ಲೋಕಸಭಾ ಚುನಾವಣೆ 2024: ಮೋದಿಗೆ ಸೆಡ್ಡು ಹೊಡೆಯಬಲ್ಲ 'ಇಂಡಿಯಾ'ದ ಪ್ರಧಾನಿ ಅಭ್ಯರ್ಥಿ ಯಾರು?
ಬೆಂಗಳೂರು, ಅಕ್ಟೋಬರ್ 06: ಪ್ರಧಾನಿ ನರೇಂದ್ರ ಮೋದಿಯನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಅರ್ಥಾತ್ ಐಎನ್ ಡಿಐಎ(ಇಂಡಿಯಾ) ಒಕ್ಕೂಟ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ತೀರುವ ಹಠಕ್ಕೆ ಬಿದ್ದಿವೆ. ಆದರೆ ನರೇಂದ್ರ ಮೋದಿಗೆ ಎದುರಾಗಿ ನಿಂತು ಹೋರಾಡುವ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಒಕ್ಕೂಟ ಇದುವರೆಗೆ ಪ್ರಕಟ ಮಾಡದೆ ಇರುವುದು ಪ್ರಧಾನಿ ಅಭ್ಯರ್ಥಿ ಆಗುವುದಕ್ಕೆ ನಾಯಕರ ನಡುವೆ ಪೈಪೋಟಿಯಿದೆ ಎಂಬುದನ್ನು ತೋರಿಸುತ್ತಿದೆ.
ಇನ್ನು ಮುಂದಿನ ದಿನಗಳು ಲೋಕಸಭಾ ಚುನಾವಣೆಯ ಕಾಲವಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಆ ಗುಂಗಿನಲ್ಲಿವೆ. ಅದರಲ್ಲೂ ವಿಪಕ್ಷ ಸ್ಥಾನದಲ್ಲಿರುವ ಬಹುತೇಕ ಪಕ್ಷಗಳಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟವನ್ನು ಮಣಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯುವುದೇ ಪ್ರಮುಖ ಗುರಿಯಾಗಿದೆ. ಈ ಕಾರಣಕ್ಕಾಗಿಯೇ ಹಿಂದೆಯಿದ್ದ ಯುಪಿಎನ್ನು ವಿಸರ್ಜಿಸಿ ಐಎನ್ ಡಿಐಎ(ಇಂಡಿಯಾ) ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ.

ಸುಮಾರು ಇಪ್ಪತ್ತೆಂಟು ಪಕ್ಷಗಳು ಸೇರಿ ಇಂಡಿಯಾ ಒಕ್ಕೂಟವನ್ನು ರಚಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಹೋರಾಟಕ್ಕಿಳಿದಿವೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುವುದನ್ನು ತಡೆಯುವುದೇ ಈ ಒಕ್ಕೂಟದ ಅಜೆಂಡಾ ಆಗಿದೆ. ಅದಕ್ಕೆ ಬೇಕಾದ ತಯಾರಿಗಳನ್ನು ಈ ಹಿಂದೆಯೇ ಸಭೆಗಳನ್ನು ಮಾಡಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇಂಡಿಯಾ ಒಕ್ಕೂಟ ರಚನೆಯಾದ ಬಳಿಕ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವುದು ಕಾಂಗ್ರೆಸ್ ಪಕ್ಷ ಸೇರಿದಂತೆ ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳಿಗೂ ಆತ್ಮವಿಶ್ವಾಸ ತುಂಬಿದೆ.
ಪ್ರಧಾನಿ ನರೇಂದ್ರ ಮೋದಿ ಬಲ ಕುಗ್ಗಿದೆಯಾ?
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಲ ಕುಗ್ಗಿದೆಯಾ? ಇಂಡಿಯಾ ಒಕ್ಕೂಟದ ಬಲ ಹಿಗ್ಗಿದೆಯಾ? ಇದು ಗೊತ್ತಾಗಬೇಕಾದರೆ ಡಿಸೆಂಬರ್ ವೇಳೆಗೆ ಪಂಚರಾಜ್ಯಗಳ ಚುನಾವಣೆ ನಡೆದು ಫಲಿತಾಂಶ ಬರಬೇಕಾಗಿದೆ. ಸಾಮಾನ್ಯವಾಗಿ ಲೋಕಸಭಾ ಚುನಾವಣೆಗೂ ವಿಧಾನಸಭಾ ಚುನಾವಣೆಗೂ ಹೋಲಿಕೆ ಮಾಡಲಾಗದು. ಇದೆರಡು ಚುನಾವಣೆಯನ್ನು ಮತದಾರರು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ ಎಂಬ ವಾದಗಳು ಇವೆ. ಅದನ್ನು ತಳ್ಳಿ ಹಾಕಲಾಗುವುದಿಲ್ಲ.
