H.D Deve Gowda: ದೇವೇಗೌಡರು ಹೇಳಿದ ಆ ಮೂರನೇ ಮಹಿಳೆ ಯಾರು?
ಬೆಂಗಳೂರು, ಏಪ್ರಿಲ್ 17: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಅನ್ನು ವಿರೋಧಿಸಿಕೊಂಡೇ ಬಂದವರು. ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ರಾಜಕೀಯವಾಗಿ ಬೆಳೆದವರು. ಅಲ್ಪ ಕಾಲದ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದನ್ನು ಹೊರತು ಪಡಿಸಿದರೆ ಅವರಿಗೆ ಯಾವ ಅಧಿಕಾರವೂ ದೊರಕಲೇ ಇಲ್ಲ. ಆದರೂ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿಯೇ ಉಳಿದು ಹೋಗಿದ್ದಾರೆ.
ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಗೆ ಸರಿಸಮಾನಾಗಿ ಪ್ರಾದೇಶಿಕವನ್ನು ಕಟ್ಟಿಬೆಳೆಸಿದ ಕೀರ್ತಿ ಅವರಿಗಿದೆ. ಜತೆಗೆ ಪ್ರಬಲ ಒಕ್ಕಲಿಗ ನಾಯಕನಾಗಿ ರಾಜ್ಯದಲ್ಲಿ ಬೆಳೆದಿದ್ದಾರೆ. ಒಮ್ಮೆ ಕಾಂಗ್ರೆಸ್ ಸಹಕಾರದೊಂದಿಗೆ ಪ್ರಧಾನಿಯಾದರೆ ಮತ್ತೊಮ್ಮೆ ಕಾಂಗ್ರೆಸ್ ಸಹಕಾರದಿಂದ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಂತೆ ನೋಡಿಕೊಂಡರು. ಆದರೆ ಎರಡು ಸಂದರ್ಭವೂ ಅವರು ಕಾಂಗ್ರೆಸ್ ನ್ನು ಇನ್ನಷ್ಟು ದ್ವೇಷಿಸುವಂತಾಗಿದೆ.

ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ದೇವೇಗೌಡರು ಬಿಜೆಪಿ ನೇತೃತ್ವದ ಎನ್ ಡಿಎಗೆ ಬೆಂಬಲ ನೀಡುತ್ತಾರೆ ಎಂಬುದನ್ನು ಯಾರೂ ನಂಬಿರಲಿಲ್ಲ. ಆದರೀಗ ಯಾರೂ ಊಹಿಸದ ಅಂತಹದೊಂದು ಬೆಳವಣಿಗೆ ನಡೆದಿದೆ. ಮತ್ತು ಕಾಂಗ್ರೆಸ್ ವಿರುದ್ಧ ಸಮರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಸಾರಿದ್ದಾರೆ. ಇನ್ನು ದೇವೇಗೌಡರು ಕಾಂಗ್ರೆಸ್ ನ್ನು ವಿರೋಧಿಸಿಕೊಂಡ ಪರಿಣಾಮದಿಂದಾಗಿ ತಳಮಟ್ಟದಿಂದಲೇ ಕಾರ್ಯಕರ್ತರ ನಡುವೆ ಪ್ರಬಲ ಪೈಪೋಟಿ ಇಂದಿಗೂ ಮುಂದುವರೆದಿದೆ.
ಬಿಜೆಪಿಯೊಂದಿಗೆ ಮೈತ್ರಿ ಜೆಡಿಎಸ್ಗೆ ಅನಿವಾರ್ಯ
ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭ ದೇವೇಗೌಡರು ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಅದನ್ನು ಕಾರ್ಯಕರ್ತರು ಒಪ್ಪಿಲ್ಲ ಎಂಬುದಕ್ಕೆ ಅವರ ಸೋಲೇ ಸಾಕ್ಷಿಯಾಗಿದೆ. ಆ ನಂತರ ಏನೆಲ್ಲ ಆಯಿತು ಎಂಬುದು ನಮ್ಮೆಲ್ಲರ ಮುಂದಿದೆ. ಸದ್ಯ ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಬದ್ಧ ವೈರಿ ಪಕ್ಷಗಳಾಗಿವೆ. ಇವತ್ತು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಹೋರಾಟ ಮಾಡುತ್ತಿವೆ. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಗೆ ಇದು ಅನಿವಾರ್ಯವಾಗಿದೆ.

