ಸೈನಿಕನಿಗಾಗಿ ಚುನಾವಣೆ ತ್ಯಾಗ ಮಾಡಿ: ಮೋದಿಗೆ ಸಿದ್ದು ಸವಾಲ್
Recommended Video

ಬೆಂಗಳೂರು, ಏಪ್ರಿಲ್ 13: ಭಾರತೀಯ ಸೇನೆಯ ಸಾಧನೆಗಳ ಬಗ್ಗೆ ಭಾಷಣಗಳಲ್ಲಿ ಪ್ರಸ್ತಾಪಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸೈನ್ಯದ ಬಗ್ಗೆ ನಿಜವಾಗಿಯೂ ಗೌರವವಿದ್ದರೆ ವಾರಣಾಸಿಯಲ್ಲಿ ಚುನಾವಣೆಯಿಂದ ಹಿಂದೆ ಸರಿದು ಸೈನಿಕನನ್ನು ಬೆಂಬಲಿಸಿ ಗೆಲ್ಲಿಸಿ ಎಂದು ಅವರು ಮೋದಿ ಅವರಿಗೆ ಸಲಹೆ ನೀಡಿದ್ದಾರೆ.
ವಾರಣಾಸಿ ಲೋಕಸಭೆ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಬಿಎಸ್ಎಫ್ನಿಂದ ವಜಾಗೊಂಡ ಸೈನಿಕ ತೇಜ್ ಬಹದ್ದೂರ್ ಕಣಕ್ಕಿಳಿದಿದ್ದಾರೆ. ಮೋದಿ ಅವರಿಗೆ ಸೈನಿಕರ ಮೇಲೆ ಗೌರವ ಇದ್ದರೆ ಈ ಸೈನಿಕನನ್ನು ಬೆಂಬಲಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸೇನೆಯಲ್ಲಿ ನೀಡಲಾಗುವ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ದೂರಿ ಅಂತರ್ಜಾಲದಲ್ಲಿ ವಿಡಿಯೋ ಹರಿಬಿಟ್ಟ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ಬಿಎಸ್ಎಫ್ ಸೈನಿಕ ತೇಜ್ ಬಹದ್ದೂರ್ ಯಾದವ್, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದರು.
'ಸ್ವತಂತ್ರ ಅಭ್ಯರ್ಥಿಯಾಗಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಲಿದ್ದೇನೆ' ಎಂದು ತೇಜ್ ಬಹದ್ದೂರ್ ಯಾದವ್ ಹರಿಯಾಣದ ರೇವಾರಿಯಲ್ಲಿ ತಿಳಿಸಿದ್ದರು.
ಸೈನ್ಯ ಮತ್ತು ಸೈನಿಕರ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಧನಿಗೆ ತಮ್ಮ ಲೋಕಸಭಾ ಚುನಾವಣಾ ಸ್ಥಾನವನ್ನು ಬಿಟ್ಟುಕೊಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೆ ಕಟುವಾದ ಪ್ರತಿಕ್ರಿಯೆಗಳು ಕೂಡ ಟ್ವಿಟ್ಟರ್ನಲ್ಲಿ ವ್ಯಕ್ತವಾಗಿದೆ.
|
ಸೈನಿಕನನ್ನು ಬೆಂಬಲಿಸುವುದಿಲ್ಲವೇ?
ಮಾನ್ಯ ನರೇಂದ್ರ ಮೋದಿ ಅವರೇ, ನಿಮಗೆ ನಿಜವಾಗಿಯೂ ಸೈನ್ಯ ಮತ್ತು ಸೈನಿಕರ ಬಗ್ಗೆ ಗೌರವವಿದ್ದರೆ ನಿಮ್ಮ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿರುವ ದೇಶಕ್ಕಾಗಿ ದುಡಿದ ಹೆಮ್ಮೆಯ ಸೈನಿಕ ತೇಜ್ ಬಹದ್ದೂರ್ನನ್ನು ಬಹಿರಂಗವಾಗಿ ಬೆಂಬಲಿಸಿ, ಚುನಾವಣೆಯಿಂದ ಹಿಂದೆ ಸರಿಯಿರಿ. ಒಬ್ಬ ಸೈನಿಕ ಆಯ್ಕೆಯಾಗುವುದನ್ನು ನೀವು ಬೆಂಬಲಿಸುವುದಿಲ್ಲವೇ? ಎಂದು ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಸವಾಲು ಹಾಕಿದ್ದಾರೆ.
