರು ಬಿಜೆಪಿಗೆ
ಸದ್ಯ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಜೆಡಿಎಸ್ನಲ್ಲಿ ಪ್ರಮುಖ ಹುದ್ದೆಗಳನ್ನಲಂಕರಿಸಿದ್ದ ಎಸ್.ಬಿ.ಭರತ್ ಕುಮಾರ್, ಎನ್.ಆರ್.ಅಜೀಶ್ ಕುಮಾರ್, ಎಚ್.ಎಸ್.ಯೋಗೇಶ್ ಕುಮಾರ್, ಎಚ್.ಸಿ.ರಾಮಕೃಷ್ಣ, ಕೆ.ಪಿ.ಆದರ್ಶ್ ಮೊದಲಾದ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುವುದು ಖಚಿತವಾಗಿದೆ.
ಜನವರಿ 15ರಂದು ಬಿಜೆಪಿ ಸೇರ್ಪಡೆ
ಜ.15ರಂದು ಸೋಮವಾರಪೇಟೆಯಲ್ಲಿ ನಡೆಯಲಿರುವ ಜಿಲ್ಲಾ ಬಿಜೆಪಿ ಯುವಮೋರ್ಚಾದ ಸಮಾವೇಶದಲ್ಲಿ ಮುಖಂಡ ವಿ.ಎಂ.ವಿಜಯ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಅಲ್ಲಿಗೆ ಅಳಿದುಳಿದ ನಾಯಕರನ್ನು ಕೂಡ ಜೆಡಿಎಸ್ ಕಳೆದುಕೊಳ್ಳುವಂತಾಗಿದೆ. ಈಗಾಗಲೇ ಕೊಡಗಿನಲ್ಲಿರುವ ಬೆರಳೆಣಿಕೆಯ ಜೆಡಿಎಸ್ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬರತೊಡಗಿದ್ದು, ಇದು ಪಕ್ಷದ ಸಂಘಟನೆಗೆ ತೊಡಕಾಗಿ ಪರಿಣಮಿಸಿದೆ. ಅದರ ಲಾಭವನ್ನು ಬಿಜೆಪಿ ಮಾಡಿಕೊಳ್ಳುತ್ತಿದೆ.