ಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು
ಬೆಂಗಳೂರು, ಮೇ 08: ಲಾಕ್ ಡೌನ್ ಪರಿಣಾಮ ಹಲವು ಕನ್ನಡಿಗರು ಉತ್ತರ ಭಾರತದ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಎಲ್ಲರನ್ನೂ ಕರ್ನಾಟಕಕ್ಕೆ ವಾಪಸ್ ಕರೆತರಲು ದೆಹಲಿ- ಬೆಂಗಳೂರು ನಡುವೆ ವಿಶೇಷ ರೈಲು ಓಡಿಸಲು ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ರೈಲ್ವೆ ಸಚಿವ ಪಿಯುಶ್ ಗೋಯಲ್ ಜೊತೆ ಈ ಕುರಿತು ಮಾತುಕತೆ ನಡೆಸಿದ್ದರು. ಸಚಿವರು ವಿಶೇಷ ರೈಲನ್ನು ಓಡಿಸಲು ಒಪ್ಪಿಗೆ ಕೊಟ್ಟಿದ್ದು, ದಿನಾಂಕ ನಿಗದಿಯಾಗಬೇಕಿದೆ.
ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರು ಈ ರೈಲಿನ ಮೂಲಕ ತವರು ರಾಜ್ಯಕ್ಕೆ ವಾಪಸ್ ಆಗಬಹುದು. ಹರ್ಯಾಣ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಸದಾನಂದ ಗೌಡರು ಮಾತುಕತೆ ನಡೆಸಿದ್ದಾರೆ.

ಬೇರೆ-ಬೇರೆ ರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರನ್ನು ದೆಹಲಿಗೆ ಕರೆಸಿಕೊಂಡು ವಿಶೇಷ ರೈಲಿನ ಮೂಲಕ ಬೆಂಗಳೂರಿಗೆ ಕಳಿಸಲಾಗುತ್ತದೆ. ಹಾಗೇಯೆ ಅರಬ್ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆಸಲು ಎರಡು ವಿಮಾನಗಳ ವ್ಯವಸ್ಥೆ ಮಾಡಲಾಗಿದ್ದು, ಮೇ 12ರಂದು ಮೊದಲ ವಿಮಾನ ಯುಎಇನಿಂದ ಹೊರಡಲಿದೆ.
ದೆಹಲಿಯಿಂದ ಸ್ವಂತ ವಾಹನದಲ್ಲಿ ಕರ್ನಾಟಕಕ್ಕೆ ವಾಪಸ್ ಆಗಮು ಬಯಸುವವರು ಸ್ವಂತ ವಾಹನದಲ್ಲಿ ಪ್ರಯಾಣಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಾಗಿದೆ. ದೆಹಲಿವಾಸಿಗಳು, ಯಾತ್ರಾರ್ಥಿಗಳಿಗೆ ಅಗತ್ಯ ಪರವಾನಿಗೆಯನ್ನು ಕೊಡಿಸಲಾಗಿದೆ.












Click it and Unblock the Notifications