ಲಾಕ್ ಡೌನ್ ನಿಯಮ ಸಡಿಲಿಕೆ; ಜನರ ಮೇಲೆ ಕಣ್ಣಿಡಲಿದೆ ಡ್ರೋಣ್
ಬೆಂಗಳೂರು, ಮೇ 03 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಲಾಗಿದ್ದ ಲಾಕ್ ಡೌನ್ ಮೇ 17ರ ತನಕ ವಿಸ್ತರಣೆಯಾಗಿದೆ. ಆದರೆ, ಕೆಲವು ವಲಯಗಳಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಗೊಳಿಸಲಾಗಿದೆ. ಜನರು ಗುಂಪು ಸೇರುವುದರ ಮೇಲೆ ನಿಗಾ ಇಡಲು ಸರ್ಕಾರ ಮುಂದಾಗಿದೆ.
ಲಾಕ್ ಡೌನ್ ನಿಯಮ ಸಡಿಲವಾಗಿದೆ ಎಂದು ಮಾರುಕಟ್ಟೆ ಸೇರಿದಂತೆ ಇತರ ಪ್ರದೇಶಗಳಲ್ಲಿ ಜನರು ಗುಂಪು ಗೂಡುವಂತಿಲ್ಲ. ಲಾಕ್ ಡೌನ್ ಸಡಿಲವಾದರೂ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರಾ, ಸಿಸಿಟಿವಿ ಕ್ಯಾಮರಾ ಮೂಲಕ ಸರ್ಕಾರ ಹದ್ದಿನ ಕಣ್ಣು ಇಡಲಿದೆ. ಜನರು ನಿಯಮ ಉಲ್ಲಂಘನೆ ಮಾಡಿ ಗುಂಪು ಸೇರಿದರೆ ಪೊಲೀಸರಿಗೆ ತಕ್ಷಣ ಮಾಹಿತಿ ಹೋಗಲಿದೆ. ವಿಡಿಯೋ ಚಿತ್ರೀಕರಣ ಸಹ ಆಗಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅಂಗಡಿಗಳ ಮುಂದೆ ಜನರು ಗುಂಪು ಸೇರಿದರೆ ಅಂಗಡಿ ಮಾಲೀಕರಿಗೆ ದಂಡ ಹಾಕಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೂ ತೆಗೆದುಕೊಳ್ಳಲಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. "ವೈರಸ್ ಹರಡದಂತೆ ತಡೆಯಲು ಜನರು ಗುಂಪು ಗೂಡುವುದನ್ನು ತಪ್ಪಿಸಬೇಕಿದೆ. ಜಿಲ್ಲಾ ಹಂತಕ್ಕೂ 9 ಅಂಶಗಳ ಮಾರ್ಗಸೂಚಿ ಕಳಿಸಲಾಗಿದೆ" ಎಂದು ಹೇಳಿದ್ದಾರೆ.
ಡ್ರೋಣ್ ಕ್ಯಾಮರಾ ಮೂಲಕ ಸೆರೆ ಹಿಡಿದ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಲು ತಂಡವನ್ನು ರಚನೆ ಮಾಡಲಾಗಿದೆ. ಪ್ರತಿದಿನ ಈ ತಂಡ ದೃಶ್ಯಗಳನ್ನು ನೋಡಲಿದ್ದು, ಎಲ್ಲೆಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ ಎಂಬ ಮಾಹಿತಿ ಸಂಗ್ರಹಿಸಲಿದೆ.
ರಿಟೇಲ್ ಮಾರುಕಟ್ಟೆ, ಆಹಾರ ಪದಾರ್ಧ ಮಾರುವ ಅಂಗಡಿ, ತರಕಾರಿ ಅಂಗಡಿ, ದಿನಸಿ ಅಂಗಡಿ, ಹಾಲಿನ ಬೂತ್ಗಳ ಬಳಿಕ ಜನದಟ್ಟಣೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ. ಮಾಲೀಕರು ಜನರು ಗುಂಪು ಗೂಡಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಬೇಕು.
ಜಿಲ್ಲೆಗಳಲ್ಲಿಯೂ ಸಹ ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಯಾವ ರೀತಿ ದೃಶ್ಯಾವಳಿಗಳನ್ನು ಚಿತ್ರೀಕರಿಸಬೇಕು ಎಂದು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.












Click it and Unblock the Notifications