|
ಸುಮಲತಾಗೆ ಬೆಂಬಲ ನೀಡಿ
ಸನ್ಮಾನ್ಯ ಸಿದ್ದರಾಮಯ್ಯನವರೆ, ನಿಮಗೆ ಮಹಿಳೆಯರ ಮೇಲೆ ನಿಜವಾದ ಕಾಳಜಿ, ಗೌರವ ಇದ್ದರೆ ಮಂಡ್ಯದಲ್ಲಿ ಸುಮಲತಾ ಅವರಿಗೆ ಬಹಿರಂಗ ಬೆಂಬಲ ನೀಡಿ, ನಿಮ್ಮ ದೋಸ್ತಿ ಪಕ್ಷದ ನಿಖಿಲ್ರನ್ನು ಕಣದಿಂದ ದೂರ ಸರಿಯಲು ಹೇಳಿ.. ಒಬ್ಬ ಮಹಿಳೆ ಆಯ್ಕೆಯಾಗುವುದನ್ನು ನೀವು ಬೆಂಬಲಿಸುವುದಿಲ್ಲವೇ..? ಎಂದು ಸಿದ್ದರಾಮಯ್ಯ ಅವರ ಟ್ವೀಟ್ ದಾಟಿಯಲ್ಲಿಯೇ ಬೋಪಣ್ಣ ಬೊಳ್ಳಿಯಂಗಡ ಎಂಬುವವರು ಅವರಿಗೆ ಸವಾಲೊಡ್ಡಿದ್ದಾರೆ.
|
ನಿಮಗೆ ಯಾವ ನೈತಿಕತೆ ಇದೆ?
ಮಾನ್ಯ ಸಿದ್ದರಾಮಯ್ಯನವರೇ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಎಂದು ಕುಮಾರಸ್ವಾಮಿಗೆ ಹೇಳಿದಿರಲ್ಲ ನೀವು ಅವರ ಅಪ್ಪನ ಪರವಾಗಿ ಮತಯಾಚನೆ ಮಾಡುತ್ತೀರಲ್ಲ ನಿಮಗೆ ಯಾವ ನೈತಿಕತೆ ಇದೆ ಮೋದಿ ಅವರನ್ನು ಪ್ರಶ್ನಿಸಲು ಎಂದು ಹನುಮಂತ ನಟೇಕರ್ ಎಂಬುವವರು ಟೀಕಿಸಿದ್ದಾರೆ.
|
ಬೇಕಿರುವುದು ಅಧಿಕಾರ
ಸರ್ ಚುನಾವಣಾ ಪ್ರಚಾರಕ್ಕೆ ಸೈನಿಕರನ್ನು ಮುಂದೆ ಇಟ್ಟುಕೊಂಡು ಪ್ರಚಾರ ಮಾಡುವಾಗಲೇ ನಾವು ತಿಳಿಯಬೇಕು ಮೋದಿಗೆ ಬೇಕಾಗಿರುವುದು ಕೇವಲ ಅಧಿಕಾರ ಎಂದು. ನಿಜವಾದ ದೇಶ ಭಕ್ತ ಆದರೆ ಸೈನಿಕರನ್ನೇ ಅವಿರೋಧವಾಗಿ ಆಯ್ಕೆ ಮಾಡಲಿ ಎಂದು ಭಾನುಪ್ರಿಯಾ ಎಂಬುವವರು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದಾರೆ.
|
ನೀವೇ ಹೀಯಾಳಿಸಿಕೊಳ್ಳುತ್ತಿದ್ದೀರಿ
ನಿಜ, ನೀವು ಈ ಕೂಡಲೇ ರಾಹುಲ್ ಗಾಂಧಿ ಯನ್ನು ಮತ್ತು ಎಲ್ಲರನ್ನೂ ಹಿಂದೆ ಸರಿಸಿ ಯೋಧರಿಗೆ ಟಿಕೆಟ್ ಕೊಡಿ. ಛೇ! ಟೀಕೆಗೂ ಒಂದು ಘನತೆ ಬೇಡವೇ??? ಯಾಕೆ ನಿಮ್ಮನ್ನು ನೀವೇ ಹೀಯಾಳಿಸಿಕೊಳ್ಳುತ್ತಿದ್ದೀರಿ? ಒಂದು ಕಾಲದ ಅತ್ಯಂತ ಜನಪ್ರಿಯ ಮುಖ್ಯ ಮಂತ್ರಿಗಳು ನೀವು... ಪದವಿ ಕಳೆದು ಕೊಂಡಿದ್ದೀರಿ ಕನಿಷ್ಠ ಘನತೆಯನ್ನಾದರೂ ಉಳಿಸಿ ಎಂದು ಪ್ರದೀಪ್ ಕುಮಾರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications