Lok Sabha Election: ಕರ್ನಾಟಕದಲ್ಲೂ ಬೇರೂರಿದೆ ಕುಟುಂಬ ರಾಜಕಾರಣ: ಇಲ್ಲಿದೆ ಫ್ಯಾಮಿಲಿ ಪಾಲಿಟಿಕ್ಸ್ ಕಂಪ್ಲೀಟ್ ರಿಪೋರ್ಟ್
ರಾಜಕೀಯ ಎಂದರೆ ಹಾಗೆ.. ಒಮ್ಮೆ ಅಧಿಕಾರದ ರುಚಿ ನೋಡಿದ್ಮೇಲೆ, ಪದೆ ಪದೇ ಗದ್ದುಗೆ ಏರಬೇಕು ಎಂದೇ ಅನಿಸುತ್ತದೆ. ನಮಗೆ ಆಗ್ದೇ ಇದ್ದರೂ ಏನಪ್ಪ ನಮ್ಮ ಕುಟುಂಬಕ್ಕಾದರೂ ಇದರ ಲಾಭ ಸಿಗಲಿ ಎಂಬ ಆಶಯವನ್ನೇ ರಾಜಕಾರಣಿಗಳು ಹೊಂದಿರುತ್ತಾರೆ. ಭಾರತದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಕೂಗುಗಳು ಮೊದಲಿನಿಂದಲೂ ಕೇಳಿ ಬಂದಿವೆ. ಆದರೆ ಇದರ ಹರಿವು ಬೆಳೆಯುತ್ತಲೇ ಇದೆ. ಲೋಕಸಭಾ ಚುನಾವಣೆಗೆ ಮೂಹರ್ತ ಫಿಕ್ಸ್ ಆಗಿದೆ. ಕರ್ನಾಟಕದಲ್ಲೂ ಫ್ಯಾಮಿಲಿ ಪಾಲಿಟಿಕ್ಸ್ ಬೇರೂರಿದೆ.
ಕುಟುಂಬ ರಾಜಕಾರಣಕ್ಕೆ ಕರ್ನಾಟಕ ಏನು ಹೊರತಾಗಿಲ್ಲ. ಮೊದಲಿನಿಂದಲೂ ಕುಟುಂಬ ರಾಜಕಾರಣಕ್ಕೆ ಇಲ್ಲಿ ಮಣೆ ಹಾಕಲಾಗಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ಸದ್ದು ಜೋರಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಹಾಗಿದ್ದರೆ ಯಾವ ಯಾವ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ ಎಂಬ ಕಂಪ್ಲೀಟ್ ವರದಿ ಇಲ್ಲಿದೆ.

ಕಾಂಗ್ರೆಸ್ನಲ್ಲಿ ಹೇಗಿದೆ ಕುಟುಂಬ ರಾಜಕಾರಣ?
ಬೇರೆ ಪಕ್ಷಗಳಂತೆ ಕಾಂಗ್ರೆಸ್ನಲ್ಲೂ ಜಾತಿ ಹಾಗೂ ಕುಟುಂಬ ರಾಜಕಾಣ ಬೇರು ಮಟ್ಟದಲ್ಲಿದೆ. ಈ ಬಾರಿಯೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದೆ. ಮಾಜಿ ರಾಜ್ಯಸಭಾ ಉಪಸಭಾಪತಿ ರೆಹಮನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಇವರಿಗೆ ಬೆಂಗಳೂರು ಕೇಂದ್ರದಿಂದ ಟಿಕೆಟ್ ಲಭಿಸಿದೆ. ಮನ್ಸೂರ್ ಈ ಬಾರಿ ಅಖಾಡದಲ್ಲಿರುವ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.
ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಸಚಿವರಾಗಿರುವ ಎಚ್ಸಿ ಮಹದೇವಪ್ಪ ಅವರ ಮಗನಿಗೂ ಅದೃಷ್ಟ ಖುಲಾಯಿಸಿದೆ. ಸುನಿಲ್ ಬೋಸ್ ಚಾಮರಾಜನಗರದಿಂದ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನು ಮಾಜಿ ಸ್ಪೀಕರ್ ಎಂ.ವಿ ವೆಂಕಟಪ್ಪ ಅವರ ಮಗ ಪ್ರೊಫೇಸರ್ ರಾಜೀವ್ ಗೌಡ್ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಅವರಿಗೆ ಬೆಳಗಾವಿಯಿಂದ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಕೈ ಟಿಕೆಟ್ ನೀಡಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ಕುಮಾರ್ ಅವರಿಗೂ ಶಿವಮೊಗ್ಗದಿಂದ ಟಿಕೆಟ್ ಲಭಿಸಿದೆ. ಇನ್ನು ಚಿಕ್ಕೊಡಿ ಕ್ಷೇತ್ರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರ ಮಗಳು ಪ್ರಿಯಾಂಕಾಗೆ ಅವಕಾಶ ಸಿಕ್ಕಿದೆ.
ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಸಹ ಬೀದರ್ನಿಂದ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಸಚಿವ ಶಿವಾನಂದ್ ಪಾಟೀಲ್ ಅವರ ಮಗಳು ಸಂಯುಕ್ತಾ ಸಹ ಬಾಗಲಕೋಟೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಮಾಜಿ ಬಿಬಿಎಂಪಿ ಮೇಯರ್ ಕೆವಿ ವಿಜಯ್ ಕುಮಾರ್ ಅವರ ಪುತ್ರ ಕೆವಿ ಗೌತಮ್ ಅವರಿಗೆ ಚಾನ್ಸ್ ನೀಡಲಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಸಹ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲಿದ್ದಾರೆ. ಕೊಪ್ಪಳ ಎಂಎಲ್ಎ ರಾಘವೇಂದ್ರ ಹಿಟ್ನಾಳ್ ಅವರ ಸಹೋದರ ರಾಜಶೇಖರ್ ಹಿಟ್ನಾಳ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಕ್ಷೇತ್ರದಿಂದ ಮಲ್ಲಿಕಾರ್ಜುನ್ ಖರ್ಗೆ ಅಳಿಯ ರಾಧಾಕೃಷ್ಣ ಚುನಾವಣಾ ಅಖಾಡದಲ್ಲಿದ್ದಾರೆ. ಉಳಿದಂತೆ ಎಸ್ಎಸ್ ಮಲ್ಲಿಕಾರ್ಜುನ್ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಸಹ ದಾವಣಗೆರೆಯಿಂದ ಸಂಸತ್ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.

