ಜಾರ್ಜ್ ರಾಜೀನಾಮೆಗೆ ವಿಪಕ್ಷಗಳ ಬಿಗಿ ಪಟ್ಟು
ಬೆಂಗಳೂರು, ಜುಲೈ 14 : 'ಸಚಿವ ಜಾರ್ಜ್ ರಾಜೀನಾಮೆ ಬೇಕು', 'ಸಚಿವರ ರಾಜೀನಾಮೆ ಬೇಕು' ಎಂಬ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ವಿಧಾನಸಭೆ ಕಲಾಪದಲ್ಲಿ ಕೆಲವು ವಿಧೇಯಕಗಳನ್ನು ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಯಿತು. ಆದರೆ, ಗದ್ದಲ ಹೆಚ್ಚಾಗಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ವಿಧಾನಪರಿಷತ್ ಕಲಾಪದಲ್ಲಿ ಗದ್ದಲ ತೀವ್ರಗೊಂಡಿದ್ದು, ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಗುರುವಾರವೂ ಪರಿಷತ್ ಕಲಾಪ ಒಂದು ಗಂಟೆಯೂ ನಡೆದಿರಲಿಲ್ಲ. ಗಣಪತಿ ಪ್ರಕರಣದ ಸಿಬಿಐ ತನಿಖೆ ಮತ್ತು ಸಚಿವ ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. [ಗದ್ದಲದ ನಡುವೆಯೇ ಪರಿಷತ್ತಿನಲ್ಲಿ 3 ವಿಧೇಯಕಗಳಿಗೆ ಒಪ್ಪಿಗೆ]

ಹಿಂದಿನ ಸುದ್ದಿ : ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಡೆಸುತ್ತಿರುವ ಧರಣಿ ಮುಂದುವರೆದಿದೆ.[ಒಂದು ದಿನದ ಕಲಾಪಕ್ಕೆ ಲಕ್ಷ-ಲಕ್ಷ ವೆಚ್ಚ, ಚರ್ಚೆ ಶೂನ್ಯ]
ಕೈಗೆ ಕಪ್ಪುಪಟ್ಟು ಧರಿಸಿಕೊಂಡು ವಿಧಾನಸೌಧ ಮತ್ತು ವಿಕಾಸಸೌಧದ ಮುಂದಿನ ಗಾಂಧಿ ಪ್ರತಿಮೆ ಬಳಿ ಸದಸ್ಯರು ಗುರುವಾರ ರಾತ್ರಿ ಧರಣಿ ನಡೆಸಿದರು. ಶುಕ್ರವಾರ ಬೆಳಗ್ಗೆಯೂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದ್ದಾರೆ.

'ಎಂ.ಕೆ.ಗಣಪತಿ ಪತ್ನಿ ಪಾವನ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಬಿಐ ತನಿಖೆಯ ಬಗ್ಗೆ ಪತ್ರ ಬರೆದಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಜೊತೆ ನಾನು ಈ ಕುರಿತು ಚರ್ಚೆ ನಡೆಸಿದ್ದೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಹೇಳಿದರು.













Click it and Unblock the Notifications