ಕುಮಾರಸ್ವಾಮಿ 35 ರಿಂದ 40 ಸೀಟು ಗೆದ್ದು 3ನೇ ಬಾರಿ ಸಿಎಂ ಆಗುವ ಕನಸು ಕಂಡಿದ್ರು: ಎಂ ಲಕ್ಷ್ಮಣ್
ಬೆಂಗಳೂರು, ಜುಲೈ 06: ಕುಮಾರಸ್ವಾಮಿಯವರ ಗುರಿ ಬೇರೆ ಇತ್ತು. ಅವರು ಬಹಳ ಕನಸು ಕಂಡಿದ್ದರು. 35 ರಿಂದ 40 ಸೀಟು ಗೆದ್ದು ಮೂರನೇ ಬಾರಿ ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರಾಜ್ಯದ ಯಾವುದೇ ಭಾಗದ ಜನರು ನಿಮ್ಮನ್ನು ನಂಬುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಾ ಸುಳ್ಳುಗಾರ. ದೇಶದಲ್ಲಿ ಹಿಟ್ ಅಂಡ್ ರನ್ ಹೇಳಿಕೆ ನೀಡುವ ಮುಖಂಡರಲ್ಲಿ ಕುಮಾರಸ್ವಾಮಿ ಮೊದಲಿಗರು. ಇದು ರಾಜ್ಯದ ದುರಂತ.ಕಳೆದ ಹತ್ತು ವರ್ಷಗಳಿಂದ ಕುಮಾರಸ್ವಾಮಿ ಅವರು ಕೇವಲ ಆರೋಪ ಮಾಡುತ್ತಿದ್ದಾರೆ ಹೊರತು ಒಂದು ಆರೋಪವನ್ನು ಸಾಬೀತು ಮಾಡಿಲ್ಲ.

ವರ್ಗಾವಣೆ ಕುರಿತು ಒಂದು ಪೆನ್ ಡ್ರೈವ್ ತೋರಿಸಿದ್ದಾರೆ. ಚೆಸ್ಕಾಂ ಹಾಗೂ ಮೆಸ್ಕಾಂ ಹುದ್ದೆಗಳಿಗೆ ಹತ್ತು ಕೋಟಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.ಚೆಸ್ಕಾಂ ಹಾಗೂ ಮೆಸ್ಕಾಂ ನಾಲ್ಕೈದು ಜಿಲ್ಲೆಗಳನ್ನು ಒಳಗೊಂಡಂತಹ ಕಂಪನಿಯಾಗಿದೆ. ಇದರಲ್ಲಿ 10 ಕೋಟಿ ಕೊಟ್ಟು ಹುದ್ದೆ ತರೀತಿಯಾಗುವ ಪರಿಸ್ಥಿತಿ ಇದೆಯಾ? ಅದು ಯಾವ ಹುದ್ದೆ? ಯಾರಿಗೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಆ ಬಗ್ಗೆ ದಾಖಲೆ ನೀಡಲಿ ಎಂದದು ಆಗ್ರಹಿಸಿದರು.
ಒಂದು ದಿನಕ್ಕೆ 50 ಲಕ್ಷ ಸಂಪಾದನೆ ಆಗುವಂತಹ ಹುದ್ದೆ ಎಂದು ಹೇಳುತ್ತಾರೆ. ಅಂತಹ ಹುದ್ದೆ ಯಾವುದಾದರೂ ಇದೆಯಾ? ಇಡೀ ಮೆಸ್ಕಾಂ ಸಂಸ್ಥೆಯ ಒಂದು ದಿನಕ್ಕೆ 50 ಲಕ್ಷ ವಹಿವಾಟು ಆಗುವುದಿಲ್ಲ. ಒಕ್ಕಲಿಗರ ಪಕ್ಷ ಎಂದು ಕರೆಸಿಕೊಂಡು ಮಂಡ್ಯದಲ್ಲಿ ಕೇವಲ ಒಂದೇ ಒಂದು ಕ್ಷೇತ್ರ ಮಾತ್ರ ಗೆದ್ದಿದ್ದಾರೆ. ಮೈಸೂರಿನಲ್ಲಿ ಜಿ ಟಿ ದೇವೇಗೌಡರು ಹಾಗೂ ಅವರ ಪುತ್ರನಿಗೆ ಟಿಕೆಟ್ ನೀಡದಿದ್ದರೆ ಮೈಸೂರಿನಲ್ಲಿ ಅವರ ಸಾಧನೆ ಶೂನ್ಯವಾಗುತ್ತಿತ್ತು.
