KSRTC ಸೇವೆ: ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ 'ಈ' ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು, ಮೇ 19: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದೆ. 55 ದಿನಗಳ ಬಳಿಕ ಕರ್ನಾಟಕ ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಪ್ರಾರಂಭವಾಗಿದ್ದು, ಇವತ್ತು 25% ರಷ್ಟು ಬಸ್ ಗಳು ಮಾತ್ರ ರಸ್ತೆಗಿಳಿದಿವೆ.
ಮಾರಣಾಂತಿಕ ಕೋವಿಡ್-19 ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರದ ಕುರಿತು ಸಿಬ್ಬಂದಿಗಳಿಗೆ ನಿಗದಿತ ಕಾರ್ಯಾಚರಣೆ ವಿಧಾನಗಳನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಿದೆ.
ನಿಗದಿತ ಕಾರ್ಯಾಚರಣೆ ವಿಧಾನಗಳ ಅನುಸಾರ ಕೆ.ಎಸ್.ಆರ್.ಟಿ.ಸಿ ಕಾರ್ಯಾಚರಣೆ ನಡೆಸಲಿದ್ದು, ಸಿಬ್ಬಂದಿ ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು ಇಂತಿವೆ:

ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಬೇಕು
* ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಇತರೆ ಸ್ಥಳಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ಮಾರ್ಗ ಮಧ್ಯೆ ನಿಗದಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಇಳಿಸಬಹುದಾಗಿದೆ.
* ಬಸ್ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರಯಾಣಿಕರು ಬಸ್ ಗಳನ್ನು ಹತ್ತುವಾಗ ಮತ್ತು ಟಿಕೆಟ್/ಪಾಸ್ ಗಳನ್ನು ಪಡೆಯುವಾಗ ಕ್ಯೂ ನಲ್ಲಿ ನಿಲ್ಲಬೇಕು.
* ಮಾಸ್ಕ್ ಧರಿಸಿರುವವರಿಗೆ ಮಾತ್ರ ಬಸ್ ಒಳಗೆ ಪ್ರವೇಶ.
* ಸಿಬ್ಬಂದಿಗಳಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಕೆ ಕಡ್ಡಾಯ.

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
* ನಿಗದಿತ ಸಂಖ್ಯೆಯ ಪ್ರಯಾಣಿಕರು ಲಭ್ಯತೆ ಇರುವಂತೆ ಎಚ್ಚರವಹಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿ ಕಡಿಮೆ ಸಂಖ್ಯೆಯ ಪ್ರಯಾಣಿಕರೊಂದಿಗೆ ಸಾರಿಗೆ ಕಾರ್ಯಾಚರಣೆ ಮಾಡುವಂತಿಲ್ಲ.
* ಟಿಕೆಟ್ ವಿತರಿಸುವ ಸಮಯದಲ್ಲೇ ಪ್ರಯಾಣಿಕರ ವಿವರ ಸಂಗ್ರಹ ಮಾಡಬೇಕು. ಜೊತೆಗೆ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು.
* ನಿಗದಿತ ಮಟ್ಟಕ್ಕಿಂತ ಹೆಚ್ಚಿನ ತಾಪಮಾನ ಹೊಂದಿರುವ ಪ್ರಯಾಣಿಕರಿಗೆ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ಇಲ್ಲ. ಹೆಚ್ಚಿನ ತಾಪಮಾನ ಹೊಂದಿರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಡಬೇಕು.

ಭಾನುವಾರ ಸಾರಿಗೆ ಸೇವೆ ಇಲ್ಲ
* ಇಂದಿನಿಂದ ಸಾರಿಗೆ ಸೇವೆಗಳ ಕಾರ್ಯಚರಣೆ ಹಂತ ಹಂತವಾಗಿ ಪ್ರಾರಂಭ
* ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲಾ ಮಾರ್ಗಗಳಲ್ಲಿ ಸಾರಿಗೆ ಸೇವೆ (ಕಂಟೇನ್ಮೆಂಟ್ ಝೋನ್ ಹೊರತು ಪಡಿಸಿ)
* ಅಂತರ ರಾಜ್ಯ ಮಾರ್ಗಗಳಿಗೆ ಸಾರಿಗೆ ಸೇವೆ ಲಭ್ಯವಿಲ್ಲ.
* ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ, ಅಂದು ಸಾರಿಗೆ ಸೇವೆ ಲಭ್ಯವಿಲ್ಲ.
* ಹವಾನಿಯಂತ್ರಿತ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವಂತಿಲ್ಲ.

ರಾತ್ರಿ ಸಂಚಾರ ಇಲ್ಲ
* ಪ್ರಾರಂಭಿಕ ಹಂತದಲ್ಲಿ ಜನದಟ್ಟಣೆ ಇರುವ ವೇಳೆಯಲ್ಲಿ ಹಾಗೂ ಪೀಕ್ ಟೈಮ್/ಹೆಚ್ಚಿನ ಜನದಟ್ಟಣೆ ಇರುವ ಮುಖ್ಯವಾದ ಹೋಬಳಿಗಳಿಂದ ತಾಲ್ಲೂಕು, ತಾಲ್ಲೂಕು-ತಾಲ್ಲೂಕು, ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಗಳು, ಜಿಲ್ಲಾ ಕೇಂದ್ರದಿಂದ ಬೆಂಗಳೂರು ಮಾರ್ಗಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಾರಿಗೆ ಕಾರ್ಯಚರಣೆ.
* ಸದ್ಯಕ್ಕೆ ಅತೀ ದೂರದ ಮಾರ್ಗಗಳ ಸಾರಿಗೆ ಕಾರ್ಯಾಚರಣೆ ಇಲ್ಲ.
* ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ಸಾರಿಗೆ ಸೇವೆ ಇಲ್ಲ.
* ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಆದ್ಯತೆ.
* ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನೇರ ಸಾರಿಗೆ ಕಾರ್ಯಚರಣೆ.
* ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅಳವಡಿಸಲು ಸಾಧ್ಯವಾಗದ ಮಾರ್ಗಗಳಲ್ಲಿ.. ಆಯಾ ಬಸ್ ನಿಲ್ದಾಣಗಳಲ್ಲಿ ಕರೆಂಟ್ ಬುಕ್ಕಿಂಗ್/ಗ್ರೌಂಡ್ ಬುಕ್ಕಿಂಗ್ ವ್ಯವಸ್ಥೆ ಜಾರಿ.












Click it and Unblock the Notifications