ದೇವೇಗೌಡರ ದೃಷ್ಟಿಯಲ್ಲಿ ಕಾಂಗ್ರೆಸ್ ಎನ್ನುವುದು ಮಾನ ಮರ್ಯಾದೆಯನ್ನು ಕಳೆದುಕೊಂಡ ಪಕ್ಷ ಇದನ್ನು ಅವರು ಪರೋಕ್ಷವಾಗಿ ದೃಷ್ಟಾಂತ ಕಥೆಗಳೊಂದಿಗೆ 1994ರಲ್ಲಿ ಮಡಿಕೇರಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಹೇಳಿದ್ದರು. ಅದು ಇವತ್ತಿಗೂ ಪ್ರಸ್ತುತವಾಗಿದೆ. ಇವತ್ತು ರಾಜಕೀಯ ನಾಯಕರು ಚೌಕಟ್ಟು ಮೀರಿ ಟೀಕೆಗಳನ್ನು ಮಾಡುವ ಸಂದರ್ಭದಲ್ಲಿ ಎದುರಾಳಿಗಳನ್ನು ಹೀಗೂ ಚುಚ್ಚಬಹುದು ಎಂಬುದಕ್ಕೆ ಸುಮಾರು ಮೂವತ್ತು ವರ್ಷಗಳ ಹಿಂದೆ ಅವರು ಹೇಳಿದ ಆ ಕಥೆ ಸಾಕ್ಷಿಯಾಗಿದೆ.
ಗೌಡರು ಹೇಳಿದ ಕಥೆ ಸ್ವಾರಸ್ಯ, ಮಾರ್ಮಿಕ
1994ರಲ್ಲಿ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ರಂಗೇರಿತ್ತು. ಆಗ ದೇವೇಗೌಡರು ಜನತಾದಳದಲ್ಲಿದ್ದರು. ರಾಮಕೃಷ್ಣಹೆಗಡೆ ಮತ್ತು ದೇವೇಗೌಡರ ನಡುವಿನ ಕಿತ್ತಾಟಕ್ಕೆ ತೆರೆ ಎಳೆದುಕೊಂಡು ಒಟ್ಟಾಗಿ ಚುನಾವಣೆಗೆ ಹೋಗಿದ್ದರು. ಅವತ್ತು ಅವರಿಗೆ ಬಿಜೆಪಿ ಪ್ರತಿಸ್ಪರ್ಧಿಯೇ ಆಗಿರಲಿಲ್ಲ. ಅವರಿಗೆ ಎದುರಾಳಿ ಎಂದರೆ ಕಾಂಗ್ರೆಸ್ ಮಾತ್ರ. ಇಂತಹ ಕಾಂಗ್ರೆಸ್ಗೆ ದೇವೇಗೌಡರು ತಮ್ಮ ಚುನಾವಣಾ ಪ್ರಚಾರದ ವೇಳೆ ಕಥೆಯ ಮೂಲಕ ಎಂತಹ ಟಾಂಗ್ ನೀಡಿದ್ದರೆಂದರೆ ಅದು ಎಷ್ಟು ಸ್ವಾರಸ್ಯಕರವಾಗಿತ್ತೋ ಅಷ್ಟೇ ಮಾರ್ಮಿಕವೂ ಆಗಿತ್ತು.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜನತಾದಳದ ಸಮಾವೇಶ ಏರ್ಪಡಿಸಲಾಗಿತ್ತು. ಅವತ್ತು ಸಮಾವೇಶದ ಐಕಾನ್ ಹೆಚ್.ಡಿ.ದೇವೇಗೌಡರಾಗಿದ್ದರು. ಅವರ ಭಾಷಣ ಕೇಳಲೆಂದೇ ಜನ ಜಮಾಯಿಸಿದ್ದರು. ದೇವೇಗೌಡರು ಮಾತಿಗಿಳಿದಿದ್ದರು. ಮಾತಿನ ಮಧ್ಯೆ ಅವರೊಂದು ಕಥೆಯೊಂದನ್ನು ಹೇಳತೊಡಗಿದ್ದರು. ಆ ಕಥೆ ಹೀಗಿತ್ತು.