ಇದೀಗ ಎಲ್ಲರ ಮುಂದಿರುವ ಒಂದೇ ಒಂದು ಪ್ರಶ್ನೆ ಏನೆಂದರೆ ಇಂಡಿಯಾ ಒಕ್ಕೂಟ ಯಾರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುತ್ತದೆ ಎನ್ನುವುದಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಘೋಷಿಸುವ ಮೂಲಕವೇ ನಡೆಸಿತ್ತು. ಆದರೆ ಅದು ಯಾವುದೇ ಫಲವನ್ನು ಕೊಡಲಿಲ್ಲ. ರಾಹುಲ್ ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ನಾಯಕನನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದ್ದಂತಿಲ್ಲ.
ಯಾರೆಲ್ಲ ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಗಳು?
ಇನ್ನು 28 ಪಕ್ಷಗಳ ಘಟಾನುಘಟಿ ನಾಯಕರು ಸೇರಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಅವರ ಗೆಲುವಿಗಾಗಿ ಕೆಲಸ ಮಾಡುವಷ್ಟು ಒಗ್ಗಟ್ಟು ಇದೆಯಾ? ಎಂಬ ಪ್ರಶ್ನೆಯೂ ಕಾಡದಿರದು. ಏಕೆಂದರೆ ಈಗಾಗಲೇ ಪ್ರಧಾನಿಯಾಗಬೇಕೆಂಬ ಬಯಕೆ ಜೆಡಿಯು ನಾಯಕ ನಿತೀಶ್ ಕುಮಾರ್, ಪಶ್ಚಿಮ ಪಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎಎಪಿ ಸಂಸ್ಥಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗಿದೆ ಎನ್ನುವುದು ಸುಳ್ಳೇನಲ್ಲ.
ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಆಕಾಂಕ್ಷಿಗಳು ಇರುವುದರಿಂದಲೇ ಇದುವರೆಗೆ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡಲೇ ಬೇಕಾಗಿದೆ. ಇಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎನ್ನುವುದು ಕೆಲಸಕ್ಕೆ ಬರಲ್ಲ ಎನ್ನುವುದು ಅಷ್ಟೇ ಸತ್ಯ. ಈಗಾಗಲೇ ರಾಹುಲ್ ಗಾಂಧಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯ ತಂತ್ರಗಳನ್ನು ಮಾಡುತ್ತಿದ್ದಾರೆ. ಅವರ ನಡವಳಿಕೆಯಲ್ಲಿ ಚುನಾವಣಾ ಗಿಮಿಕ್ ಕಾಣುತ್ತಿವೆ ಎನ್ನುವುದನ್ನು ತಳ್ಳಿಹಾಕಲಾಗದು. ಆದರೂ ಜನ ಮನಸೆಳೆಯಲು ಹಲವು ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಬರುತ್ತಿರುವುದು ಸುಳ್ಳೇನಲ್ಲ.
ಯಾರಾಗಲಿದ್ದಾರೆ ಪ್ರಧಾನಿ ಅಭ್ಯರ್ಥಿ?
ಇಪ್ಪತ್ತೆಂಟು ಪಕ್ಷಗಳು ಒಟ್ಟಾಗಿ ನಿಂತು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಈ ಎಲ್ಲ ಪಕ್ಷಗಳ ನಾಯಕರ ಒಂದೇ ಒಂದು ಗುರಿ ಏನೆಂದರೆ ಅಧಿಕಾರಕ್ಕೆ ಬರುವುದಾಗಿದೆ. ಕಳೆದ ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿ ದೇಶದ ಮತದಾರರ ನಾಡಿ ಮಿಡಿತವನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಚುನಾವಣಾ ಅಸ್ತ್ರವಾಗುವಂತಹ ವಿಚಾರಗಳನ್ನು ವಿಪಕ್ಷಗಳಿಗೆ ಬಿಟ್ಟುಕೊಟ್ಟಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ದಾಖಲೆಗಳು ಸಿಗುತ್ತಿಲ್ಲ. ಸದ್ಯಕ್ಕೆ ಆರೋಪಗಳನ್ನಷ್ಟೆ ಮಾಡಬಹುದಷ್ಟೆ.
ಇಂಡಿಯಾ ಒಕ್ಕೂಟ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ತನಕ ಏನೇ ರಾಜಕೀಯ ಕಸರತ್ತು ಮಾಡಿದರೂ ಅದು ಪ್ರಯೋಜನವಾಗಲಾರದು. ಚುನಾವಣಾ ಕಣಕ್ಕೆ ಧುಮುಕಬೇಕಾದರೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು ಅನಿವಾರ್ಯುವಾಗಿದೆ. ಒಂದು ವೇಳೆ ಘೋಷಿಸದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರೆ ಅದು ಪರಿಣಾಮಕಾರಿಯಾಗಲಾರದು.
ಅದೊಂಥರಾ ನಾವಿಕನಿಲ್ಲದ ಹಡಗು ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಪ್ಪತ್ತೆಂಟು ಪಕ್ಷಗಳ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಿರಬಹುದು ಎಂಬ ಪ್ರಶ್ನೆ ದೇಶಾದ್ಯಂತ ಎದ್ದಿದೆ ಅದಕ್ಕೆ ಉತ್ತರ ಯಾವಾಗ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications