ಐಷಾರಾಮಿ ಕಾರುಗಳ ತೆರಿಗೆ ವಂಚನೆ ಪ್ರಕರಣಗಳು ಸಿಐಡಿ ತನಿಖೆಗೆ: ಶ್ರೀರಾಮುಲು
ಬೆಂಗಳೂರು, ಮಾ.25: ಐಷಾರಾಮಿ ಕಾರುಗಳ ತೆರಿಗೆ ವಂಚನೆ ಪ್ರಕರಣವನ್ನು ಪತ್ತೆಹಚ್ಚಲು ಸಿಐಡಿ ತನಿಖೆಗೆ ಆದೇಶಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ರಾಜ್ಯದಲ್ಲಿ ಐಷಾರಾಮಿ ಕಾರುಗಳ ತೆರಿಗೆ ವಂಚನೆ ಕುರಿತು ವಿಧಾನ ಪರಿಷತ್ತಿನಲ್ಲಿ ಸದಸ್ಯ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಶುಕ್ರವಾರ ಲಿಖಿತ ಉತ್ತರ ನೀಡಿದ ಶ್ರೀರಾಮುಲು ಅವರು ಬಳಿಕ ನಡೆದ ಚರ್ಚೆಯಲ್ಲಿ ಈ ವಿಷಯ ಹೇಳಿದರು.
ಸಾರಿಗೆ ಕಚೇರಿಗಳಲ್ಲಿ 2015ರ ಏಪ್ರಿಲ್ 1ರಿಂದ 2021ರ ನವೆಂಬರ್ 30ರವರೆಗೆ ಹಲವು ಐಷಾರಾಮಿ ಕಾರುಗಳ ನೋಂದಣಿಯಲ್ಲಿ ತೆರಿಗೆ ವಂಚನೆ ಆಗಿರುವ ಪ್ರಕರಣಗಳು ಪತ್ತೆಯಾಗಿವೆ. ಸಿಐಡಿ ತನಿಖೆ ಮೂಲಕ ತೆರೆಗೆ ವಂಚಿಸಿರುವುದು ಖಚಿತವಾದಂತಹ ಕಾರುಗಳನ್ನು ಜಪ್ತಿ ಮಾಡಲಾಗುವುದು ಎಂದು ಶ್ರೀರಾಮುಲು ಸದನಕ್ಕೆ ತಿಳಿಸಿದರು.

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಇಲಾಖಾ ಮಟ್ಟದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. 20 ಲಕ್ಷಕ್ಕೂ ಹೆಚ್ಚು ಬೆಲೆಯ ಕಾರುಗಳ ನೋಂದಣಿ ವೇಳೆ ತೆರಿಗೆ ವಂಚನೆಯಾಗಿರುವ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿದೆ. ಸರ್ಕಾರ ಈಗಾಗಲೇ ಕೆಲವು ವಾನಗಳನ್ನು ಜಪ್ತಿ ಮಾಡಿಕೊಂಡು ಸುಮಾರು 1.64 ಕೋಟಿ ರೂ. ವಸೂಲಿ ಮಾಡಿದೆ. ರಾಜ್ಯದಲ್ಲಿ ಸುಮಾರ 124 ಈ ರೀತಿಯ ಪ್ರಕರಣಗಳು ಕಂಡುಬಂದಿವೆ ಎಂದು ಸಚಿವರು ವಿವರಿಸಿದರು.
ಅಲ್ಲದೆ, ತೆರಿಗೆ ಪಾವತಿಸಿಕೊಳ್ಳದೆ ವಾಹನಗಳ ನೋಂದಣಿ ಮಾಡಿರುವ ಪ್ರಕರಣಗಳ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ, ವಿಚಾರಣೆಯನ್ನೂ ಕೈಗೊಳ್ಳಲಾಗಿದೆ. ಈ ಸಂಬಂದ ಪ್ರಾಥಮಿಕ ವರದಿ ನೀಡಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಯ ಅಗತ್ಯತೆಯೂ ಕಂಡುಬಂದಿದೆ. ಶೀಘ್ರದಲ್ಲಿಯೇ ಉನ್ನತಾಧಿಕಾರ ಸಮಿತಿ ರಚಿಸಿ ಅದರ ವರದಿ ಬಂದ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.












Click it and Unblock the Notifications