ಪರಸ್ಪರ ವೈರುಧ್ಯವಿದ್ದರೂ ಪಕ್ಷ, ದೇಶಕ್ಕಾಗಿ ಮೈತ್ರಿ : ಡಿಕೆಶಿ
ಬೆಂಗಳೂರು, ಮೇ 23: ಎಚ್.ಡಿ. ದೇವೇಗೌಡ ಹಾಗೂ ಕುಟುಂಬದವರ ಜೊತೆ ಡಿಕೆ ಶಿವಕುಮಾರ್ ಅವರ ಕದನ ನಿನ್ನೆ ಮೊನ್ನೆಯದ್ದಲ್ಲ, 1985ರಿಂದ ನಡೆದುಕೊಂಡು ಬಂದಿದೆ. ಆದರೆ, ಈಗ ಎಲ್ಲ ದ್ವೇಷ ಮರೆತು ಒಂದಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರೆ, ಆ ಕುಟುಂಬದ ಜತೆಗೆ ಪರಸ್ಪರ ವೈರುಧ್ಯವಿದ್ದರೂ ಪಕ್ಷ, ದೇಶಕ್ಕಾಗಿ ಮೈತ್ರಿ ಒಪ್ಪಿಕೊಂಡಿದ್ದಾಗಿ ಕಾಂಗ್ರೆಸ್ಸಿನ ನಿಷ್ಠಾವಂತ ಸಿಪಾಯಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಹಲವಾರು ಚುನಾವಣೆಗಳನ್ನು ಎದುರಿಸಿದ್ದರೂ ಸಹ, ಸೆಕ್ಯುಲರ್ ಸರ್ಕಾರ ರಚನೆಗಾಗಿ ಕಹಿ ನುಂಗಿಕೊಂಡಿರುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ಸಿನ ಆಪದ್ಬಾಂಧವ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್?!
1985ರಿಂದಲೂ(ಸಾತನೂರು ವಿಧಾನಸಭಾ ಕ್ಷೇತ್ರ) ನಾನು ಗೌಡರ ವಿರುದ್ಧ ಸ್ಪರ್ಧಿಸುತ್ತಾ ಬಂದಿದ್ದೇನೆ. ಹಿರಿಯ ಗೌಡರ ಎದುರು ಸಂಸದೀಯ ಚುನಾವಣೆಯಲ್ಲಿ ಸೋತಿದ್ದೇನೆ. ಅವರ ಪುತ್ರ ಹಾಗೂ ಸೊಸೆ ವಿರುದ್ಧ ಗೆದ್ದಿದ್ದೇನೆ. ಸಾಕಷ್ಟು ರಾಜಕೀಯ ನಡೆದಿದೆ. ಸಾಕಷ್ಟು ಪ್ರಕರಣಗಳನ್ನು ಎದುರಿಸಿದ್ದೇನೆ. ಆದರೆ, ಪಕ್ಷ ಹಾಗೂ ದೇಶದ ಹಿತದೃಷ್ಟಿಯಿಂದ ಇಲ್ಲಿ ಸೆಕ್ಯುಲರ್ ಸರ್ಕಾರ ರಚಿಸಿದ್ದೇವೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮೈತ್ರಿ ಸರ್ಕಾರ ರಚಿಸುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧಾರವಾಗಿತ್ತು ಎಂದಿರುವ ಡಿಕೆಶಿ, ಈ ಕಾರಣಕ್ಕಾಗಿಯೇ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ನಾನು ಈ ಎಲ್ಲಾ ಕಹಿಯನ್ನು ನುಂಗಿಕೊಂಡಿದ್ದೇನೆ. ಇದೆಲ್ಲಾ ನನ್ನ ಕರ್ತವ್ಯ ಎಂದರು.
ಮೈತ್ರಿ ಸರ್ಕಾರ ರಚನೆಯಾಗಿರುವ ಬಗ್ಗೆ ನಿಮಗೆ ಸಂತೋಷವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಸಮಯದಲ್ಲಿ ವೈಯಕ್ತಿಕ ನಿಲುವು ಲೆಕ್ಕಕ್ಕೆ ಬರುವುದಿಲ್ಲ. ಸಾಮೂಹಿಕ ನಿರ್ಧಾರವೇ ಅಂತಿಮವಾಗುತ್ತದೆ ಎಂದಿದ್ದಾರೆ.
ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆಯೇ ? ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಕಾಲವೇ ಉತ್ತರ ನೀಡಲಿದೆ. ಈಗಲೇ ನಾನು ಉತ್ತರಿಸುವುದಿಲ್ಲ. ನಮ್ಮ ಎದುರು ಹಲವಾರು ವಿಷಯಗಳಿವೆ, ಆಯ್ಕೆಗಳಿವೆ. ಈಗಲೇ ಎಲ್ಲವನ್ನೂ ಹೇಳಲಾಗದು ಎಂದರು.
ಎಸ್ ಬಂಗಾರಪ್ಪ ಅವರು ಡಿಕೆ ಶಿವಕುಮಾರ್ ಅವರನ್ನು ಸಚಿವರಾಗುವಂತೆ ಮಾಡಿದರು. ನಂತರ ಎಸ್ಎಂ ಕೃಷ್ಣ ಅವರ ಅನುಯಾಯಿಯಾಗಿ ಬೆಳೆದರು. ಈ ಬಾರಿಯ ಚುನಾವಣೆಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಡಿಕೆಶಿ, ಶಾಸಕರನ್ನು ರಕ್ಷಿಸಿ, ಮೈತ್ರಿ ಸರ್ಕಾರ ರಚನೆಯಾಗಲು ಬೇಕಾದ ವೇದಿಕೆ ಸೃಷ್ಟಿಸಿದ್ದನ್ನು ಎಲ್ಲರೂ ಅಚ್ಚರಿ ಕಣ್ಣಿಂದ ನೋಡಿದ್ದಾರೆ.