ಬಿಜೆಪಿಯಲ್ಲೂ ಇದೆ ಫ್ಯಾಮಿಲಿ ಪಾಲಿಟಿಕ್ಸ್
ಕಾಂಗ್ರೆಸ್ನಂತೆ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಎದ್ದು ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್ಆರ್ ಬೊಮ್ಮಯಿ ಅವರ ಮಗ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾವೇರಿ-ಗದಗ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿ ವೈ ರಾಘವೇಂದ್ರ ಶಿವಮೊಗ್ಗದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸುವ ಕನಸು ಹೊಂದಿದ್ದಾರೆ.
ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದತ್ತು ಪುತ್ರ ಯಧುವಿರ್ ಒಡೆಯರ್ ಅವರಿಗೆ ಮೈಸೂರಿನಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಡಾ.ಕೆ ಸುಧಾಕರ್ ಅವರ ತಂದೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ.
ಬೆಂಗಳೂರು ಗ್ರಾಮಂತರದಿಂದ ಲೋಕಸಭಾ ಚುನಾವಣಾ ಕಣದಲ್ಲಿರುವ ಡಾ.ಸಿಎನ್ ಮಂಜುನಾಥ್ ಸಹ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಅಳಿಯ. ದಾವಣಗೆರೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿರುವ ಗಾಯತ್ರಿ ಸಿದ್ದೇಶ್ವರ್ ಅವರು ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ್ ಅವರ ಪತ್ನಿ. ಬೆಂಗಳೂರು ದಕ್ಷಿಣದಿಂದ ಎರಡನೇ ಬಾರಿ ಸಂಸದಾನಾಗುವ ಆಸೆ ಕಾಣುತ್ತಿರುವ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ಹಾಲಿ ಬಿಜೆಪಿ ಎಂಎಲ್ಎ ರವಿ ಸುಬ್ರಹ್ಮಣ್ಯ.

ಕುಟುಂಬ ರಾಜಕಾರಣಕ್ಕೆ ಜೆಡಿಎಸ್ ಹೆಸರುವಾಸಿ
ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಹ ಈ ಬಾರಿ ಲೋಕ ಅಖಾಡಕ್ಕೆ ಇಳಿದಿದ್ದಾರೆ. ಇವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಇನ್ನು ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸಹ, ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ. ಪ್ರಜ್ವಲ್ ತಂದೆ ಎಚ್ಡಿ ರೇವಣ್ಣ ಸಹ ಹಾಲಿ ಶಾಸಕ.
ಇದಷ್ಟು ಮೇಲ್ನೋಟಕ್ಕೆ ಕಾಣುತ್ತದೆ. ಇದರಲ್ಲಿ ಯಾರೆಲ್ಲಾ ಗೆಲುವು ಸಾಧಿಸುತ್ತಾರೆ ಎಂಬುದು ಕುತೂಗಲ ಮೂಡಿಸಿದೆ.












Click it and Unblock the Notifications