ಕೇವಲ 19 ಸೀಟು ಪಡೆದಿರುವುದು ಹಾಗೂ ತಮ್ಮ ಮಗನ ಸೋಲಿನಿಂದ ತೀವ್ರ ಹತಾಶರಾಗಿದ್ದಾರೆ. ಹೀಗಾಗಿ ಬಿಜೆಪಿಯವರಿಂದ ಸುಪಾರಿ ಪಡೆದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನ ಬಳಿ ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕರ್ಮಕಾಂಡಗಳ ಕುರಿತು ಒಂದು ಪೆನ್ ಡ್ರೈವಿದೆ. ಕುಮಾರಸ್ವಾಮಿಯವರು ತಮ್ಮ ಪೆನ್ ಡ್ರೈವ್ ಮಾಹಿತಿ ಬಹಿರಂಗಪಡಿಸಿದ ಒಂದು ತಾಸಿನಲ್ಲಿ ನಾನು ಕೂಡ ಈ ಪೆನ್ ಡ್ರೈವ್ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ. ಇದು ಕುಮಾರಸ್ವಾಮಿ ಅವರಿಗೆ ನನ್ನ ಸವಾಲು.
ಕುಮಾರಸ್ವಾಮಿ ಅವರು 14 ತಿಂಗಳ ಕಾಲ ಪಂಚತಾರಾ ಹೋಟೆಲ್ ನಲ್ಲಿ ಇದ್ದುಕೊಂಡು ಮಾಡಿರುವ ಕರ್ಮಕಾಂಡಗಳ ಬಗ್ಗೆ ಈ ಪೆನ್ ಡ್ರೈವ್ ನಲ್ಲಿ ಮಾಹಿತಿ ಇದೆ. ಒಕ್ಕಲಿಗ ಸಮುದಾಯದಲ್ಲಿ ಡಿಕೆ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಕುಮಾರಸ್ವಾಮಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ವಿರುದ್ಧ ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಈ ಆರೋಪಗಳ ಬಗ್ಗೆ ನಿಮ್ಮ ಬಳಿ ಏನಾದರೂ ದಾಖಲೆ ಇದೆಯಾ? ದಾಖಲೆ ಇದ್ದರೆ ಕೊಡಿ.ನೀವು ಮಾಡುವ ಆರೋಪ ನೀಡುವ ಹೇಳಿಕೆಗಳೆಲ್ಲವೂ ಸುಳ್ಳು ಎಂದು ಜನರಿಗೆ ಅರ್ಥವಾಗಿದೆ. ನಿಮ್ಮ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಮುಂದಿನ ಯಾವುದೇ ಚುನಾವಣೆಗಳನ್ನು ಗೆಲ್ಲುವುದಿಲ್ಲ. ಪಂಚರತ್ನ ಯೋಜನೆ ಎಂದು ಹೇಳಿ ರಾಜ್ಯದಂತ ಮಿಷನ್ 123 ಮಾಡಿದ್ದೀರಿ ಏನಾಯ್ತು ನಿಮ್ಮ ಪ್ರಯತ್ನ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಡಿಶನ್ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದ ನಾಯಕರು, ಗ್ಯಾರಂಟಿ ಯೋಜನೆಗಳ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ಸ್ಥಾನದ ರೇಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿ ನಾಯಕರಿಗೆ ಇದೆ.
ಗ್ಯಾರಂಟಿ ಯೋಜನೆ ನೀಡುವುದು ನಮ್ಮ ಬದ್ಧತೆ. ಅಲ್ಲಿ ಮಧ್ಯಪ್ರದೇಶದಲ್ಲಿ ಮೋದಿಯವರು ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ನೀವು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಂದು ಹೋರಾಟ ಮಾಡುತ್ತಿದ್ದೀರಿ. ಈ ಬಗ್ಗೆ ಬಿಜೆಪಿ ಪಕ್ಷದ ಸ್ಪಷ್ಟ ನಿಲುವೇನು? ಎಂದು ಪ್ರಶ್ನಿಸಿದರು.












Click it and Unblock the Notifications