ಚಪ್ಪಲಿ, ಛತ್ರಿ ಖರೀದಿಸುವ ಮಹಿಳೆಯರು
ವಾರಕ್ಕೊಮ್ಮೆ ನಡೆಯುವ ಸಂತೆಗೆ ಮೂವರು ಮಹಿಳೆಯರು ಜೊತೆಯಲ್ಲೇ ಹೋಗುತ್ತಿದ್ದರಂತೆ. ಸಂತೆಗೆ ಹೋದಾಗಲೆಲ್ಲ. ಒಬ್ಬಳು ಮಹಿಳೆ ತನ್ನ ಗಂಡನಿಗೆ ಛತ್ರಿಯನ್ನು ಕೊಂಡುಕೊಂಡರೆ, ಮತ್ತೊಬ್ಬಳು ಚಪ್ಪಲಿಯನ್ನು ಕೊಂಡುಕೊಳ್ಳುತ್ತಿದ್ದಳಂತೆ. ಒಂದೆರಡು ಬಾರಿ ಇದೇ ರೀತಿ ನಡೆಯಿತು. ಅವರ ಜೊತೆಗಿದ್ದ ಮೂರನೇ ಮಹಿಳೆಗೆ ಈ ಇಬ್ಬರು ಪ್ರತಿ ಬಾರಿಯೂ ಖರೀದಿಸಿದ್ದನ್ನೆ ಖರೀದಿಸುತ್ತಾರಲ್ಲ ಏಕಿರಬಹುದು? ಎಂಬ ಕುತೂಹಲ ಆರಂಭವಾಯಿತು. ಹೀಗಾಗಿ ಆಕೆ ಮನಸ್ಸು ತಡೆಯಲಾರದೆ ಒಮ್ಮೆ ಕೇಳಿಯೇ ಬಿಟ್ಟಳು.
ನಾನು ನೋಡುತ್ತಲೇ ಇದ್ದೇನೆ. ನೀವು ಪ್ರತಿಸಲ ಸಂತೆಗೆ ಬಂದಾಗಲೂ ಛತ್ರಿ ಮತ್ತು ಚಪ್ಪಲಿಯನ್ನು ಖರೀದಿಸುತ್ತಿದ್ದೀರಲ್ಲ ಏಕೆ ಎಂದು ಪ್ರಶ್ನಿಸಿದಳು. ಆಕೆಯ ಪ್ರಶ್ನೆಯಲ್ಲಿ ಅಚ್ಚರಿ, ಕುತೂಹಲ ಎಲ್ಲವೂ ಇತ್ತು. ಆದರೆ ಆ ಮಹಿಳೆಯರ ಮುಖದಲ್ಲಿ ಯಾವುದೇ ಅಚ್ಚರಿಯೂ ಇರಲಿಲ್ಲ. ಅವರಿಬ್ಬರ ಪೈಕಿ ಒಬ್ಬಳು ಹೇಳಿದಳು. ಅಯ್ಯೋ ನನ್ನ ಗಂಡನಿಗೆ ಮರೆವು ಜಾಸ್ತಿ ಹೋದ ಕಡೆಗಳಲ್ಲೆಲ್ಲ ಚಪ್ಪಲಿ ಮರೆತು ಬರುತ್ತಾರೆ. ಮತ್ತೊಬ್ಬಳು ಹೇಳಿದಳು ನನ್ನ ಗಂಡಂದೂ ಅದೇ ಕಥೆ ಅವರು ಕೂಡ ಹೋದಲೆಲ್ಲ ಛತ್ರಿ ಮರೆತು ಬರುತ್ತಾರೆ. ಹೀಗಾಗಿ ಪ್ರತಿ ಬಾರಿ ಸಂತೆಯಲ್ಲಿ ಅವುಗಳನ್ನು ಕೊಂಡುಕೊಳ್ಳೋದು ನಮ್ಮ ಕರ್ಮವಾಗಿದೆ ಎಂದು ಮಾತು ಮುಗಿಸಿದ ಆ ಮಹಿಳೆಯರಲ್ಲಿ ಕುತೂಹಲ ಹಾಗೆಯೇ ಉಳಿದು ಹೋಗಿತ್ತು.
