ಪ್ರತಾಪ್ ಸಿಂಹಗೆ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಸ್ಪರ್ಧೆ ಗ್ಯಾರಂಟಿ?
2024ರ ಲೋಕಸಭೆ ಚುನಾವಣೆಗೆ ಈಗ ರಣಕಹಳೆ ಮೊಳಗಿದೆ, ಗೆದ್ದೇ ಗೆಲ್ಲಬೇಕು ಅಂತಾನೇ ಕಾಂಗ್ರೆಸ್ & ಬಿಜೆಪಿ ನಾಯಕರು ಫೈಟಿಂಗ್ ಶುರು ಮಾಡಿದ್ದಾರೆ. ಅದರಲ್ಲೂ ಕರ್ನಾಟಕದ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ಬಲು ಜೋರಾಗಿದೆ. ಹೀಗಿದ್ದಾಗಲೇ ಮೈಸೂರು & ಕೊಡಗು ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಲು, ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಭರ್ಜರಿ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾದರೆ ಸಿಂಹಗೆ ಬಿಜೆಪಿ ಟಿಕೆಟ್ ಸಿಗದಿದ್ರೆ ಪಕ್ಷೇತರ ಸ್ಪರ್ಧೆ ಪಕ್ಕಾನಾ?
ಮೈಸೂರು & ಕೊಡಗು ಕ್ಷೇತ್ರ ಈ ಮೊದಲಿನಿಂದ ಕೂಡ ಸಾಕಷ್ಟು ಗಮನ ಸೆಳೆಯುತ್ತಿದ್ದು, ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್ & ಜೆಡಿಎಸ್ ನಡುವೆ ನೇರವಾದ ಸ್ಪರ್ಧೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿ ಹೋಗಿದೆ. ಮೈಸೂರು ಮತ್ತು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಾಗಿದೆ. ಹೀಗೆ ಈ ಕ್ಷೇತ್ರವು ಬಿಜೆಪಿ ಭದ್ರಕೋಟೆ ಆಗಲು ಪ್ರಮುಖ ಕಾರಣವೇ 2014 ರ ಲೋಕಸಭೆ ಚುನಾವಣೆ ಎನ್ನಬಹುದು. 2014ರಲ್ಲಿ ಪ್ರಧಾನಿ ಮೋದಿ ಹವಾ ಇದ್ದ ಸಮಯದಲ್ಲಿ ಪ್ರತಾಪ್ ಸಿಂಹ ಇಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದರು. 2019ರಲ್ಲಿ ಕೂಡ ಈ ಕ್ಷೇತ್ರದಿಂದ ಸುಲಭವಾಗಿ ಟಿಕೆಟ್ ಗಿಟ್ಟಿಸಿಕೊಂಡ ಪ್ರತಾಪ್ ಸಿಂಹಗೆ ಈಗ ದೊಡ್ಡ ಟಾಸ್ಕ್ ಎದುರಾಗಿದೆ.

ಮೈಸೂರು ರಾಜವಂಶಕ್ಕೆ ಟಿಕೆಟ್?
ಯಡಿಯೂರಪ್ಪ ಅವರ ಮಾತನ್ನು ಬಿಜೆಪಿ ಹೈಕಮಾಂಡ್ ಸಂಪೂರ್ಣ ಕೇಳಿ ಟಿಕೆಟ್ ನೀಡುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅದರಲ್ಲೂ ಕರ್ನಾಟಕದ 28 ಕ್ಕೆ 28 ಲೋಕಸಭೆ ಕ್ಷೇತ್ರಗಳಿಗು ಅಭ್ಯರ್ಥಿ ಆಯ್ಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಸಲಹೆ ಇಲ್ಲದೆಯೆ ಒಂದೆ ಒಂದು ಹೆಜ್ಜೆಯನ್ನೂ ಬಿಜೆಪಿ ನಾಯಕರು ಮುಂದಿಡುತ್ತಿಲ್ಲ. ಈ ಸಮಯದಲ್ಲೇ ಮೈಸೂರು & ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದ್ದು.
ಪ್ರತಾಪ್ ಸಿಂಹ ಜಾಗಕ್ಕೆ ಈಗ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂಟ್ರಿ ಪಕ್ಕಾ ಎನ್ನಲಾಗುತ್ತಿದೆ. ಯದುವೀರ್ ಅವರಿಗೆ, ಮೈಸೂರು & ಕೊಡುಗು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತು ಬಲವಾಗಿ ಓಡಾಡಿದೆ. ಯಾಕಂದ್ರೆ ಯದುವೀರ್ ಅವರ ಆಯ್ಕೆಯಿಂದ ಬಿಜೆಪಿ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ಕೂಡ ಲಾಭವಾಗುವ ನಿರೀಕ್ಷೆ ಇದೆ. ಹಾಗಾದರೆ ಪ್ರತಾಪ್ ಸಿಂಹ ಮುಂದಿನ ಹೆಜ್ಜೆ ಏನು?
ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ?
2014ರಲ್ಲಿ ಬರೋಬ್ಬರಿ 5,03,908 ಮತ ಪಡೆದಿದ್ದ ಪ್ರತಾಪ್ ಸಿಂಹ ಅವರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಇವರ ಎದುರು ನಿಂತಿದ್ದ ಎಚ್. ವಿಶ್ವನಾಥ್ ಅವರು 4,72,300 ಮತಗಳನ್ನು ಪಡೆದಿದ್ದರು. ನಂತರ 2019 ರಲ್ಲಿ 6,88,974 ಮತಗಳನ್ನು ಪಡೆದಿದ್ದರು ಪ್ರತಾಪ್ ಸಿಂಹ. ಎದುರಾಳಿ ಸಿ.ಎಚ್. ವಿಜಯಶಂಕರ್ 5,50,327 ಮತಗಳನ್ನು ಪಡೆದಿದ್ದರು. ಇದೀಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ ಹೀಗಾಗಿ ಪ್ರತಾಪ್ ಸಿಂಹ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆ ಕೂಡ ಬಲವಾಗಿದೆ.

ಒಟ್ನಲ್ಲಿ ಹೀಗೆ ಪ್ರತಾಪ್ ಸಿಂಹ ಅವರ ಸ್ಪರ್ಧೆ ಹಾಗೂ ಮೈಸೂರು & ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗಲು ಇನ್ನೂ ಒಂದೆರಡು ದಿನ ಕಾಯಬೇಕಿದೆ. ಯಾಕಂದ್ರೆ ಬಿಜೆಪಿ ಈಗ ತನ್ನ 2ನೇ ಪಟ್ಟಿ ಪ್ರಕಟಿಸಲಿದ್ದು, ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನು ಘೋಷಿಸಲಿದೆ ಎನ್ನಲಾಗುತ್ತಿದೆ. ಹಾಗೇ ಜೆಡಿಎಸ್ ಪಕ್ಷಕ್ಕೆ ಸಿಗಲಿರುವ ಸ್ಥಾನಗಳ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗುತ್ತದೆ.












Click it and Unblock the Notifications