ಮುದ್ರಾ ಯೋಜನೆಯಡಿ ಸಾಲ; ದೇಶದಲ್ಲಿ ಕರ್ನಾಟಕ ನಂಬರ್ 1
ಬೆಂಗಳೂರು, ಡಿಸೆಂಬರ್ 01: ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಯಡಿ ಸಾಲ ನೀಡಿದ್ದರಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಸ್ಥಾನದಲ್ಲಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ನಂತರದ ಸ್ಥಾನದಲ್ಲಿವೆ.
ಸೆಪ್ಟೆಂಬರ್ 18ರ ತನಕ ಕರ್ನಾಟಕ 6,906.12 ಕೋಟಿ ರೂ. ಸಾಲವನ್ನು ನೀಡಿದೆ. ಪಿಎಂಎಂವೈ ಅಡಿ ನಾನ್ ಕಾರ್ಪೋರೇಟ್, ನಾನ್ ಫಾರ್ಮ್ ಚಿಕ್ಕ/ಸೂಕ್ಷ್ಮ ಉದ್ಯಮಕ್ಕಾಗಿ 10 ಲಕ್ಷದಷ್ಟು ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಈ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನ 6,405,.69 ಕೋಟಿ, ಉತ್ತರ ಪ್ರದೇಶ ರಾಜ್ಯ 6,068.23 ಕೋಟಿ, ಮಹಾರಾಷ್ಟ್ರ 5,153.62 ಕೋಟಿ ರೂ. ಸಾಲವನ್ನು ಸೆಪ್ಟೆಂಬರ್ ತನಕ ನೀಡಿವೆ.

ಕರ್ನಾಟಕದಲ್ಲಿನ ವಿವಿಧ ರಾಷ್ಟ್ರೀಯ ಬ್ಯಾಂಕ್ಗಳು 9,75,873 ಫಲಾನುಭವಿಗಳಿಗೆ ಸಾಲವನ್ನು ನೀಡಿವೆ. ಮುದ್ರಾ ಯೋಜನೆಯಡಿ ಸಾಲ ನೀಡಲು ಬ್ಯಾಂಕ್ಗಳ ಸಹಕಾರ ಸಹ ಮುಖ್ಯವಾಗಿದೆ. ಬ್ಯಾಂಕ್ ಸಿಬ್ಬಂದಿ ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ.
ಹಲವು ಹೊಸ ಸ್ಟಾರ್ಟ್ ಅಪ್ಗಳು, ಈಗಿರುವ ಉದ್ಯಮಗಳ ಅಭಿವೃದ್ಧಿ, ಹೊಸ ಉದ್ಯಮ ಸ್ಥಾಪನೆಗೆ ಸಹ ಸಾಲವನ್ನು ಈ ಯೋಜನೆಯಡಿ ನೀಡಲಾಗಿದೆ. ಒಟ್ಟು ಮೂರು ಹಂತದಲ್ಲಿ ಈ ಯೋಜನೆಯಡಿ ಸಾಲವನ್ನು ನೀಡಲಾಗಿದೆ.
'ಶಿಶು' ಯೋಜನೆಯಡಿ 6,92,502 ಜನರು 50 ಸಾವಿರ ರೂ. ತನಕ ಸಾಲವನ್ನು ಪಡೆದಿದ್ದಾರೆ. 'ಕಿಶೋರ' ಯೋಜನೆಯಡಿ 2,58,433 ಜನರು 50 ಸಾವಿರದಿಂದ 5 ಲಕ್ಷದ ತನಕ ಸಾಲವನ್ನು ಪಡೆದಿದ್ದಾರೆ. 'ತುರಣ' ಯೋಜನೆಯಡಿ 5 ರಿಂದ 10 ಲಕ್ಷದ ತನಕ 24,938 ಜನರು ಸಾಲ ಪಡೆದಿದ್ದಾರೆ.
ಬೆಳಗಾವಿ ಹೆಚ್ಚು ; ಮುದ್ರಾ ಯೋಜನೆಯಡಿ ಸಾಲ ಪಡೆದವರ ಪೈಕಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. 77,989 ಜನರು ಜಿಲ್ಲೆಯಲ್ಲಿ ಸಾಲ ಪಡೆದಿದ್ದಾರೆ. ಇವರಲ್ಲಿ ಶೇ 20 ರಿಂದ 25ರಷ್ಟು ಜನರು ಹೊಸ ಉದ್ಯಮ ಸ್ಥಾಪನೆ ಮಾಡಲು ಸಾಲ ಪಡೆದಿದ್ದಾರೆ.












Click it and Unblock the Notifications