ಮಾನ ಮರ್ಯಾದೆ ಸಂತೇಲಿ ಸಿಗುತ್ತಾ?
ಅದೇನೆಂದರೆ ನಮ್ಮ ಗಂಡಂದಿರು ಹೋದಲೆಲ್ಲ ಛತ್ರಿ, ಚಪ್ಪಲಿ ಕಳೆದುಕೊಂಡು ಬರುತ್ತಾರೆ. ಆದರೆ ಈಕೆಯ ಗಂಡ ಏನನ್ನೂ ಕಳೆದುಕೊಂಡು ಬರಲ್ವಾ? ಸರಿ ಇದನ್ನು ಆಕೆಯ ಬಳಿ ಕೇಳಿ ಬಿಡೋಣ ಎಂಬ ನಿರ್ಧಾರಕ್ಕೆ ಆ ಮಹಿಳೆಯರಿಬ್ಬಳು ಬಂದಿದ್ದರಲ್ಲದೆ, ತಮ್ಮ ಕುತೂಹಲ ತಡೆಯಲಾರದೆ ಆ ವಿಚಾರವನ್ನು ಆಕೆ ಬಳಿ ಕೇಳಿಯೇ ಬಿಟ್ಟರು. ರೀ ನಿಮ್ಮ ಗಂಡ ಏನನ್ನೂ ಮರೆತು ಬರಲ್ವಾ? ಅದಕ್ಕೆ ಆ ಮಹಿಳೆ ನೀಡಿದ ಉತ್ತರ ಹೀಗಿತ್ತು.
ಅಯ್ಯೋ ನನ್ನ ಗಂಡ ಹೋದಲೆಲ್ಲ ಮಾನ, ಮರ್ಯಾದೆ ಕಳೆದುಕೊಂಡು ಬರ್ತಾನೆ. ಅದನ್ನೇನು ಸಂತೇಲಿ ಖರೀದಿ ಮಾಡೋಕೆ ಆಗುತ್ತಾ? ಅವಳ ಉತ್ತರಕ್ಕೆ ಆ ಇಬ್ಬರು ಮಹಿಳೆಯರು ಮರು ಮಾತನಾಡದೆ ತೆಪ್ಪಗಾಗಿದ್ದರು. ಈ ಕಥೆ ಹೇಳುತ್ತಾ ಮಾನಮರ್ಯಾದೆ ಕಳೆದುಕೊಂಡು ಬರುವ ಗಂಡನನ್ನು ಕಾಂಗ್ರೆಸ್ ಹೋಲಿಸಿ ನೆರೆದವರಿಂದ ಚಪ್ಪಾಳೆ, ಶಿಳ್ಳೆಗಳನ್ನು ಗಿಟ್ಟಿಸಿಕೊಂಡಿದ್ದರು. ಎದುರಾಳಿಗಳನ್ನು ರಾಜಕೀಯವಾಗಿ ಹಣಿಯುವುದೆಂದರೆ ಇದು ಅಲ್ಲವೆ? ಇವತ್ತಿನ ರಾಜಕೀಯ ನಾಯಕರ ಹೇಳಿಕೆಗಳು ತೀರಾ ಕೀಳುಮಟ್ಟಕ್ಕೆ ಇಳಿಯುತ್ತಿರುವ ಈ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ದೇವೇಗೌಡರು ಕಥೆ ನೆನಪಾಗುತ್ತಿದೆ.












Click it and Unblock the Notifications