ಆಸ್ತಿಗಳಿಕೆ ಪ್ರಕರಣ : ರೇಣುಕಾಚಾರ್ಯ ವಿರುದ್ಧ ತನಿಖೆ
ದಾವಣಗೆರೆ, ಮೇ 5 : ಅಕ್ರಮ ಆಸ್ತಿಗಳಿಗೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಯಲಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.
ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಅವರು ದಾವಣಗೆರೆ ಲೋಕಾಯುಕ್ತ ನ್ಯಾಯಾಲಯಕ್ಕೆ ರೇಣುಕಾಚಾರ್ಯ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿ ಜೂನ್ 26ಕ್ಕೆ ವರದಿ ನೀಡುವಂತೆ ಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.

ಏ.28ರಂದು ಗುರುಪಾದಯ್ಯ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದರು. ರೇಣುಕಾಚಾರ್ಯ ಅವರ ಸಂಬಂಧಿಕರಾದ ಎಂ.ಪಿ.ರಮೇಶ್, ಎಂ.ಪಿ.ಆರಾಧ್ಯ. ಎಂ.ಪಿ.ಬಸವರಾಜ್ ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು. [ರೇಣುಕಾಚಾರ್ಯ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು]
ಆರೋಪವೇನು : ಎಂ.ಪಿ.ರೇಣುಕಾಚಾರ್ಯ ಅವರು ಸಚಿವರಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಸಂಬಂಧಿಕರ ಹೆಸರಿನಲ್ಲಿಯೂ ಹೊನ್ನಾಳಿ, ದಾವಣಗೆರೆ, ಶಿವಮೊಗ್ಗದಲ್ಲಿ ಬೇನಾಮಿ ಆಸ್ತಿ ಖರೀದಿ ಮಾಡಿದ್ದಾರೆ ಎಂಬುದು ಆರೋಪ. [13 ಕಡೆ ಲೋಕಾಯುಕ್ತ ದಾಳಿ, 14 ಕೋಟಿ ಅಕ್ರಮ ಆಸ್ತಿ ಪತ್ತೆ]
ರೇಣುಕಾಚಾರ್ಯ ಅವರು ಚುನಾವಣಾ ಆಯೋಗಕ್ಕೂ ಸುಳ್ಳು ಮಾಹಿತಿ ನೀಡಿದ್ದಾರೆ. 2004ರ ವಿಧಾನಸಭೆ ಚುನಾವಣೆ ವೇಳೆ 26 ಲಕ್ಷ, 2008ರ ಚುನಾವಣೆಯಲ್ಲಿ 73 ಲಕ್ಷ ಹಾಗೂ 2013ರ ಚುನಾವಣೆಯಲ್ಲಿ 4 ಕೋಟಿ ಆಸ್ತಿಯನ್ನು ಅವರು ಘೋಷಿಸಿದ್ದಾರೆ.
ತಮಗೆ ಆದಾಯದ ಮೂಲ ಇಲ್ಲವೆಂದು ಹೇಳುವ ಅವರು ಇಷ್ಟೊಂದು ಆಸ್ತಿ ಖರೀದಿ ಮಾಡಿದ್ದು ಹೇಗೆ? ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ. ದೂರಿನ ಅನ್ವಯ ಲೋಕಾಯುಕ್ತ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ.












Click it and Unblock the Notifications