ಚಿಕ್ಕಬಳ್ಳಾಪುರದಲ್ಲಿ ಎಚ್ಡಿಕೆಗೆ ಹೀನಾಯ ಸೋಲು
ಚಿಕ್ಕಬಳ್ಳಾಪುರ, ಮೇ 16 : ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯ ಬಿಎನ್ ಬಚ್ಚೇಗೌಡ ವಿರುದ್ಧ ಗೆಲ್ಲಲು ಭಾರೀ ಬೆವರು ಹರಿಸಬೇಕಾಯಿತು. ಜಿಲ್ಲೆಯ ಜನರಿಗೆ 'ಎತ್ತಿನಹೊಳೆ' ಆಸೆ ತೋರಿಸಿದ್ದ ವೀರಪ್ಪ ಮೊಯ್ಲಿಗೆ ಮತದಾರರು ಕಡೆಗೂ ಜೈ ಅಂದಿದ್ದಾರೆ.
ಗೆದ್ದೇ ಗೆಲ್ತೀನಿ ಎಂದು ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಎರಡನೇ ಸ್ಥಾನ ಕೂಡ ಪಡೆಯಲು ವಿಫಲರಾಗಿ ಮುಖಭಂಗ ಅನುಭವಿಸಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರೆ, ಅತ್ತ ಅದೂ ಇಲ್ಲ, ಇತ್ತ ಇದೂ ಇಲ್ಲ ಎಂಬಂತಹ ಸ್ಥಿತಿಗೆ ಅವರು ತಲುಪುತ್ತಿದ್ದರು.

ವೀರಪ್ಪ ಮೊಯ್ಲಿಯಂತೆ ಸುಳ್ಳು ಹೇಳಲು ಮತ್ತು ಕುಮಾರಸ್ವಾಮಿಯಂತೆ ಕಣ್ಣೀರು ಸುರಿಸಲು ಬರಲ್ಲ. ನನ್ನದೇನಿದ್ದರೂ ನೇರ ನುಡಿ, ದಿಟ್ಟ ನಡೆ ಎಂದು ಹೇಳಿದ್ದ ಬಿಜೆಪಿಯ ಬಚ್ಚೇಗೌಡ ಅವರು ಮೊಯ್ಲಿಗೆ ಕ್ಲಿಷ್ಟಕರ ಸ್ಪರ್ಧೆಯನ್ನು ನೀಡಿ, ಕಡೆಗೂ ವೀರೋಚಿತ ಸೋಲನ್ನು ಅನುಭವಿಸಿದ್ದಾರೆ.
ಅತ್ಯಂತ ತುರುಸಿನ ಸ್ಪರ್ಧೆ ಕಂಡ ಕ್ಷೇತ್ರ ಚಿಕ್ಕಬಳ್ಳಾಪುರ. ವೀರಪ್ಪ ಮೊಯ್ಲಿ ಆರಂಭದಲ್ಲಿ ಮುನ್ನಡೆ ಕಂಡಿದ್ದರೂ, ಮಧ್ಯಾಹ್ನದ ಹೊತ್ತಿಗೆ ಬಚ್ಚೇಗೌಡ ಅಲ್ಪ ಮುನ್ನಡೆ ಕಂಡಿದ್ದರು. ಯಾರು ಬೇಕಾದರೂ ಗೆಲ್ಲಬಹುದೆಂಬ ಸನ್ನಿವೇಶ ಏರ್ಪಟ್ಟಿತ್ತು. ಆದರೆ, ಕೊನೆಗೆ ವೀರಪ್ಪ ಮೊಯ್ಲಿ ಅವರು ಅಲ್ಪ ಮತಗಳ ಅಂತರದಿಂದ ವಿಜಯಮಾಲೆ ಧರಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟಾರೆಯಾಗಿ ಪ್ರತಿಶತ 67.28ರಷ್ಟು ಮತದಾನವಾಗಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಪ್ರತಿಶತ 76.06ರಷ್ಟು ಮತದಾನವಾಗಿತ್ತು. 2009ರಲ್ಲಿ ಈ ಕ್ಷೇತ್ರದಿಂದಲೇ ಜಯಶಾಲಿಯಾಲಿದ್ದ ವೀರಪ್ಪ ಮೊಯ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ, ಕೇಂದ್ರದಲ್ಲಿ ಸಚಿವರಾಗುವ ಅವಕಾಶದಿಂದ ವಂಚಿತರಾಗಿದ್ದಾರೆ.
| ಚಿಕ್ಕಬಳ್ಳಾಪುರ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
| ವೀರಪ್ಪ ಮೊಯ್ಲಿ | 1 | ಕಾಂಗ್ರೆಸ್ | 424,800 |
| ಬಿಎನ್ ಬಚ್ಚೇಗೌಡ | 2 | ಬಿಜೆಪಿ | 415,280 |
| ಎಚ್ ಡಿ ಕುಮಾರಸ್ವಾಮಿ | 3 | ಜೆಡಿಎಸ್ | 346,339 |
| ಜಿವಿ ಶ್ರೀರಾಮ ರೆಡ್ಡಿ | 4 | ಸಿಪಿಐ(ಎಂ) | 26,071 |












Click it and Unblock the Notifications