ತುಮಕೂರಿನಲ್ಲಿ ಕೈಗೆ ಜೈ ಎಂದ ಮತದಾರ
ತುಮಕೂರು, ಮೇ.19:ಏಳು ಚುನಾವಣೆಯಲ್ಲಿ ಸ್ಪರ್ಧಿಸಿ ನಾಲ್ಕು ಬಾರಿ ಲೋಕಸಭೆ ಮೆಟ್ಟಿಲೇರಿದ್ದ ಬಿಜೆಪಿಯ ಜಿ.ಎಸ್.ಬಸವರಾಜ್ ಅವರಿಗೆ ಈ ಬಾರಿ ತುಮಕೂರಿನ ಮತದಾರ ಕೈ ಹಿಡಿಯಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರು 74,041 ಮತಗಳ ಅಂತರಿಂದ ಜಯಭೇರಿ ಭಾರಿಸುವ ಮೂಲಕ ಹತ್ತು ವರ್ಷಗಳ ಬಳಿಕ ಕ್ಷೇತ್ರದಲ್ಲಿ ಕೈ ಪಕ್ಷ ಗೆಲುವಿನ ನಗೆ ಬೀರಿದೆ.
ಕಳೆದ ಬಾರಿ ಜಿ.ಎಸ್.ಬಸವರಾಜ್ ವಿರುದ್ಧ ಸೋತಿದ್ದ ಎಸ್.ಪಿ. ಮುದ್ದಹನುಮೇಗೌಡರು ಈ ಬಾರಿ ಅದೇ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರು. ಕಾಂಗ್ರೆಸ್ನಲ್ಲಿ ಸೀಟ್ ಸಿಗದೇ ಜೆಡಿಎಸ್ ಸೇರಿ ಇತ್ತೀಚಿಗೆ ನಿಧನರಾದ ಜೆಡಿಎಸ್ ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ 2,58,683 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ತವರು ಜೆಲ್ಲೆಯಾದ ತುಮಕೂರಿನಲ್ಲಿ ಕಾಂಗ್ರೆಸ್ ಗೆಲ್ಲುವುದರ ಮೂಲಕ ಪರಮೇಶ್ವರ್ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಂಡಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಅಯ್ಕೆಯಾಗಿದ್ದ ಮುದ್ದಹನುಮೇಗೌಡರು ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಜಿ.ಎಸ್.ಬಸವರಾಜ್ 21,445 ಮತಗಳ ಅಂತರದಿಂದ ಎಸ್.ಪಿ. ಮುದ್ದಹನುಮೇಗೌಡರನ್ನು ಸೋಲಿಸಿದ್ದರು. ಈ ಬಾರಿ ಶೇ.72.5 ರಷ್ಟು ಮತದಾನವಾಗಿದ್ದರೆ, 2009ರಲ್ಲಿ ಶೇ.68.3ರಷ್ಟು ಮತದಾನವಾಗಿತ್ತು. ಜೆಡಿಎಸ್ನ ಎ. ಕೃಷ್ಣಪ್ಪ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 12,934 ಜನ ನೋಟಾಗೆ ನಮ್ಮ ಮತವನ್ನು ಹಾಕಿದ್ದಾರೆ.[ತುಮಕೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ]
ತುಮಕೂರು | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
ಎಸ್.ಪಿ. ಮುದ್ದಹನುಮೇಗೌಡ | 1 | ಕಾಂಗ್ರೆಸ್ | 429868 |
ಜಿ.ಎಸ್.ಬಸವರಾಜ್ | 2 | ಬಿಜೆಪಿ | 355827 |
ಎ. ಕೃಷ್ಣಪ್ಪ | 3 | ಜೆಡಿಎಸ್ | 258683 |
ಚಿನ್ನಪ್ಪ ವಿ | 4 | ಸಿಪಿಐ | 10448 |